
ಕೆಂಭಾವಿ: ಪಟ್ಟಣದ ಹಳೇಬಸ್ ನಿಲ್ದಾಣದಲ್ಲಿ ಬುಧವಾರ ಮಂಗವೊಂದು ಮೃತಪಟ್ಟಿದ್ದು, ಬಡಾವಣೆಯ ಜನ ಮೆರವಣಿಗೆ ಮಾಡಿ ಅಂತ್ಯ ಸಂಸ್ಕಾರ ನಡೆಸಿದರು.
ಕಳೆದ ಹಲವು ವರ್ಷಗಳಿಂದ ಬಡಾವಣೆಯಲ್ಲಿಯೇ ವಾಸವಾಗಿದ್ದ ಈ ಮಂಗ, ದಿನವಿಡೀ ಎಲ್ಲಿ ಸುತ್ತಿದರೂ ರಾತ್ರಿಯಾಗುತ್ತಿದಂತೆಯೇ ಬಡಾವಣೆಯಲ್ಲಿ ಕಾಣಿಸಿಕೊಳ್ಳುತ್ತಿತ್ತು ಎಂದು ಕುಮಾರ ಹೇಳುತ್ತಾರೆ.
ಈವರೆಗೂ ಯಾರೊಬ್ಬರಿಗೂ ಕಾಟ ನೀಡದ ಈ ಮಂಗ ಬಡಾವಣೆಯ ಜನರ ಗೆಳೆಯನಾಗಿತ್ತು. ಕೆಲ ದಿನಗಳ ಹಿಂದೆ ನಾಯಿಯೊಂದು ಕಚ್ಚಿದ್ದರಿಂದ ಈ ಮಂಗ ಅನಾರೋಗ್ಯದಿಂದ ಬಳಲುತ್ತಿತ್ತು. ವೈದ್ಯರಿಂದ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಬುಧವಾರ ಮೃತಪಟ್ಟಿದೆ ಎಂದು ಬಡಾವಣೆಯ ಜನ ಹೇಳುತ್ತಾರೆ.
ಮೃತಪಟ್ಟ ಮಂಗ ಹನುಮಾನ ದೇವರ ಸ್ವರೂಪ ಎಂದು ತಿಳಿದ ಜನ ಅದ್ದೂರಿ ಮೆರವಣಿಗೆ ಮಾಡಿದರು. ಟಂಟಂ ಮೇಲೆ ಕೂರಿಸಿ ಬಡಾವಣೆಯ ನೂರಾರು ಯುವಕರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.
ಮಂಗ ಮೃತಪಟ್ಟ ಸ್ಥಳದಲ್ಲಿಯೇ ಅಂತ್ಯ ಸಂಸ್ಕಾರ ನಡೆಸಿದ ಯುವಕರು, ಅದೇ ಸ್ಥಳದಲ್ಲಿ ಆಂಜನೇಯ ದೇವಸ್ಥಾನ ನಿರ್ಮಿಸುವುದಾಗಿ ಹೇಳಿದರು.
ನಿಂಗಪ್ಪ ಕುಂಬಾರ, ಗುರು ಕುಂಬಾರ, ತಿಪ್ಪಣ್ಣ ಕುಂಬಾರ, ಭೋಗಪ್ಪ ಗುಬ್ಯಾಡ, ಸಂಗಯ್ಯ ಮುತ್ಯಾ, ಮಲ್ಲಯ್ಯ ಸ್ವಾಮಿ, ಶಿವು ತುಂಬಗಿ, ಸಂಜೀವರೆಡ್ಡಿ, ಭೀಮನಗೌಡ ಕಾಚಾಪುರ ಶ್ರೀಶೈಲ ಮುಂತಾದವರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.