ADVERTISEMENT

ಕ್ಷೀಣಿಸುತ್ತಿರುವ ಹೆಣ್ಣು ಸಂತಾನದ ಸಂಖ್ಯೆ: ಕಳವಳ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2012, 9:58 IST
Last Updated 27 ಡಿಸೆಂಬರ್ 2012, 9:58 IST

ಯಾದಗಿರಿ: ಆರ್ಥಿಕವಾಗಿ, ರಾಜಕೀಯವಾಗಿ ಸಾಕಷ್ಟನ ಸಾಧನೆ ಮಾಡಿದರೂ, ಹೆಣ್ಣಿಲ್ಲದಿದ್ದರೆ ಕೌಟುಂಬಿಕ ಸಾಧನೆ ಅಪೂರ್ಣ. ಇದು ತಿಳಿದಿದ್ದರೂ ನಾವು ಹೆಣ್ಣನ್ನು ಪುರುಷನ ಅಡಿಯಾಳು ಎನ್ನುವಂತೆ ನೋಡಿದ್ದೇವೆ. ಏಷ್ಯಾದ ಪ್ರಮುಖ ರಾಷ್ಟ್ರಗಳಲ್ಲಿ ಹೆಣ್ಣಿನ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ವಿಶ್ವಸಂಸ್ಥೆಯ ಅಂಕಿ ಅಂಶಗಳ ಪ್ರಕಾರ ಭಾರತ ಹೆಣ್ಣು ಭ್ರೂಣ ಹತ್ಯೆಯಲ್ಲಿ ಹತ್ತನೇ ಸ್ಥಾನ ಹೊಂದಿದೆ ಎಂದು ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಕೆ.ಎಂ. ಪಟೇಲ್ ಹೇಳಿದರು.

ಪ್ರಾಥಮಿಕ ಆರೋಗ್ಯ ಕೇಂದ್ರ ಗೋಗಿಯ ವತಿಯಿಂದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಪ್ರಸವಪೂವ ಭ್ರೂಣ ಲಿಂಗಪತ್ತೆ ಶಹಾಪುರ ತಾಲ್ಲೂಕಿನ ಗೋಗಿ ಪ್ರಾಥಮಿಕ ಕೇಂದ್ರದ ವತಿಯಿಂದ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ತಂತ್ರ ನಿಷೇಧ ಕಾಯ್ದೆ ಕುರಿತಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈಗಲಾದರೂ ಪ್ರಸವಪೂರ್ವ ಲಿಂಗ ಪತ್ತೆ ಹಾಗೂ ಹೆಣ್ಣು ಭ್ರೂಣ ಹತ್ಯೆಯನ್ನು ಕೈಬಿಟ್ಟು ಹೆಣ್ಣನ್ನು ಕೂಡಾ ಗಂಡಿನಂತೆ ಸಲುಹಬೇಕು ಎಂದು ಸಲಹೆ ನೀಡಿದರು.

ಉಪನ್ಯಾಸ ನೀಡಿದ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸಿದ್ಧರಾಮ ಹೊನ್ಕಲ್, ಸಾಕ್ಷರತೆಯಲ್ಲಿ, ಜೀವನ ಶೈಲಿಯಲ್ಲಿ, ಕುಟುಂಬದ ತಲಾ ಆದಾಯದಲ್ಲಿ ಮುಂದುವರಿದ ವರ್ಗ ಎಂದು ಯಾರನ್ನು ಪರಿಗಣಿಸುತ್ತೇವೆಯೋ ಅಂತಹ ವರ್ಗದಲ್ಲಿಯೇ ಭ್ರೂಣ ಪರೀಕ್ಷೆ ಮತ್ತು ಹೆಣ್ಣು ಭ್ರೂಣ ಹತ್ಯೆಯಂತಹ ಹೇಯ ಕೆಲಸ ನಡೆಯುತ್ತಿದೆ. ಇಂತಹ ಕಾರ್ಯದಿಂದಾಗಿ ಸಮಾಜದ ಕೆಲ ಸಮುದಾಯಗಳಲ್ಲಿ ಮದುವೆಗಾಗಿ ಹೆಣ್ಣು ಸಿಗದ ಪರಿಸ್ಥಿತಿ ಉಂಟಾಗಿದೆ. ಮುಂದೆ ಬರಬಹುದಾದ ಕೆಟ್ಟ ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು ಲಿಂಗ ಪರೀಕ್ಷೆಯನ್ನು ವ್ಯಾಪಕವಾಗಿ ತಡೆಗಟ್ಟಬೇಕಾಗಿದೆ ಎಂದು ವಿವರಿಸಿದರು.

ವೈದ್ಯಾಧಿಕಾರಿ ಡಾ.ವೆಂಕಟೇಶ ಶಿರವಾಳಕರ, ಆರೋಗ್ಯ ಇಲಾಖೆಯ ಕಾರ್ಯಕ್ರಮಗಳು ಮತ್ತು ಸೌಲಭ್ಯಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು.

ಪದವಿಪೂರ್ವ ಕಾಲೇಜಿನ ಪ್ರೊ.ಪಂಪಾಪತಿ ಶಿರ್ಣಿ, ಗುರುಲಿಂಗಪ್ಪ, ಜಾನ್ ರಾಜಕುಮಾರ, ಕೆ.ಆರ್.ಮುಂಡರಗಿ, ಎಸ್‌ಡಿಎಂಸಿ ಅಧ್ಯಕ್ಷರಾದ ಗೌಡಪ್ಪಗೌಡ ಪರಿವಾಣ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ನಂದಣ್ಣ ಪಾಟೀಲ ವೇದಿಕೆಯಲ್ಲಿದ್ದರು. ಹಿರಿಯ ಅರೋಗ್ಯ ಸಹಾಯಕ ಹೊನ್ನಪ್ಪ ಸ್ವಾಗತಿಸಿ, ನಿರೂಸಿದರು. ಪ್ರಯೋಗ ಶಾಲಾ ತಂತ್ರಜ್ಞ ಅನ್ವರ್ ಹುಸೇನ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.