ADVERTISEMENT

ಕೊಡೇಕಲ್ಲ: ಕುಡಿಯುವ ನೀರಿಗಾರಿ ಪರದಾಟ

​ಪ್ರಜಾವಾಣಿ ವಾರ್ತೆ
Published 5 ಜುಲೈ 2012, 8:20 IST
Last Updated 5 ಜುಲೈ 2012, 8:20 IST

ಹುಣಸಗಿ: ಜಿಲ್ಲಾ ಉಸ್ತುವಾರಿ ಸಚಿವ ರಾಜುಗೌಡ ಅವರ ತವರು ಗ್ರಾಮದಲ್ಲಿಯೇ ಕುಡಿಯುವ ನೀರಿಗಾಗಿ ಪರಿ ತಪಿಸುವಂತಾಗಿದೆ. ಸಮೀಪದ ಕೊಡೇಕಲ್ಲ ಗ್ರಾಮದ ದಲಿತರ ವಾರ್ಡನಲ್ಲಿ ಕಳೆದ ಸುಮಾರು ಐದು ತಿಂಗಳಿನಿಂದ ಕುಡಿಯುವ ನೀರಿನ ತೊಂದರೆ ಅನುಭವಿಸುವಮಾತಗಿದೆ ಎಂದು ವಾರ್ಡ ಮಹಿಳೆಯರು ಆರೋಪಿಸುತ್ತಾರೆ.

ಈ ಕುರಿತು ಮಂಗಳವಾರ ಮಾತನಾಡುತ್ತಾ, ಕುಡಿಯುವ ನೀರು ಪ್ರತಿ ದಿನ ಬರುತ್ತವೆಯಾದರೂ ಸರಿಯಾಗಿ ಬರುವದಿಲ್ಲ. ನಾಲ್ಕೈದು ಕೊಡ ಬಂದು ನಂತರ ನೀರು ಬರುದಿಲ್ಲ ಹಲವಾರು ಬಾರಿ ಗ್ರಾಮ ಪಂಚಾಯಿತಿಯ ಅಧಿಕಾರಿಗಳಿಗೆ ಮತ್ತು ಚುನಾಯಿತ ಸದಸ್ಯರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಕೇರಿಯ ಮಹಿಳೆ ನಾಗಮ್ಮ ಮತ್ತು ಹನುಮಂತ ಹೊಸಮನಿ ಆಪಾದಿಸಿದರು.

ಕಳೆದ 10 ವರ್ಷಗಳ ಹಿಂದೆ ಗ್ರಾಮದ ಜಕಣಿ ಬಾವಿಯಿಂದ ದಲಿತರ ವಾರ್ಡ ನೇರವಾಗಿ ಸಂಪರ್ಕ ಕಲ್ಪಿಸಿ ಮೂರು ಗುಮ್ಮಿಗಳಲ್ಲಿ ಸುಮಾರು 70 ಮನೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.
ಆದರೆ  ಕಳೆದ ಕೆಲವು ತಿಂಗಳಿನಿಂದ ಈ ಪೈಪ್‌ಲೈನ್‌ಗೆ ಗ್ರಾಮದ ಪ್ರಮುಖರ ಮನೆಗಳಿಗೆ ಅಕ್ರಮವಾಗಿ ಸಂಪರ್ಕ ಕಲ್ಪಿಸಿದರ ಫಲವಾಗಿ  ನಮಗೆ ನೀರು ಬರುತ್ತಿಲ್ಲ ಎಂದು ಬಸವರಾಜ ಮ್ಯಾಗೇರಿ, ಅಲವಪ್ಪ ಕಟ್ಟಿಮನಿ ದೂರಿದರು.

ಹಲವಾರು ಬಾರಿ ಗ್ರಾಮ ಪಂಚಾಯಿತಿಗೆ ತೆರಳಿ ಮನವಿ ಮಾಡಿದರೂ ನಮ್ಮ ಕೂಗು ಅರಣ್ಯ ರೋದನವಾಗಿದೆ ಯಾವದೇ ಪ್ರಯೋಜನವಾಗಿಲ್ಲ. ಈ ಮೂರು ಗುಮ್ಮಿಗಳಲ್ಲಿಯೂ ಹನಿ ನೀರು ಬರುತ್ತಲೇ ಇಲ್ಲ.  ಇನ್ನೂ ನೀರಿಗಾಗಿ ಸುಮಾರು ಒಂದು ಕಿ.ಮಿ ತೆರಳಿ ಖಾಸಗಿ ಬಾವಿಯಿಂದ ನೀರು ತರುವ ಅನಿವಾರ್ಯತೆ ಇದೆ. ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಿ ನೀರಿನ ವ್ಯವಸ್ಥೆ ಕಲ್ಪಿಸಲಿ ಅಥವಾ ಬೋರವೆಲ್ ಹಾಕಿಸಿಯಾದರೂ ನೀರು ಕೊಡಲು ಮುಂದಾಗಲಿ ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.