ಯಾದಗಿರಿ: ‘ಅರಕೇರಾ (ಕೆ) ಗ್ರಾಮದಲ್ಲಿ ಕುಡಿಯುವ ನೀರಿನ ಅಭಾವ, ಅಂಗನವಾಡಿ ಅವ್ಯವಸ್ಥೆ, ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ.. ಹೀಗೆ ನೂರಾರು ಸಮಸ್ಯೆಗಳಿದ್ದು, ಇನ್ನು ತಿಂಗಳ ಅವಧಿಯಲ್ಲಿ ಸಮಸ್ಯೆಗಳಿಗೆ ಪರಿಹಾರ ಒದಗಿಸದಿದ್ದರೆ ಜಿಲ್ಲಾ ಪಂಚಾ ಯಿತಿಗೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಜೆಡಿಎಸ್ ಜಿಲ್ಲಾ ಕಾರ್ಮಿಕ ವಿಭಾಗದ ಅಧ್ಯಕ್ಷ ಭೀಮರಾಯ ಭಂಡಾರಿ ಎಚ್ಚರಿಕೆ ನೀಡಿದರು.
‘ಗ್ರಾಮದ ಅಂಗನವಾಡಿ ಕೇಂದ್ರದ ಬಳಿ ಹೊಂಡ ಇದ್ದು, ಅಪಾಯ ಆಹ್ವಾನಿಸಿದೆ. ಪ್ರಾಥಮಿಕ ಶಾಲೆಗೆ ಆವರಣ ಗೋಡೆ ಇಲ್ಲದೇ ಇರುವುದರಿಂದ ಬಿಸಿಯೂಟ ತಿನ್ನಲು ಕುಳಿತ ಮಕ್ಕಳ ತಟ್ಟೆಗೆ ಹಂದಿಗಳು ನುಗ್ಗಿ ಬಾಯಿ ಹಾಕುತ್ತಿವೆ. ಕುಡಿಯುವ ನೀರಿನ ಘಟಕಗಳು ಆರಂಭಗೊಂಡಿಲ್ಲ. ಇಂಥಾ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ಎರಡು ವರ್ಷಗಳಿಂದ ಅಧಿಕಾರಿ, ಶಾಸಕರ ಕಚೇರಿಗಳಿಗೆ ಅಲೆದರೂ ಪ್ರಯೋಜನವಾಗಿಲ್ಲ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.
‘ಗ್ರಾಮಸ್ಥರು ನಿತ್ಯ ಅನಿವಾರ್ಯವಾಗಿ ಸಮಸ್ಯೆಗಳನ್ನು ಎದುರಿಸಿ ಬೇಸತ್ತಿದ್ದಾರೆ. ಜೆಡಿಎಸ್ ಕಾರ್ಮಿಕ ವಿಭಾಗದ ನೇತೃತ್ವದಲ್ಲಿ ಗ್ರಾಮಸ್ಥರು ಜಿಲ್ಲಾಕೇಂದ್ರದಲ್ಲಿನ ಜಿಲ್ಲಾ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ’ ಎಂದರು.
ಹಾಲಗೇರಾ ತಾಲ್ಲೂಕು ಪಂಚಾಯಿತಿ ಸದಸ್ಯ ಮರಲಿಂಗಪ್ಪ ಕುಮನೂರು, ಜೆಡಿಎಸ್ ರಾಜ್ಯ ಕಾರ್ಮಿಕ ವಿಭಾಗದ ಉಪಾಧ್ಯಕ್ಷ ಸುಭಾಷ ಹೆಡಿಗಿಮುದ್ರಿ, ಜೆಡಿಎಸ್ ಯುವ ಮುಖಂಡ ವಿನೋದ್ಕುಮಾರ ತಳಕ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.