ADVERTISEMENT

ನಿರ್ಲಕ್ಷ್ಯಕ್ಕೆ ಒಳಗಾದ ಕಳಚೂರು ಅರಸರ ಶಾಸನಗಳು

ಯಾದಗಿರಿ ಜಿಲ್ಲಾ ಕೇಂದ್ರದ ಹತ್ತಿರವಿದ್ದರೂ ರಸ್ತೆ ಸೇರಿದಂತೆ ಮೂಲ ಸೌಕರ್ಯ ಕೊರತೆ

ನರಸಿಂಹ ಮೂರ್ತಿ ಕುಲಕರ್ಣಿ
Published 6 ಅಕ್ಟೋಬರ್ 2016, 5:11 IST
Last Updated 6 ಅಕ್ಟೋಬರ್ 2016, 5:11 IST

ಯಾದಗಿರಿ: ಗತಕಾಲದ ಇತಿಹಾಸವನ್ನು ಸಾರುವ ಮಹತ್ವದ ಶಾಸನಗಳನ್ನು ಉಳಿಸುವುದು ಮತ್ತು ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು. ಆದರೆ, ಶಹಾಪುರ ತಾಲ್ಲೂಕಿನ ಗುರಸಣಗಿ ಬೆಟ್ಟದ ಮೇಲಿರುವ ಕಳಚೂರು ಅರಸರ ಶಾಸನಗಳು ಪುರಾತತ್ವ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಸಂರಕ್ಷಣೆ ಇಲ್ಲದೇ ಹಾಳಾಗುತ್ತಿವೆ.

ಗುರಸಣಗಿ ಗ್ರಾಮದ ಹೊರವಲಯದ ಬೆಟ್ಟದ ಮೇಲಿರುವ ಸಿದ್ದಲಿಂಗೇಶ್ವರ ದೇವಸ್ಥಾನದ ಹಿಂಭಾ­ಗದ ಹೆಬ್ಬಂಡೆಯ ಮೇಲೆ ಕಳಚೂರು ಅರಸರ ಶಾಸನಗಳನ್ನು ಕೆತ್ತಲಾಗಿದೆ. ಇದು ಹಳೆಗನ್ನಡದಲ್ಲಿದ್ದು, 12ನೇ ಶತಮಾನದಲ್ಲಿ ಕಳಚೂರು ಅರಸರ ಕಾಲದ ಘಟನೆಗಳನ್ನು ತಿಳಿಸುತ್ತದೆ ಎಂದು    ಗ್ರಂಥಾಲಯ ಸಹಾಯಕ ಪಾಟೀಲ್ ಬಸವನ ಗೌಡ ಅಭಿಪ್ರಾಯ ಪಟ್ಟಿದ್ದಾರೆ.  ಈ ಬಗ್ಗೆ ಮತ್ತಷ್ಟು ಸಂಶೋಧನೆಯಾಗಿ ಇವುಗಳನ್ನು ಸಂರಕ್ಷಣೆ ಮಾಡಬೇಕು ಎನ್ನುವುದು ಸಂಶೋಧಕರ ಒತ್ತಾಯವಾಗಿದೆ.

ಅಂದಿನ ಶಾಸನೋಕ್ತ ಸ್ವಯಂಭೂ ಸಿದ್ಧೇಶ್ವರನಾಥ ದೇಗುಲ ಈಗಿನ ಸಿದ್ದಲಿಂಗೇಶ್ವರ ದೇವಸ್ಥಾನ ಎಂದು ಹೇಳ­ಲಾಗುತ್ತದೆ. ಇಲ್ಲಿ ಶಾತವಾಹನರು, ಚಾಲುಕ್ಯ ಅರಸರು ಮತ್ತು ಕಳಚೂರು ಅರಸರು ಈ ಸುಂದರ ಬೆಟ್ಟದಲ್ಲಿ ವಿದ್ಯಾರ್ಥಿ­ಗಳಿಗೆ ಶಿಕ್ಷಣ ನೀಡುತ್ತಿದ್ದರಿಂದ ಇದನ್ನು ವಿದ್ಯಾರ್ಥಿಗಳ ಕೇಂದ್ರ ಎಂದು ಕರೆಯುತ್ತಿದ್ದರೆಂದು ಇಲ್ಲಿನ ಶಾಸನ ಹೇಳುತ್ತಿವೆ ಎನ್ನವುದು ಸಂಶೋಧಕ ಡಿ.ಎನ್.ಅಕ್ಕಿ ಅವರ  ಅಭಿಪ್ರಾಯವಾಗಿದೆ.

ಆಕಳು, ಕರು, ಶಿವಲಿಂಗ, ಸೂರ್ಯ, ಚಂದ್ರ, ನಂದಿ ಇರುವ ಮೂರು ಶಾಸನಗಳನ್ನು ಒಂದೇ ಹೆಬ್ಬಂಡೆಯಲ್ಲಿ ಒಂದರ ಪಕ್ಕದಲ್ಲಿ ಒಂದನ್ನು  ಕೆತ್ತನೆ ಮಾಡಲಾಗಿದೆ. ಈ ಮೂರು ಶಾಸನ­ಗಳಲ್ಲಿ ಕಳಚೂರು ಅರಸ ಸಂಕಮನ ಕಾಲದ 2 ಶಾಸನಗಳು ಹಾಗೂ ಕಳಚೂರು ಸಿಂಘಣ ದೇವನ ಕಾಲದ ಒಂದು ಶಾಸನವಿದೆ.

ಜಿಲ್ಲಾಡಳಿತ, ಹಾಗೂ ಪುರಾತತ್ವ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸಿ ಈ ಸ್ಥಳದಲ್ಲಿರುವ ಶಿಲ್ಪಕಲೆ ಹಾಗೂ ಶಾಸನಗಳನ್ನು ರಕ್ಷಣೆ ಮಾಡಿ ಇತಿಹಾಸವನ್ನು ಉಳಿಸಬೇಕು ಮತ್ತು ಈ ನೆಲೆಯನ್ನು ಅಭಿವೃದ್ಧಿ ಪಡಿಸಲು ಮುಂದಾಗಬೇಕು ಎನ್ನುವುದು ಅವರ ಅಭಿಪ್ರಾಯವಾಗಿದೆ.

ಈ ಬೆಟ್ಟ ಹಿಂದೂ-ಮುಸ್ಲಿಮರ ಭಾವೈಕ­ತ್ಯೆಯ ಸಂಕೇತವಾಗಿದ್ದು, ಬೆಟ್ಟದ ಮೇಲ್ಬಾಗದಲ್ಲಿ ಸಿದ್ದಲಿಂಗೇಶ್ವರ ದೇವಸ್ಥಾನ­ವಿದ್ದರೆ ಕೆಳಭಾಗದಲ್ಲಿ ಚಂದಾ ಹುಸೇನಿ ದರ್ಗಾ ಇದೆ. ಇಲ್ಲಿಗೆ ಬರುವ ಭಕ್ತರು ಬೇಧ-ಭಾವವಿಲ್ಲದೆ ಎರಡು ಕಡೆ ದರ್ಶನ ಪಡೆಯುತ್ತಾರೆ. ಹೀಗಾಗಿ ಇದೊಂದು ಭಾವೈಕತ್ಯೆಯ ಕೇಂದ್ರವಾಗಿದೆ. 

ಪ್ರವಾಸೋದ್ಯಮ ಇಲಾಖೆಯಿಂದಲೂ ನಿರ್ಲಕ್ಷ್ಯ: ಸುಂದರವಾದ ಬೆಟ್ಟದ ಮೇಲಿರುವ ಈ ದೇವಸ್ಥಾನವು ಸುಂದರವಾದ ಪ್ರವಾಸಿ ತಾಣವಾಗಿದೆ. ಆದರೆ, ಬೆಟ್ಟಕ್ಕೆ ಹೋಗಲು ಸೂಕ್ತ ಮಾರ್ಗವಿಲ್ಲ. ಬಸ್‌ಗಳ ಸೌಕರ್ಯವಿಲ್ಲ. ಹಬ್ಬದ ಸಂದರ್ಭ­ಗಳಲ್ಲಿ ಜನರು ಇಲ್ಲಿಗೆ ಹೆಚ್ಚಾಗಿ ಬರುತ್ತಾರೆ.

ADVERTISEMENT

ದಾನಿಗಳ ನೆರವಿ­ನಿಂದ ಇಲ್ಲಿ ನಿತ್ಯ ಅನ್ನದಾಸೋಹ ನಡೆಯುತ್ತದೆ. ದೇವಸ್ಥಾನಕ್ಕೆ ಬರುವ ಭಕ್ತರಿಗೆ ಇತಿಹಾಸದ ಪರಿಚಯವಿಲ್ಲ. ದೇವಸ್ಥಾನದ ಹಿಂಭಾಗದ ಶಾಸನಗಳ ಬಳಿ ಗಿಡಗಂಟೆಗಳು ಬೆಳೆದರೂ ಅವುಗಳನ್ನು ಸ್ವಚ್ಛಗೊಳಿಸುವ ಕಾರ್ಯ ಮಾಡುತ್ತಿಲ್ಲ.  ಪ್ರವಾಸೋದ್ಯಮ ಇಲಾಖೆ ಈ ಸ್ಥಳವನ್ನು ಅಭಿವೃದ್ಧಿಪಡಿಸಿದರೆ, ಇದು ಸುಂದರ ಪ್ರವಾಸಿ ತಾಣವಾಗುತ್ತದೆ ಎನ್ನುವುದು ಗುರಸಣಗಿ ಗ್ರಾಮಸ್ಥರ ಅಭಿಪ್ರಾಯವಾಗಿದೆ.

*
ಶಿಲಾಯುಗದ ತಾಣವಾಗಿರುವ ಈ ಪ್ರದೇಶವು ಬೌದ್ಧರ ನೆಲೆಯಾಗಿತ್ತು.  ಶಾತವಾಹನರು, ಚಾಲುಕ್ಯ ಮತ್ತು ಕಳಚೂರು ಅರಸರ ಆಳ್ವಿಕೆ ಮಾಡಿದ ಕಾರಣ ಅವರ ಶಾಸನಗಳು ಇಲ್ಲಿವೆ. ಇವುಗಳ ಸಂರಕ್ಷಣೆ ಅಗತ್ಯ
-ಡಿ.ಎನ್.ಅಕ್ಕಿ,
ಸಂಶೋಧಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.