ಹುಣಸಗಿ: ಸಮೀಪದ ನಾರಾಯಣಪುರದ ಮುಖ್ಯ ಎಂಜಿನಿಯರ್ ಕಚೇರಿಯಲ್ಲಿ ಕೃಷ್ಣಾ ಭಾಗ್ಯಜಲ ನಿಗಮದ ಅಧಿಕಾರಿಗಳ ಪುನರ್ ಪರಿಶೀಲನಾ ಸಭೆ ನಡೆಸಿ ಎಡದಂಡೆ ಕಾಲುವೆಗೆ ಮಿತವ್ಯಯವಾಗಿ ನೀರು ಬಳಸಿದಲ್ಲಿ ಎಲ್ಲಿಯವರೆಗೆ ನೀರು ಹರಿಸಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಜುಗೌಡ ಮಾಹಿತಿ ಪಡೆದರು.
ನಾರಾಯಣಪುರ ಮತ್ತು ಆಲಮಟ್ಟಿ ಎರಡು ಜಲಾಶಯಗಳಲ್ಲಿ ಶುಕ್ರವಾರ ಸುಮಾರು ಕೃಷಿ ಬಳಕೆಗೆ ಸುಮಾರು 57.125 ಟಿಎಂಸಿ ನೀರಿನ ಲಭ್ಯತೆ ಇದೆ. ಅದಕ್ಕನುಗಣವಾಗಿ ನೀರು ಹರಿಸಲಾಗುವುದು ಎಂದು ಮುಖ್ಯ ಎಂಜಿನಿಯರ್ ಸುದರ್ಶನ್ ತಿಳಿಸಿದರು.
ಪ್ರತಿಯೊಂದು ವಿಭಾಗದಲ್ಲಿಯೂ ಅವಶ್ಯವಾಗಿ ಮೂರು ದಿನಗಳಂತೆ ನೀರು ಸ್ಥಗಿತಗೊಳಿಸಿ (ವಾರಾಬಂದಿ) ಮಾಡಿ ಕೆಳಭಾಗದ ರೈತರಿಗೆ ನೀರು ಒಗಸಿಕೊಡಬೇಕೆಂದು ಸಭೆಯಲ್ಲಿ ಸಚಿವರು ಸೂಚಿಸಿದರು. ರಾತ್ರಿ ಕೂಡಾ ಕಾಲುವೆ ಜಾಲಗಳಲ್ಲಿ ಸಂಚರಿಸಿ ನೀರನ್ನು ಹರಿಸಲು ತೊಂದರೆಯಾಗದಂತೆ ನೋಡಿಕೊಳ್ಳಿ. ಯಾವುದೇ ಕಾರಣಕ್ಕೂ ನೀರು ಪೊಲಾಗಿ ಹಳ್ಳಕೊಳ್ಳಗಳು ಸೇರಕೂಡದು. ಅಗತ್ಯ ಬಿದ್ದಲ್ಲಿ ಪೊಲೀಸ್ ಸಹಾಯ ಕೂಡಾ ತೆಗೆದುಕೊಳ್ಳಿ ಈ ಕುರಿತು ಪೊಲೀಸ್ ಇಲಾಖೆಗೆ ಸರ್ಕಾರದಿಂದ ಸೂಚಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ನಮ್ಮ ಸರ್ಕಾರ ರೈತ ರೈತರಿಗೆ ತೊಂದರೆಯಾದರೆ ಸಹಿಸುವುದಿಲ್ಲ. ನಿಗಮದ ಯಾವುದೇ ಅಧಿಕಾರಿಗಳು ಮತ್ತು ಸಿಬ್ಬಂದಿ ಕೇಂದ್ರ ಸ್ಥಾನಬಿಟ್ಟು ಹೋಗಕೂಡದು ಎಂದು ಸೂಚಿಸಿದರು.
ಪುನರ್ ಪರಿಶೀಲನಾ ಸಭೆಯಲ್ಲಿ ಮುಖ್ಯ ಎಂಜಿನಿಯರ್ ಸುದರ್ಶನ್, ಸುಪರಿಟೆಂಡೆಂಟ್ ಎಂಜಿನಿಯರ್ಗಳಾದ ಭೋಜಾನಾಯಕ, ಈಶ್ವರನಾಯಕ, ಶಿವಸುಬ್ರಮಣ್ಯಂ, ಕಾರ್ಯನಿರ್ವಾಹಕ ಎಂಜಿನಿಯರ್ಗಳಾದ ಎಂ.ಬಿ.ಸಜ್ಜನರ್, ಮೃತ್ಯುಂಜಯ, ಎಚ್.ರಹಮಾನ ಆರ್. ಎಲ್ ಹಳ್ಳೂರ ಸೇರಿದಂತೆ ಇತರ ಅಧಿಕಾರಿಗಳು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.