ಶಹಾಪುರ: ತಾಲ್ಲೂಕಿನ ಬೆಂಡಬೆಂಬಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂಗಪ್ಪಗೌಡ ಹಾಗೂ ಸದಸ್ಯರಾದ ಪಾರ್ವತಮ್ಮ 2011-12ನೇ ಸಾಲಿನ ಇಂದಿರಾ ಅವಾಜ್ ಯೋಜನೆ ಅಡಿಯಲ್ಲಿ ಎಸ್.ಸಿ/ಎಸ್.ಟಿ ಕೋಟಾದಲ್ಲಿ ಮನೆಗಳನ್ನು ಪಡೆದುಕೊಂಡಿದ್ದು ದೃಢಪಡಿರುತ್ತದೆ.
ರಾಜೀವಗಾಂಧಿ ವಸತಿ ನಿಗಮದ ನಿಯಮದಂತೆ ಸದಸ್ಯತ್ವ ರದ್ದುಗೊಳಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ನಿರ್ದೇಶನ ನೀಡಿದ್ದಾರೆ.
ಏನಿದು ಪ್ರಕರಣ: ಬೆಂಡಬೆಂಬಳಿ ಗ್ರಾಮ ಪಂಚಾಯಿತಿಗೆ 2011-12ನೇ ಸಾಲಿನಲ್ಲಿ
ಇಂದಿರಾ ಅವಾಜ್ ಯೋಜನೆ ಅಡಿಯಲ್ಲಿ ನಿವೇಶನಗಳು ಮಂಜೂರು ಆಗಿರುತ್ತವೆ. ಸಂಗಪ್ಪಗೌಡ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದು ಸಾಮಾನ್ಯ ವರ್ಗಕ್ಕೆ ಲಿಂಗಾಯತ ಕೋಮಿಗೆ ಸೇರಿದವರಾಗಿದ್ದಾರೆ.
ಸುಳ್ಳು ದಾಖಲೆಯನ್ನು ಸೃಷ್ಟಿಸಿ ಪತ್ನಿ ಶಕುಂತಲಾ ಹೆಸರಿನಲ್ಲಿ ಪರಿಶಿಷ್ಟ ಜಾತಿ (ಕೊರವ) ಪ್ರಮಾಣ ಪತ್ರ ಪಡೆದು ನಿವೇಶನಗಿಟ್ಟಿಸಿದ್ದಾರೆ.
ಅದರಂತೆ ಸದಸ್ಯೆ ಪಾರ್ವತಮ್ಮ ತನ್ನ ಪತಿ ಬಸಯ್ಯನವರ ಹೆಸರಿನಲ್ಲಿ ಪರಿಶಿಷ್ಟ ಜಾತಿ (ದಾಸರ) ಎಂಬ ಖೊಟ್ಟಿ ಜಾತಿ ಪ್ರಮಾಣ ಪತ್ರ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿ ಸ್ಥಳೀಯ ಜೆಎಂಎಫ್ಸಿ ಕೋರ್ಟ್ನಲ್ಲಿ ಸಾಮಾಜಿಕ ಕಾರ್ಯಕರ್ತ ಮರಿಲಿಂಗಪ್ಪ ಖಾಸಗಿ ದೂರು ಸಲ್ಲಿಸಿದ್ದರು. ಅದು ತನಿಖೆ ಹಂತದಲ್ಲಿದೆ.
ಅಲ್ಲದೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯು 2013 ಮಾರ್ಚ್1ರಂದು ತನಿಖೆ ನಡೆಸಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ರಾಮಪ್ಪಗೌಡ ಧರ್ಮ ಪತ್ನಿ ಶಕುಂತಲಾ ಹೆಸರಿನಲ್ಲಿ ಹಾಗೂ ಸದಸ್ಯೆ ಪಾರ್ವತಮ್ಮ ತನ್ನ ಪತಿ ಬಸಯ್ಯ ಹೆಸರಿನಲ್ಲಿ ಖೊಟ್ಟಿ ಜಾತಿ ಪ್ರಮಾಣ ಪತ್ರ ಹಾಗೂ ಇನ್ನಿತರ ದಾಖಲೆಗಳನ್ನು ಸೃಷ್ಟಿಸಿ ನಿವೇಶ ಪಡೆದುಕೊಂಡಿದ್ದಾರೆ.
ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ವರದಿ ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.