ADVERTISEMENT

ಪೊಲೀಸರು ಆರೋಗ್ಯಕ್ಕೂ ಗಮನ ನೀಡಲಿ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2017, 6:15 IST
Last Updated 30 ಡಿಸೆಂಬರ್ 2017, 6:15 IST

ಯಾದಗಿರಿ: ‘ಸಮಾಜಕ್ಕೆ ನಿರಂತರ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿ ದೇಹಾರೋಗ್ಯದ ಕಡೆಗೂ ಗಮನ ನೀಡಬೇಕು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ ಸಲಹೆ ನೀಡಿದರು. ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ಪೊಲೀಸ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಹಗಲು– ಇರುಳು ಕರ್ತವ್ಯ ನಿರ್ವಹಿಸುವ ಇಲಾಖೆಗಳಲ್ಲಿ ಸಿಬ್ಬಂದಿ ಅನಾರೋಗ್ಯದಿಂದ ಬಳಲುತ್ತಿರುತ್ತಾರೆ. ಆದರೆ, ನಿತ್ಯ ಯೋಗಾಸನದಂತಹ ಸಣ್ಣ ವ್ಯಾಯಾಮಗಳನ್ನಾದರೂ ರೂಢಿಸಿಕೊಳ್ಳಬೇಕು. ಇದರಿಂದ ಅನಾರೋಗ್ಯವನ್ನು ದೂರ ಇಡಬಹುದು’ ಎಂದರು.

‘ರಕ್ತದೊತ್ತಡ, ಮಧುಮೇಹ ಈಗ ಸಾಮಾನ್ಯ ಕಾಯಿಲೆಗಳಾಗಿಬಿಟ್ಟಿವೆ. ಬದು ಕಿಗೆ ಮಾರಕವಾಗಿರುವ ಇಂತಹ ರೋಗಗಳಿಂದ ದೂರ ಉಳಿಯ ಬೇಕೆಂದರೆ ದೈಹಿಕ ಶ್ರಮ ಅಗತ್ಯ. ದೇಹ ದಣಿಯುವರಿಂದ ಮನಸ್ಸು ಪ್ರಫುಲ್ಲ ಗೊಳ್ಳುತ್ತದೆ. ಅಲ್ಲದೇ ಕ್ರಿಯಾಶೀಲತೆ ಮೈಗೂಡುತ್ತದೆ’ ಎಂದು ಹೇಳಿದರು.

ADVERTISEMENT

‘ಇತ್ತೀಚೆಗೆ ಜಿಲ್ಲೆಗೆ ಮುಖ್ಯಮಂತ್ರಿ ಬಂದಾಗ ಪೊಲೀಸ್ ಇಲಾಖೆಯು ಉತ್ತಮ ಕರ್ತವ್ಯ ನಿರ್ವಹಿಸಿದೆ. ಒಂದೇ ದಿನದಲ್ಲಿ ಮೂರು ಕಡೆ ಕಾರ್ಯಕ್ರಮಗಳು ಇದ್ದರೂ ಕೂಡಾ ಯಾವುದೇ ತೊಂದರೆಯಾಗದಂತೆ ಪೋಲಿಸ್ ಇಲಾಖೆ ಭದ್ರತೆ ಒದಗಿಸಿದೆ. ಇದು ನಮ್ಮ ಜಿಲ್ಲೆಯ ಪೊಲೀಸರ ದಕ್ಷತೆಯನ್ನು ತೋರಿಸಿದೆ’ ಎಂದು ಶ್ಲಾಘಿಸಿದರು.

‘ದೈಹಿಕವಾಗಿ ಸದೃಢಗೊಳ್ಳಲು ಕ್ರೀಡಾ ಚಟುವಟಿಕೆಗಳು ಪೂರಕವಾಗಿದ್ದು, ಪೊಲೀಸ್‌ ಸಿಬ್ಬಂದಿ ಕ್ರೀಡಾಭಿರುಚಿ ಬೆಳೆಸಿಕೊಳ್ಳಬೇಕು. ಕ್ರೀಡಾ ಸಾಧಕರಾಗುವುದರಿಂದ ಇಲಾಖೆಗೂ ಕೀರ್ತಿ ಬರುತ್ತದೆ. ಅಂತಹ ಕ್ರೀಡಾಸಾಧಕರನ್ನು ಜಿಲ್ಲೆ ಹೊಂದಿದೆ ಎಂಬ ಸಂದೇಶ ರಾಜ್ಯಕ್ಕೂ ಮುಟ್ಟಬೇಕು’ ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಮಾತನಾಡಿ, ‘ಕ್ರೀಡೆಗಳಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಭಾಗವಹಿಸುವ ಮೂಲಕ ಕ್ರೀಡಾ ಮನೋಭಾವ ಪ್ರದರ್ಶಿಸಬೇಕು’ ಎಂದು ಹೇಳಿದರು. ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಣಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ಸೇರಿದಂತೆ ವಿವಿಧ ಪೊಲೀಸ್ ಅಧಿಕಾರಿಗಳು ಹಾಜರಿದ್ದರು.

ಯಾದಗಿರಿ, ಶಹಾಪುರ, ಸುರಪುರ, ಹುಣಸಗಿ, ಗುರುಮಠಕಲ್, ಕೆಂಭಾವಿ, ವಡಗೇರಾ ಸೇರಿದಂತೆ ವಿವಿಧ ಠಾಣೆಯಿಂದ ಬಂದಿದ್ದ ಪೊಲೀಸ್ ಕ್ರೀಡಾಪಟುಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.

* * 

ಮನಸೊಪ್ಪುವ ದೈಹಿಕ ಕ್ರೀಡೆಯನ್ನು ಕಡ್ಡಾಯವಾಗಿ ರೂಢಿಸಿಕೊಂಡರೆ ಜೀವಹಿಂಡುವ ಮಧುಮೇಹ, ರಕ್ತದೊತ್ತಡದಿಂದ ದೂರ ಉಳಿಯಬಹುದು.
ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.