ಯಾದಗಿರಿ: ಜಿಲ್ಲಾಡಳಿತ ಭವನದ ಎದುರುಗಡೆ ಮುದ್ನಾಳ ವೃತ್ತದ ಬಳಿ ನೂತನವಾಗಿ ನಿರ್ಮಾಣವಾಗಿರುವ ಜಿಲ್ಲಾ ಪೊಲೀಸ್ ಇಲಾಖೆ ವಸತಿ ಸಮುಚ್ಛಯ ಸಿದ್ಧಗೊಂಡು ಮೂರು ತಿಂಗಳು ಕಳೆಯುತ್ತಿದೆ. ಆದರೂ ಸಿಬ್ಬಂದಿಗೆ ಹಸ್ತಾಂತರಿಸಿಲ್ಲ. ಶೀಘ್ರ ಉದ್ಘಾಟಿಸಿ ಸಿಬ್ಬಂದಿಗೆ ಹಸ್ತಾಂತರಗೊಳಿಸುವಂತೆ ಟೋಕ್ರೆ ಕೋಲಿ ಸಮಾಜದ ಜಿಲ್ಲಾಧ್ಯಕ್ಷ ಉಮೇಶ ಕೆ. ಮುದ್ನಾಳ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸದ್ಯ ಸಿಬ್ಬಂದಿಯವರು ಬಾಡಿಗೆ ಮನೆಗಳಲ್ಲಿ ಅಲ್ಲಲ್ಲಿ ದೂರದೂರದಲ್ಲಿ ವಾಸವಾಗಿರುವುದರಿಂದ ಸಮಸ್ಯೆಯಾಗಿದೆ. ಆದರೆ, ಈ ವಸತಿ ನಿಲಯಗಳನ್ನು ಹಂಚಿಕೆ ಮಾಡಿಕೊಟ್ಟಲ್ಲಿ ಸಿಬ್ಬಂದಿ ಒಂದೆಡೆ ವಾಸಿಸುವುದಲ್ಲದೇ ಕಚೇರಿಗೆ ಹತ್ತಿರವೇ ಆಗಿರುವುದರಿಂದ ಇನ್ನಷ್ಟು ಅನುಕೂಲಗಳಾಗುತ್ತವೆ ಎಂದಿದ್ದಾರೆ.
ಇದುವರೆಗೆ ಲೋಕಸಭಾ ಚುನಾವಣೆ ನೀತಿ ಸಂಹಿತೆ ನೆಪದಲ್ಲಿ ಉದ್ಘಾಟನೆ ಮಾಡದೇ ಇರುವುದರಿಂದ ಕೋಟ್ಯಂತರ ರೂ. ಮೌಲ್ಯದ ಸಂಕೀರ್ಣ ಬಳಕೆಯಾಗದೇ ನಿರುಪಯುಕ್ತವಾಗಿ ನಿಂತಿರುವುದು ಸೋಜಿಗದ ಸಂಗತಿ. ತಕ್ಷಣ ಜಿಲ್ಲಾ ಪೊಲೀಸ್ ಇಲಾಖೆ ಈ ವಿಷಯಕ್ಕೆ ಆದ್ಯತೆ ನೀಡಿ ತಕ್ಷಣ ಉದ್ಘಾಟನೆ ನೆರವೇರಿಸಿ ಕಟ್ಟಡ ಲೋಕಾರ್ಪಣೆಗೊಳಿಸಿ ಸಿಬ್ಬಂದಿಗೆ ಹಂಚಿಕೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.