ADVERTISEMENT

`ಕಾನೂನು ಅರಿವಿನ ಕೊರತೆ ಭ್ರಷ್ಟಾಚಾರಕ್ಕೆ ನಾಂದಿ'

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2013, 10:33 IST
Last Updated 1 ಏಪ್ರಿಲ್ 2013, 10:33 IST

ಶಹಾಪುರ:  ಕಾನೂನು ಅರಿವಿನ ಕೊರತೆಯಿಂದ ಭ್ರಷ್ಟಾಚಾರದ ಪಿಡುಗು ನಮ್ಮನ್ನು ಹೈರಾಣಗೊಳಿಸುತ್ತಿದೆ. ಕಳಪೆ ಬೀಜಗಳನ್ನು ತಂದು ಬಿತ್ತನೆ ಮಾಡಿ ನಷ್ಟ ಅನುಭವಿಸಿದ ರೈತರು ನಂತರ  ಅಸಹಾಯಕತೆಯಿಂದ ಕೈ ಚೆಲ್ಲುತ್ತಾರೆ. ಕಾನೂನು ಅರಿವು ನಮಗಿದ್ದರೆ ಗ್ರಾಹಕರ ವೇದಿಕೆಯ ಮೂಲಕ ಪರಿಹಾರವನ್ನು ಪಡೆದುಕೊಳ್ಳಲು ಅವಕಾಶವಿದೆ. ಜ್ಞಾನವನ್ನು ಸಂಪಾದನೆಯ ಜೊತೆಗೆ ಕಾನೂನು ಜ್ಞಾನವನ್ನು ಬೆಳೆಸಿಕೊಳ್ಳಬೇಕೆಂದು ವಕೀಲ ಶಿವಕುಮಾರ ಗುಬ್ಬಿ ಹೇಳಿದರು.

ತಾಲ್ಲೂಕಿನ ಕೊಂಕಲ್ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಭಾನುವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲ್ಲೂಕು ಸೇವಾ ಸಮಿತಿ, ನಿಸರ್ಗ ಸಂಸ್ಥೆ, ಕೆ.ಆರ್.ನಾರಾಯಣ ಗ್ರಾಮೀಣಾಭಿವೃದ್ದಿ ಸಂಸ್ಥೆ, ಪೊಲೀಸ್ ಇಲಾಖೆ, ಕಂದಾಯ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾನೂನು ಸಾಕ್ಷರತಾ ಜಾಥಾದ ಎರನೇಯ ದಿನದ ಕಾರ್ಯಕ್ರಮದಲ್ಲಿ ಕಾನೂನು ಅರಿವು-ನೆರವಿನ ಕುರಿತು ಮಾತನಾಡಿದರು.

ಉಪನ್ಯಾಸಕ ವೆಂಕಣ್ಣಡೊಣ್ಣೆಗೌಡರ ಮಾತನಾಡುತ್ತಾ, ಶ್ರಮವಹಿಸಿ ದುಡಿಯುವ ರೈತ ದೇಶದ ಮೊದಲಿಗನಾದರೆ ಅದನ್ನು ಅನುಭವಿಸುವಾಗ ಮಾತ್ರ ಕಟ್ಟಕಡೆಯ ವ್ಯಕ್ತಿಯಾಗಿದ್ದಾನೆ. ಗ್ರಾಮೀಣ ಪ್ರದೇಶ ಹಳ್ಳಿಯ ಮುಗ್ದ ಜನತೆ ಹೆಚ್ಚು ಮೋಸ ಹಾಗೂ ಶೋಷಣೆಗೆ ಒಳಗಾಗುತ್ತಿರುವುದು ಕಾನೂನು ಅರಿವಿನ ಕೊರತೆಯಾಗಿದೆ.  ಹಳ್ಳಿಗಾಡಿನಲ್ಲಿ ಹೆಚ್ಚಿನ ಜನಗೆ ಭಯದ ವಾತಾವರಣದಲ್ಲಿ ಜೀವನ ನಿರ್ವಹಿಸುಲು ಮುಖ್ಯ ಕಾರಣ ಅರಿವಿನ ಕೊರತೆ. ಕಾನೂನು ಅರಿತುಕೊಂಡರೆ ನಾವು ಯಾರಿಗೂ ಹೆದರುವ ಅಗತ್ಯವಿಲ್ಲ. ಪ್ರಶ್ನಿಸುವ ಎದೆಗಾರಿಕೆ ಬರುತ್ತದೆ ಎಂದು ಅವರು ಹೇಳಿದರು.

ವಕೀಲೆ ಸತ್ಯಮ್ಮ ಹೊಸ್ಮನಿಯವರು ಜನನ ಮತ್ತು ಮರಣ ಅಧಿನಿಯಮ ಕಾಯ್ದೆ, ಅಂಬರೇಶ ಇಟಗಿ ಬಾಲ ಕಾರ್ಮಿಕರ ಅಧಿನಿಯಮದ ಬಗ್ಗೆ
ವಿಶೇಷ ಉಪನ್ಯಾಸ ನೀಡಿದರು.ಸಭೆಯಲ್ಲಿ ನೂತನ ವಕೀಲರ ಪರಿಷತ್ ಅಧ್ಯಕ್ಷ ಶಿವಶರಣಪ್ಪ ಹೊತಪೇಟ, ಹಿರಿಯ ವಕೀಲ ಭಾಸ್ಕರರಾವ ಮುಡಬೂಳ, ಪಿಡಿಓ ಗಿರಿಮಲ್ಲಪ್ಪ, ಮಲ್ಲಯ್ಯ ಪೊಲಂಪಲ್ಲಿ, ಉಮೇಶ ಕುಲಕರ್ಣಿ, ಗ್ರಾಮದ ಮುಖಂಡರಾದ ಚಾಂದಪಾಶ ರಂಗಂಪೇಟ, ಬಸಣ್ಣಗೌಡ, ಮತ್ತಿತರರು ಉಪಸ್ಥಿತರಿದ್ದರು. ನಂತರ ಜಾಥಾವು ಕಿರಿ ಹೈಯ್ಯಾಳ, ಗೊಂದೆನೂರ ಗ್ರಾಮದಲ್ಲಿ ಸಂಚರಿಸಿ ಕಾನೂನು ಅರಿವು ನೆರವು ಮಾಹಿತಿ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.