ADVERTISEMENT

ಜನತಾ ಸರ್ಕಾರ ರಚನೆಗೆ ಅವಕಾಶ ಕೊಡಿ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2018, 7:27 IST
Last Updated 28 ಫೆಬ್ರುವರಿ 2018, 7:27 IST
ಶಹಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ಮಂಗಳವಾರ ಸ್ವಾಭಿಮಾನಿಗಳ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಮಾವೇಶವನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಉದ್ಘಾಟಿಸಿದರು
ಶಹಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ಮಂಗಳವಾರ ಸ್ವಾಭಿಮಾನಿಗಳ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಮಾವೇಶವನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಉದ್ಘಾಟಿಸಿದರು   

ಶಹಾಪುರ: ‘ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೆಸರೆರಚಾಟದಲ್ಲಿ ಮುಳುಗಿವೆ. ಸಾಲದ ಹೊರೆ ತಾಳದೆ ರೈತರ ಸಾವಿನ ಸರಣಿ ಮುಂದುವರೆದಿದೆ. ಕಿಂಚತ್ತು ಕಾಳಜಿ ವ್ಯಕ್ತಪಡಿಸದ ಸರ್ಕಾರವನ್ನು ಕಿತ್ತು ಹಾಕಿ ಜನತಾ ಸರ್ಕಾರ ರಚಿಸಲು ಜಿಎಡಿಎಸ್‌ಗೆ ಅವಕಾಶ ನೀಡಿ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ಮಂಗಳವಾರ ಸ್ವಾಭಿಮಾನಿಗಳ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಕಾಂಗ್ರೆಸ್ ಪಕ್ಷವು ಸಾಲುಸಾಲಾಗಿ ಹಲವು ಭಾಗ್ಯಗಳನ್ನು ಕರುಣಿಸಿದ್ದೇವೆ ಎನ್ನುತ್ತ ಭಾರಿ ಸಾಲದ ಹೊರೆಯನ್ನು ನಮ್ಮ ಮೇಲೆ ಹಾಕಿ ಸಾಲ ಭಾಗ್ಯ ದಯಪಾಲಿಸಿದ್ದಾರೆ’ ಎಂದರು.

‘ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳಾದರೂ ಸುರಪುರ ತಾಲ್ಲೂಕಿನ 90ಕ್ಕೂ ಹೆಚ್ಚು ದೊಡ್ಡಿಗಳಿಗೆ ವಿದ್ಯುತ್ ಹಾಗೂ ಕನಿಷ್ಠ ಸೌಲಭ್ಯವಿಲ್ಲದೆ ಜನರು ಪರದಾಡುತ್ತಿದ್ದಾರೆ. ಯಾದಗಿರಿ ಜಿಲ್ಲೆಯು ಸಾಕಷ್ಟು ಸಮಸ್ಯೆಗಳನ್ನು ಒಡಲಿನಲ್ಲಿ ತುಂಬಿಕೊಂಡು ಬಳಲುತ್ತಿದೆ. ಇಲ್ಲಿನ ಪ್ರದೇಶದಲ್ಲಿ ಹತ್ತಿ ಬೆಳೆಯನ್ನು ಬೆಳೆಯುತ್ತಾರೆ. ರೈತರ ಅನುಕೂಲಕ್ಕೆ ಹತ್ತಿ ಕಾರ್ಖಾನೆ ಸ್ಥಾಪಿಸಿದರೆ ರೈತರಿಗೆ ಲಾಭ ದೊರೆಯುವುದರ ಜತೆಯಲ್ಲಿ 4ಲಕ್ಷ ಯುವಕರಿಗೆ ಉದ್ಯೋಗವು ಲಭಿಸುತ್ತದೆ’ ಎಂದು ಅವರು ತಿಳಿಸಿದರು.

ADVERTISEMENT

‘ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಇಲ್ಲಿನ ರೈತರ ಬಾಳಲ್ಲಿ ಹಸಿರು ಮೂಡಿಸುವ ಉದ್ದೇಶದಿಂದ ನೀರಾವರಿ ಯೋಜನೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದರು. ನೀರಾವರಿ ಸೌಲಭ್ಯ ಒದಗಿಸಿರುವುದನ್ನು ಯಾರು ಮರೆಯುವಂತಿಲ್ಲ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ಹತ್ತಿ ಕಾರ್ಖಾನೆ ಸ್ಥಾಪಿಸಲಾಗುವುದು’ ಎಂದರು.

‘ಮಹಿಳೆಯರಿಗಾಗಿ ಜಾರಿಗೆ ತಂದಿರುವ ಮಾತೃಪೂರ್ಣ ಯೋಜನೆ ಯು ನಿರರ್ಥಕವಾಗಿದೆ. ಪೌಷ್ಟಕಾಂಶದ ಕೊರತೆಯಿಂದ ಬಳಲುತ್ತಿರುವ ಗರ್ಭಿಣಿಯರು, ಮಕ್ಕಳು ಅಂಗನವಾಡಿ ಕೇಂದ್ರಕ್ಕೆ ತೆರಳಿ ಆಹಾರಧಾನ್ಯ ಪಡೆಯಲು ಹೇಗೆ ಸಾಧ್ಯ’ ಎಂದರು.

‘ಹೈದರಾಬಾದ ಕರ್ನಾಟಕಕ್ಕೆ 371 (ಜೆ) ಕಲಂ ಜಾರಿ ತರುವುದರ ಮೂಲಕ ಅಭಿವೃದ್ಧಿಯ ಪರ್ವ ಹರಿಸಲಾಗುತ್ತಿದೆಯೆಂದು ಕಾಂಗ್ರೆಸ್ ಜಪಿಸುತ್ತಿದೆ. ಸರ್ಕಾರಿ ಹುದ್ದೆಯು ಲಭಿಸಿಲ್ಲ. ಬ್ಯಾಕ್‌ಲಾಗ್ ಹುದ್ದೆ ಖಾಲಿ ಉಳಿದಿವೆ. ನಾವು ಅಧಿಕಾರಕ್ಕೆ ಬಂದರೆ ರೈತರು ಪಡೆದ ರಾಷ್ಟ್ರೀಕೃತ ಬ್ಯಾಂಕ್‌ನ ಸಾಲ ಮನ್ನಾ ಮಾಡಲಾಗುವುದು. ಕೆಂಭಾವಿ ತಾಲ್ಲೂಕು ರಚನೆ ಮಾಡುವುದರಲ್ಲಿ ಯಾವುದೇ ಅನುಮಾನ ಬೇಡ’ ಎಂದರು.

ದರ್ಶನಾಪುರ ದಂಡುಪಾಳ್ಯ ಗ್ಯಾಂಗ್: ‘ಶಹಾಪುರ ಮತಕ್ಷೇತ್ರದಲ್ಲಿ ಶಾಂತಿ ಎಂಬುವುದು ಜನರಿಗೆ ಶಾಪವಾಗಿದೆ. ಜೆಡಿಎಸ್‌ನಿಂದ ಎರಡು ಬಾರಿ ಸಚಿವರಾಗಿ ಅಧಿಕಾರ ಅನುಭವಿಸಿದ ಮಾಜಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಕ್ಷೇತ್ರದಲ್ಲಿ ದಂಡುಪಾಳ್ಯ ಗ್ಯಾಂಗ್ ನಂತೆ ಸಾರ್ವಜನಿಕ ಬೊಕ್ಕಸವನ್ನು ಲೂಟಿ ಮಾಡಿದ್ದಾರೆ. ಮಕ್ಕಳಿಗೆ ಹಂಚುವ ಬಿಸಿಯೂಟದಿಂದ ಹಿಡಿದು ಚರಂಡಿಯನ್ನು ನುಂಗಿದ್ದಾರೆ’ ಎಂದು ಜೆಡಿಎಸ್ ನಿಯೋಜಿತ ಅಭ್ಯರ್ಥಿ ಅಮೀನರಡ್ಡಿ ಯಾಳಗಿ ಆರೋಪಿಸಿದರು.

‘ದರ್ಶನಾಪುರ ರಕ್ತ ಸಂಬಂಧಿಕರ ಗೊಡ್ಡು ಬೆದರಿಕೆಗೆ ಕ್ಷೇತ್ರದ ಜನರು ಭಯದಲ್ಲಿ ಬದುಕುವಂತಾಗಿದೆ. ಮುಂದಿನ ದಿನಗಳಲ್ಲಿ ಪುಂಡಾಟಿಕೆ ನಡೆಯುವುದಿಲ್ಲ’ ಎಂದರು. ಮಾಜಿ ಸಚಿವ ಬಂಡೆಪ್ಪ ಕಾಶಂಪೂರ,ನಾಗಣ್ಣಗೌಡ ಕಂದಕೂರ,ಅಮೀನರಡ್ಡಿ ಯಾಳಗಿ, ಕೇದಾರಲಿಂಗಯ್ಯ ಹಿರೇಮಠ, ನಾಗರತ್ನ ಅನಪೂರ,ಅಯ್ಯಣ ಕನ್ಯಾಕೊಳ್ಳೂರ, ವಿಠಲ ವಗ್ಗಿ ಮಾತನಾಡಿದರು.

ಸುರಪುರ ಮತಕ್ಷೇತ್ರದ ನಿಯೋಜಿತ ಅಭ್ಯರ್ಥಿ ರಾಜಾ ಕೃಷ್ಣಪ್ಪ ನಾಯಕ, ಯಾದಗಿರಿ ಕ್ಷೇತ್ರ ಎ.ಸಿ.ಕಾಡ್ಲೂರ, ಬಸವರಾಜ ವಿಭೂತಿಹಳ್ಳಿ, ಬಸವರಾಜ ಅರುಣಿ, ವೆಂಕಟೇಶ ಪೂಜಾರಿ ದೇವದುರ್ಗ, ನಿಂಗಣ್ಣ ಕೊಂಡಾಪುರ,ವೆಂಕಟೇಶ ಭಕ್ತಿ, ಅಶೋಕ ಕರೆಗಾರ, ಶಿವುಕುಮಾರ ಮೊಟಗಿ, ಅಬ್ದುಲ ಹುಸೇನಿ, ರಾಜಾಸಾಬ್, ಅನ್ವರಪಾಶ, ರವಿ ಮೋಟಗಿ, ಪ್ರದೀಪ ಪುರ್ಲೆ, ರಾಮಯ್ಯ ಇದ್ದರು.

ದರ್ಗಾಕ್ಕೆ ಭೇಟಿ: ತಾಲ್ಲೂಕಿನ ಗೋಗಿ ಗ್ರಾಮದ ಹಿಂದು ಮುಸ್ಲಿಮರ ಭಾವೈಕ್ಯತೆ ತಾಣವಾದ ಚಂದಾ ಹುಸೇನಿ ದರ್ಗಾಕ್ಕೆ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರು ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದರು.

‘ಸೂಫಿ ಸಂತರ ನಾಡಿನಲ್ಲಿ ಭಾವೈಕ್ಯತೆಯು ಹೆಚ್ಚು ಖುಷಿ ನೀಡಿದೆ. ಎಲ್ಲಾ ಸಮುದಾಯದವರು ಸೌಹಾರ್ದಯುತವಾಗಿ ಬದುಕುತ್ತಿರುವುದು ಇತರೆ ಪ್ರದೇಶಗಳಿಗೆ ಮಾದರಿಯಾಗಲಿ’ ಎಂದರು.

‘ಗುಳೆ’ ಪ್ರಜಾವಾಣಿ ವರದಿ ಪ್ರಸ್ತಾಪ

‘ಜಿಲ್ಲೆಯಲ್ಲಿ ಕೂಲಿ ಹುಡುಕುತ್ತ ಗುಳೆ ಹೋಗುವ ಸಮಸ್ಯೆ ಬಗ್ಗೆ ಈಚೆಗೆ ‘ಪ್ರಜಾವಾಣಿ’ಯಲ್ಲಿ ವಿಸ್ತ್ರತ ವರದಿ ನೋಡಿ ದಂಗಾದೆ. ವರದಿಯಿಂದ ನಮ್ಮ ಕಣ್ಣು ತೆರೆಸಿದೆ. ಇಲ್ಲಿ ನೀರಾವರಿ ಸೌಲಭ್ಯದ ಜತೆಗೆ ಉದ್ಯೋಗ ಸೃಷ್ಟಿಗೆ ಸಾಕಷ್ಟು ಅವಕಾಶವಿದೆ. ಸರ್ಕಾರ ಮಾತ್ರ ಜಾಣ ಕಿವುಡವಾಗಿದೆ. ಗುಳೆ ಹೋಗುವುದರಿಂದ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಗುಳೆ ಹೋಗುವದನ್ನು ತಡೆಯ ಬೇಕಾದರೆ ಹೆಚ್ಚು ಉದ್ಯೋಗ ಸೃಷ್ಟಿಯಾಗುವುದರ ಜೊತೆಗೆ ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಮತ್ತು ಮಾರುಕಟ್ಟೆ ಒದಗಿಸಬೇಕು. ಪಕ್ಷ ಅಧಿಕಾರಕ್ಕೆ ಬಂದರೆ ಹತ್ತಿ ಕಾರ್ಖಾನೆ ಸ್ಥಾಪಿಸಲಾಗುವುದು’ ಎಂದು ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.

ಚಂದಾ ಹುಸೇನಿ ದರ್ಗಾಕ್ಕೆ ಭೇಟಿ

ತಾಲ್ಲೂಕಿನ ಗೋಗಿ ಗ್ರಾಮದ ಹಿಂದು ಮುಸ್ಲಿಮರ ಭಾವೈಕ್ಯತೆ ತಾಣವಾದ ಚಂದಾ ಹುಸೇನಿ ದರ್ಗಾಕ್ಕೆ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರು ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದರು.

‘ಸೂಫಿ ಸಂತರ ನಾಡಿನಲ್ಲಿ ಭಾವೈಕ್ಯತೆಯು ಹೆಚ್ಚು ಖುಷಿ ನೀಡಿದೆ. ಎಲ್ಲಾ ಸಮುದಾಯದವರು ಸೌಹಾರ್ದಯುತವಾಗಿ ಬದುಕುತ್ತಿರುವುದು ಇತರೆ ಪ್ರದೇಶಗಳಿಗೆ ಮಾದರಿಯಾಗಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.