ADVERTISEMENT

ಜಿಪಂ ಕಿರಿಯ ಎಂಜಿನಿಯರ್ ಸೇರಿ ನಾಲ್ವರ ವಿರುದ್ಧ ಸಮನ್ಸ್!

​ಪ್ರಜಾವಾಣಿ ವಾರ್ತೆ
Published 13 ಜನವರಿ 2011, 7:25 IST
Last Updated 13 ಜನವರಿ 2011, 7:25 IST

ಶಹಾಪುರ: ಜಿಲ್ಲಾ ಪಂಚಾಯಿತಿಯಲ್ಲಿ ಕಿರಿಯ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ನೀಲಕಂಠ,  ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಮಣ್ಣಗೌಡ ಕೊಲ್ಲೂರ, ಗೋಗಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಹೊನ್ನಪ್ಪಗೌಡ ಕೂಡಿಕೊಂಡು ಗೋಗಿ ಗ್ರಾಮದ ಫಿರ್ಯಾದಿದಾರ ವೆಂಕಣ್ಣಗೌಡನಿಗೆ ಜೀವ ಬೆದರಿಕೆ ಹಾಗೂ ಅವಾಚ್ಯ ಶಬ್ದಗಳ ನಿಂದನೆಯ ಆರೋಪದ ಮೇಲೆ  ಸ್ಥಳೀಯ ಜೆಎಂಎಫ್‌ಸಿ ಕೋರ್ಟ್ ಸಮನ್ಸ್ ಜಾರಿ ಮಾಡಿದ ಅಂಶ ಬೆಳಕಿಗೆ ಬಂದಿದೆ.2008 ಜೂನ್21ರಂದು ಫಿರ್ಯಾದಿದಾರ ವೆಂಕಣ್ಣಗೌಡ ಜಕಾರಡ್ಡಿ ಎನ್ನುವರು ನಾಲ್ವರ ವಿರುದ್ದ ಗೋಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಹಿನ್ನೆಲೆ: ಗೋಗಿ ಗ್ರಾಮದ ರೈತ ವೆಂಕಣ್ಣಗೌಡ ಜಕಾರಡ್ಡಿ ಹೊಲದ ಸರ್ವೇನಂಬರ 329ರಲ್ಲಿ 11ಎಕರೆ 34ಗುಂಟೆ ಜಮೀನಿನಲ್ಲಿ  11ಎಕರೆ ಭೂಮಿಯನ್ನು ಮಾರ್ಕೆಟ್ ಯಾರ್ಡ್‌ಗೆ ವಶಪಡಿಸಿಕೊಳ್ಳಲಾಗಿದೆ. ಉಳಿದ 34 ಗುಂಟೆ ಜಾಗದಲ್ಲಿ ಲೋಕೋಪಯೋಗಿ ಇಲಾಖೆಯವರು ರಸ್ತೆ ನಿರ್ಮಾಣಕ್ಕೆ ಮುಂದಾದಾಗ ರೈತ ವೆಂಕಣ್ಣಗೌಡ ಸ್ಥಳೀಯ ಕೋರ್ಟ್‌ನಲ್ಲಿ ದಾವೆ ಸಲ್ಲಿಸಿ ತಡೆಯಾಜ್ಞೆಯನ್ನು ಪಡೆದು ಕೊಂಡಿದ್ದರು.

2008 ಜೂನ್20ರಂದು ಜಿಪಂ ಕಿರಿಯ ಎಂಜಿನಿಯರ ಸೇರಿ ನಾಲ್ವರು ಜೆಸಿಬಿ ಯಂತ್ರ ತೆಗೆದುಕೊಂಡು ಬಂದು ಅನಧಿಕೃತವಾಗಿ ರಸ್ತೆ ನಿರ್ಮಾಣ ಮಾಡಲು ಮುಂದಾದರು. ಕೋರ್ಟ್ ತಡೆಯಾಜ್ಞೆಯಿದ್ದರು ಕಾಮಗಾರಿ ನಿರ್ವಹಿಸುವುದು ಬೇಡವೆಂದು ಫಿರ್ಯಾದಿದಾರ ವೆಂಕಣ್ಣಗೌಡ ಆರೋಪಿತರಿಗೆ ಮನವಿ ಮಾಡಿದಾಗ ‘ನಾವ್ ಕೆಲಸ ಮಾಡುತ್ತೇವೆ ನೀನ್ ಏನ್ ಮಾಡ್ಕೊಂತಿ ಮಾಡಿಕೊಳ್ಳು’ ಎಂದು ಅವಾಚ್ಯ ಶವ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದರು. ಮರು ದಿನ ವೆಂಕಣ್ಣಗೌಡ ಗೋಗಿ ಪೊಲೀಸ್ ಠಾಣೆ ಹೋಗಿ ತನಗಾದ ಅನ್ಯಾಯದ ಬಗ್ಗೆ ದೂರು ದಾಖಲಿಸಿದ್ದ.ತನಿಖೆ ನಡೆಸಿದ ಪೊಲೀಸರು ಪ್ರಕರಣದಲ್ಲಿ ಹುರುಳಿಲ್ಲವೆಂದು ‘ಬಿ’ ಅಂತಿಮ ವರದಿ ಸಲ್ಲಿಸಿದ್ದರು.

ನಂತರ ಸ್ಥಳೀಯ ಕೋರ್ಟ್‌ನ ನ್ಯಾಯಾಧೀಶರಾದ ಸತೀಶ ಎಸ್.ಟಿ. ಪ್ರಕರಣದ ಬಗ್ಗೆ ಕೂಲಂಕುಶವಾಗಿ ವಿಚಾರಣೆ ನಡೆಸಿ ಪ್ರಕರಣದ ದಾಖಲಿಸಿಕೊಂಡು ಆರೋಪಿತರಿಗೆ ಸಮನ್ಸ್ ಜಾರಿ ಮಾಡಿ ಫೆ.17ರಂದು ಕೋರ್ಟ್‌ಗೆ ಹಾಜರಾಗುವಂತೆ ಆದೇಶದಲ್ಲಿ ಸೂಚಿಸಲಾಗಿದೆ ಫಿರ್ಯಾದಿದಾರ ವೆಂಕಣ್ಣಗೌಡ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.