ಕೆಂಭಾವಿ: 2011–-12 ರ ಉದ್ಯೋಗ ಖಾತರಿ ಯೋಜನೆಯಡಿ ಅವ್ಯವಹಾರ ನಡೆದಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ದಾಖಲಾತಿ ಹಾಗೂ ಕಾಮಗಾರಿಗಳ ಪರಿಶೀಲನೆಗೆ ಬೆಂಗಳೂರಿನ ತಂಡ ಗುರುವಾರ ಪಟ್ಟಣಕ್ಕೆ ಭೇಟಿ ನೀಡಿ ಹಲವು ಕಾಮಗಾರಿಗಳ ಪರಿಶೀಲನೆ ನಡೆಸಿತು.
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ವಿಶೇಷ ಆಯುಕ್ತ ಪ್ರಭಾಷ್ ಚಂದ್ರ ರೈ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉದ್ಯೋಗ ಖಾತರಿ ಯೋಜನೆಯ ಎರೆಹುಳು ಘಟಕ, ಶಾಲೆಯ ಹೂದೋಟ, ಚರಂಡಿ, ರಾಶಿ ಕಣ ಸೇರಿದಂತೆ ಹಲವಾರು ಕಾಮಗಾರಿಗಳ ದಾಖಲೆ ಪರಿಶೀಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಈಗಲೇ ಏನು ಹೇಳುವುದಿಲ್ಲ, ಇನ್ನೂ ಸಮಗ್ರ ತನಿಖೆ ನಡೆಸಬೇಕು. ಅಂದಾಗ ಮಾತ್ರ ಎಲ್ಲ ತಿಳಿಯುತ್ತದೆ, ಕಾಮಗಾರಿಗಳನ್ನು ಪರಿಶೀಲಿಸಲು ಆಗುವುದಿಲ್ಲ. ಕೆಲವು ಕಾಮಗಾರಿಗಳನ್ನು ಮಾತ್ರ ಪರಿಶೀಲಿಸುತ್ತಿದ್ದೇವೆ, ಸ್ಥಳೀಯ ಅಧಿಕಾರಿಗಳು ಹೇಳಿದ ಕಾಮಗಾರಿಯನ್ನು ನಾವು ನೋಡುತ್ತಿಲ್ಲ. ಬದಲಿಗೆ 2011–-12 ರಲ್ಲಿ ಮಾಡಲಾದ ಕಾಮಗಾರಿಗಳ ವಿವರ ನಮ್ಮಲ್ಲಿದೆ. ಈ ಕಾಮಗಾರಿಗಳನ್ನು ನಾವೇ ಗುರುತಿಸಿ ಪರಿಶೀಲಿಸುತ್ತಿದ್ದೇವೆ. ಸ್ಥಳೀಯರು ಸೂಚಿಸಿದ ಕಾಮಗಾರಿಗಳನ್ನು ಪರಿಶೀಲಿಸಲಾಗಿದೆ ಎಂದರು.
ಕ್ರಿಯಾಯೋಜನೆ ಹಾಗೂ ಗ್ರಾಮ ಸಭೆಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಿದ ಮಾಹಿತಿ ಇಲ್ಲ. ಕೇವಲ ಕಾಮಗಾರಿಗಳ ಹೆಸರನ್ನು ಮಾತ್ರ ಬರೆಯಲಾಗಿದೆ, ಕಡ್ಡಾಯವಾಗಿ ಗ್ರಾಮ ಸಭೆಯಲ್ಲಿ ಫಲಾನುಭವಿಗಳ ಹೆಸರುಗಳನ್ನು ನಮೂದಿಸಬೇಕು, ವಾರ್ಡ್ ಸಭೆ ನಡೆಸಿ ನಂತರ ಗ್ರಾಮ ಸಭೆಯಲ್ಲಿ ಒಪ್ಪಿಗೆ ಪಡೆಯಬೇಕು.
ಇವುಗಳನ್ನೆಲ್ಲ ಪರಿಶೀಲಿಸಲಾಗುತ್ತಿದ್ದು, ನಂತರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಬೋಗಸ್ ಕಾಮಗಾರಿ ಮಾಡಲಾಗುತ್ತದೆ ಎಂಬ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಕಾಮಗಾರಿಯ ಭಾವಚಿತ್ರಗಳನ್ನು ಜಿಒ ಸ್ಟಾಂಪಿಂಗ್ ಫೋಟೊಗ್ರಾಫಿ ಬಳಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಹೇಳಿದರು.
ರಾಜ್ಯ ಗುಣ ನಿಯಂತ್ರಣ ಅಧಿಕಾರಿ ಚೌಡಪ್ಪ, ಓಂಬಡ್ಸನ್ ಅಧಿಕಾರಿ ಸಂಭಾಜಿರಾವ ಟಿಳೆ, ತಾಲ್ಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ಪ್ರಭಯ್ಯ ಸ್ವಾಮಿ, ಎಂಜಿನಿಯರ್ಗಳಾದ ಎಸ್.ಜಿ. ಪಾಟೀಲ, ಮರೆಪ್ಪ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅನ್ಸಾರ್ ಪಟೇಲ್ ಹಾಗೂ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.