ADVERTISEMENT

ಅರಸು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯಿರಿ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2011, 7:00 IST
Last Updated 22 ಆಗಸ್ಟ್ 2011, 7:00 IST
ಅರಸು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯಿರಿ
ಅರಸು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯಿರಿ   

ಯಾದಗಿರಿ: ಹಿಂದುಳಿದ ವರ್ಗಗಳ ಸರ್ವಾಂಗೀಣ ಅಭಿವೃದ್ಧಿಯ ಬಗ್ಗೆ ಚಿಂತನೆ ನಡೆಸುವ ಮೂಲಕ ಅದನ್ನು ಕಾರ್ಯರೂಪಕ್ಕೆ ತಂದ ಮೇಧಾವಿ ರಾಜಕಾರಣಿ ದಿ. ಡಿ. ದೇವರಾಜ ಅರಸು ಎಂದು ಶಾಸಕ ಡಾ.ಎ.ಬಿ. ಮಾಲಕರೆಡ್ಡಿ ಹೇಳಿದರು.

ಕೋಲಿ ಸಮಾಜದ ವತಿಯಿಂದ ನಗರದ ಗಂಗಾ ಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ಮಾಜಿ ಮುಖ್ಯಮಂತ್ರಿ ದಿ. ಡಿ. ದೇವರಾಜ ಅರಸು ಜಯಂತ್ಯುತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದುಳಿದ ವರ್ಗ, ಬಡಜನತೆಯ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ದೇವರಾಜ ಅರಸು, ಹಿಂದುಳಿದ ಜನರನ್ನು ಮುಖ್ಯವಾಹಿನಿಗೆ ಕರೆತರುವಲ್ಲಿ ಅಪಾರ ಶ್ರಮ ವಹಿಸಿದ್ದಾರೆ. ಅವರ ವ್ಯಕ್ತಿತ್ವ, ಹಾಕಿಕೊಟ್ಟಿರುವ ದಾರಿಯಲ್ಲಿ ಮುನ್ನಡೆಯುವುದು ಅವಶ್ಯಕವಾಗಿದೆ ಎಂದು ಅಭಿಪ್ರಾಯಪಟ್ಟರು.

ತಾಲ್ಲೂಕಿನಾದ್ಯಂತ ಭಾರಿ ಜನಸಂಖ್ಯೆ ಹೊಂದಿರುವ ಕೋಲಿ ಸಮಾಜವು ಅನೇಕ ಜನಪರ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಸಂತಸದ ಸಂಗತಿ. ಸಮಾಜ ಜನರ ಸಮಸ್ಯೆಗೆ ತಾವು ಸದಾ ಸ್ಪಂದಿಸುವುದಾಗಿ ಭರವಸೆ ನೀಡಿದರು.

ಕೋಲಿ ಸಮಾಜದಿಂದ ಅನುದಾನ ಬೇಡಿಕೆಗೆ ಸ್ಪಂದಿಸಿದ ಡಾ. ಮಾಲಕರೆಡ್ಡಿ, ಮುಂದಿನ ದಿನಗಳಲ್ಲಿ ಯಾವುದೇ ಅಭಿವೃದ್ಧಿ ಅನುದಾನ ಬಂದಾಗ ಖಂಡಿತವಾಗಿಯೂ ನೀಡುವುದಾಗಿ ತಿಳಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಅನಸೂಯಾ ಬೋರಬಂಡ್,

ನಗರಸಭೆ ಅಧ್ಯಕ್ಷೆ ನಾಗರತ್ನಾ ಅನಪೂರ, ಜಿಲ್ಲಾ ಪಂಚಾಯಿತಿ ಸದಸ್ಯೆ ಚನ್ನಬಸಮ್ಮ ಸೋಮಣ್ಣೋರ್, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಶರಣಪ್ಪ ಮೋಟ್ನಳ್ಳಿ, ಸಣ್ಣ ಹನುಮಂತಪ್ಪ ಬೋಯಿನ್, ತಾಯಪ್ಪ ದೊಬ್ಬಲ್, ಲಕ್ಷ್ಮಿ ಚಂಡ್ರಕಿ, ಮಾನಪ್ಪ ಸುಗೂರ, ಯಮನಪ್ಪ ಚಿಗರಿ, ನೀಲಮ್ಮ ಬಸವರಾಜ, ಶರಣಬಸಮ್ಮಾ ನಾಟೇಕಾರ, ನೌಕರರ ಸಂಘದ ಮನೋಹರ ವಡಿಗೇರಿ, ಎಪಿಎಂಸಿ ಸದಸ್ಯ ಬಸವರಾಜ ಗಟರೆಡ್ಡಿ, ಮಲ್ಲಿಕಾರ್ಜುನ ಮಾರ್ತಾಂಡಪ್ಪ ಅವರನ್ನು ಸನ್ಮಾನಿಸಲಾಯಿತು.

ಕೋಲಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಮೌಲಾಲಿ ಅನಪೂರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಾಯಿಬಣ್ಣ ಬೋರಬಂಡ್, ತಾಲ್ಲೂಕು ಘಟಕದ ಅಧ್ಯಕ್ಷ ಮೂರ್ತಿ ಅನಪೂರ, ಭೀಮರಾಯ ಠಾಣಗುಂದಿ, ಮುಂತಾದವರು ವೇದಿಕೆಯಲ್ಲಿದ್ದರು. ಜಿಲ್ಲಾ ಘಟಕದ ಉಪಾಧ್ಯಕ್ಷ ರಮೇಶ ನೀರಟ್ಟಿ ನಿರೂಪಿಸಿದರು. ಸಾಯಬಣ್ಣ ಯರಗೋಳ ಸ್ವಾಗತಿಸಿದರು. ಸಿ.ಎಂ. ಪಟ್ಟೇದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲಪ್ಪ ಪುಟ್ಟಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.