ಶಹಾಪುರ: ತಾಲ್ಲೂಕಿನ ಹತ್ತಿಗೂಡೂರ ಗ್ರಾಮದಲ್ಲಿ ಎರಡು ವರ್ಷದ ಹಿಂದೆ ನಿರ್ಮಿಸಿದ್ದ ಶುದ್ಧ ಕುಡಿಯುವ ನೀರಿನ ಘಟಕ ಉಪಯೋಗಕ್ಕೆ ಬಾರದಾಗಿದೆ. ಅರೆಬರೆ ಕೆಲಸ ನಿರ್ವಹಿಸಿ ಸಾರ್ವಜನಿಕ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ರೈತ ಮುಖಂಡ ಶರಣುರಡ್ಡಿ ಹತ್ತಿಗೂಡೂರ ಆರೋಪಿಸಿದ್ದಾರೆ.
ಘಟಕ ಸ್ಥಾಪನೆ ಮಾಡಿ ಕೊಳವೆಬಾವಿ ಕೊರೆಯಿಸಿದಾಗ ಉಪ್ಪು ಮಿಶ್ರಿತ ನೀರು ಬಂದಿದೆ. ಇದರಿಂದ ಕುಡಿಯುವ ನೀರು ಯೋಗ್ಯವಲ್ಲ ಎಂದು ಇಲ್ಲದ ಸಬೂಬು ಅಧಿಕಾರಿಗಳು ಹೇಳುತ್ತಾರೆ. ಗ್ರಾಮದ ಸುತ್ತಮುತ್ತಲು ಉಪ್ಪು ಮಿಶ್ರಿತ ನೀರು ಇರುವಾಗ ಬೇರೆಡೆ ಕೊಳವೆಬಾವಿ ಕೊರೆಯಿಸಿ ಉಪಯೋಗಿಸಬಹುದಾಗಿತ್ತು ಎಂದು ಹೇಳಿದರು.
ಗ್ರಾಮದಲ್ಲಿ ಸುಮಾರು 2 ಸಾವಿರ ಜನಸಂಖ್ಯೆಯಿದ್ದು, ಅದರಲ್ಲಿ ಹೆಚ್ಚಾಗಿ ಪರಿಶಿಷ್ಟ ಸಮುದಾಯದವರು ಇದ್ದಾರೆ. ಕೊನೆ ಪಕ್ಷ ಶುದ್ಧ ಕುಡಿಯುವ ನೀರು ದೊರಕುತ್ತದೆ ಎಂಬ ಆಸೆಯು ಕಮರಿಹೋಗಿದೆ. ಈ ಬಗ್ಗೆ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಬಳಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇದರ ಬಗ್ಗೆ ತನಿಖೆ ನಡೆಸಿ ಮತ್ತೊಂದು ಹೊಸದಾಗಿ ಕುಡಿಯುವ ನೀರಿನ ಘಟಕ ಸ್ಥಾಪಿಸಬೇಕು ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅವರಿಗೆ ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.