ಯಾದಗಿರಿ: ಜಿಲ್ಲೆಯ ಬರದ ಛಾಯೆ ಆವರಿಸಿದೆ. ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಅಷ್ಟಿಷ್ಟು ಅನುದಾನದಲ್ಲಿ ಕುಡಿಯುವ ನೀರು ಒದಗಿಸುವ ಕೆಲಸವನ್ನು ಆರಂಭಿಸಿರುವುದಾಗಿ ಹೇಳುತ್ತಿವೆ. ಆದರೆ ಮೂಕ ಜಾನುವಾರುಗಳ ಸ್ಥಿತಿ ಶೋಚನೀಯವಾಗಿದ್ದು, ಮೇವು, ನೀರಿನ ಕೊರತೆಯಿಂದಾಗಿ ಇದೀಗ ದನಗಳು ಕಸಾಯಿ ಖಾನೆಗಳ ಪಾಲಾಗುತ್ತಿವೆ.
ಮಂಗಳವಾರ ಇಲ್ಲಿಯ ಎಪಿಎಂಸಿಯಲ್ಲಿ ನಡೆಯುವ ಜಾನುವಾರು ಸಂತೆಯಲ್ಲಿ ಬಹುತೇಕ ರೈತರು ತಮ್ಮ ದನಗಳನ್ನು ಕಡಿಮೆ ದರದಲ್ಲಿ ನೆರೆಯ ಆಂಧ್ರಪ್ರದೇಶದ ಕಸಾಯಿಖಾನೆಯ ದಲ್ಲಾಳಿಗಳಿಗೆ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ.
ಪ್ರತಿ ಮಂಗಳವಾರ ನಡೆಯುವ ಜಾನುವಾರು ಸಂತೆಯಲ್ಲಿ ಸಾವಿರಾರು ಜಾನುವಾರುಗಳ ಮಾರಾಟ ನಡೆಯುತ್ತಿದ್ದು, ಅಲ್ಲಿ ಕೃಷಿ ಚಟುವಟಿಕೆಗಳಿಗೆ ರೈತರು ಜಾನುವಾರುಗಳನ್ನು ಖರೀದಿ ಮಾಡುತ್ತಾರೆ. ಆದರೆ ಕಳೆದ ಒಂದು ತಿಂಗಳಿಂದ ಸ್ಥಳಿಯ ಹಾಗೂ ಆಂಧ್ರಪ್ರದೇಶದ ಕಸಾಯಿಖಾನೆಗಳಿಗೆ ಹೆಚ್ಚಿನ ದನಗಳು ಮಾರಾಟ ಆಗುತ್ತಿವೆ.
ರೈತರಿಂದ ಕಡಿಮೆ ದರದಲ್ಲಿ ದನಗಳನ್ನು ಖರೀದಿಸುತ್ತಿರುವ ದಲ್ಲಾಳಿಗಳು, ಲಾರಿಗಳ ಮೂಲಕ ನಿರ್ಭಯವಾಗಿ ನೆರೆಯ ಆಂಧ್ರಪ್ರದೇಶದ ನಾರಾಯಣಪೇಟ್, ಮಹಬೂಬನಗರ ಹಾಗೂ ಹೈದರಾಬಾದ್ಗಳ ಕಸಾಯಿಖಾನೆಗೆ ಸಾಗಿಸುತ್ತಿದ್ದಾರೆ.
ಏನ್ ಮಾಡ್ಲಾಕ ಆಗತದ್ರಿ. ದನಗೋಳಿಗೆ ಹಾಕಾಕ ಮೇವಿಲ್ಲ. ಮಂದಿಗೆ ಕುಡ್ಯಾಕ ನೀರ ಸಿಗದ್ಹಂಗ ಆಗೇತಿ. ಇನ್ನ ದನಕ್ಕ ಎಲ್ಲಿ ನೀರ ತರೋಣ್ರಿ. ದನಗೋಳ ತ್ರಾಸ ನೋಡಾಕ ಆಗವಾಲ್ತರಿ. ನಮ್ಮ ಕೈಯ್ಯಾಗೂ ರೊಕ್ಕ ಇಲ್ಲ. ಹಿಂಗಾಗಿ ಬಂದಷ್ಟ ರೇಟಿಗೆ ಮಾರಾಟ ಮಾಡಬೇಕಾಗೈತಿ ನೋಡ್ರಿ ಎಂದು ಮಂಗಳವಾರ ಇಲ್ಲಿಯ ಎಪಿಎಂಸಿಗೆ ಬಂದಿದ್ದ ರೈತ ಶರಣಪ್ಪ ತಮ್ಮ ಅಳಲು ತೋಡಿಕೊಂಡರು.
ಇತ್ತಿತ್ತಲಾಗ ರೈತರ ಖರೀದಿಗಿಂತ ಕಸಾಯಿಖಾನೆ ದಲ್ಲಾಳಿಗೋಳ ಖರೀದಿ ಜೋರ ಆಗೈತಿ. ರೈತರ ಏನ್ ಮಾಡ್ಯಾರು, ರೊಕ್ಕ ಕೊಡ್ತಾರಂತ ದನ ಮಾರಾಟ ಮಾಡ್ತಾರ. ಹಿಂಗಾದ್ರ ದನಗೋಳ ಉಳ್ಯೋದ ಹೆಂಗ್ರಿ ಎಂದು ಹತ್ತಿಕುಣಿ ಗ್ರಾಮದ ರೈತ ಭೀಮರಡ್ಡಿ ಕೌಳೂರ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಾರೆ.
ಜಿಲ್ಲಾಡಳಿತ ಕೂಡಲೇ ಎಚ್ಚೆತ್ತುಕೊಂಡು ಜಾನುವಾರಗಳ ಸಂತೆಗೆ ಬರುವ ಕಸಾಯಿಖಾನೆ ದಲ್ಲಾಳಿಗಳನ್ನು ನಿರ್ಬಂಧಿಸಬೇಕು. ಗಡಿಭಾಗದಲ್ಲಿ ಪೊಲೀಸ್ ಚೆಕ್ಪೋಸ್ಟ್ಗಳನ್ನು ಆರಂಭಿಸುವ ಮೂಲಕ ರೈತರ ಜಾನುವಾರು ಹಾಗೂ ಮೇವು ಮಾರಾಟ ತಡೆಯಬೇಕು. ಅಲ್ಲದೇ ಗೋಶಾಲೆ ಆರಂಭಿಸಿ, ಜಾನುವಾರುಗಳ ರಕ್ಷಣೆಗೆ ಆದ್ಯತೆ ನೀಡಬೇಕು ಎಂದು ವಿಕಾಸ ಅಕಾಡೆಮಿ ಜಿಲ್ಲಾ ಸಂಚಾಲಕ ನೀಲಕಂಠರಾಯ ಯಲ್ಹೇರಿ ಒತ್ತಾಯಿಸುತ್ತಾರೆ.
ಎಪಿಎಂಸಿಯಲ್ಲೇ ನೀರಿಗೆ ಬರ: ನೀರು, ಮೇವು ಇಲ್ಲದೇ ದನಗಳನ್ನು ಮಾರಾಟ ಮಾಡಲು ಎಪಿಎಂಸಿಗೆ ಬರುವ ರೈತರಿಗೇ ಕುಡಿಯಲು ನೀರು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರಿಂದ ಕೋಟ್ಯಂತರ ಆದಾಯ ಗಳಿಸುತ್ತಿರುವ ಇಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ರೈತರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಲ್ಲದೇ ಪರದಾಡುವಂತಾಗಿದೆ.
ಪ್ರತಿ ಮಂಗಳವಾರ ಬೃಹತ್ ಪ್ರಮಾಣದಲ್ಲಿ ಜಾನುವಾರುಗಳ ಸಂತೆ ನಡೆಯುತ್ತದೆ. ಜಿಲ್ಲೆಯ ಗ್ರಾಮೀಣ ಪ್ರದೇಶದ ಜನರು ಜಾನುವಾರುಗಳ ಮಾರಾಟಕ್ಕೆ ಇಲ್ಲಿಗೆ ಬರುತ್ತಾರೆ. ಆದರೆ ಇಲ್ಲಿಯ ಎಪಿಎಂಸಿಯಲ್ಲಿ ಮಾತ್ರ ನೀರು ಸೇರಿದಂತೆ ಅಗತ್ಯ ಸೌಲಭ್ಯಗಳೇ ಸಿಗದಂತಾಗಿವೆ.
ಎಪಿಎಂಸಿಯಲ್ಲಿ ಮಾರಾಟ ಆಗುವ ಪ್ರತಿ ಜಾನುವಾರುಗಳಿಂದ ಎಪಿಎಂಸಿ ಸಿಬ್ಬಂದಿ ರೂ. 5 ಪಡೆದು, ರೈತರಿಗೆ ರಸೀದಿ ನೀಡುತ್ತಾರೆ. ಸಾವಿರಾರು ರೂಪಾಯಿ ರೈತರಿಂದ ಸಂಗ್ರಹವಾಗುತ್ತದೆ. ಆದರೆ ರೈತರು ಮಾತ್ರ ತಮ್ಮ ಜಾನುವಾರುಗಳೊಂದಿಗೆ ಮಾರುಕಟ್ಟೆ ತುಂಬೆಲ್ಲ ನೀರಿಗಾಗಿ ಹುಡುಕಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿಗೆ ಬರುವ ರೈತರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಎಪಿಎಂಸಿ ಕಾರ್ಯದರ್ಶಿ, ಕುಡಿಯುವ ನೀರಿನ ಪೈಪ್ ಒಡೆದಿದೆ. ವಿದ್ಯುತ್ ಕೂಡ ಇಲ್ಲದೇ ಇರುವುದರಿಂದ ನೀರಿನ ತೊಟ್ಟಿಗಳಿಗೆ ನೀರು ಸರಬರಾಜು ಮಾಡಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ.
ಈ ವರ್ಷ ದಾಖಲೆಯ ಪ್ರಮಾಣದಲ್ಲಿ ಶೇಂಗಾ ವ್ಯಾಪಾರ ಇಲ್ಲಿ ನಡೆದಿದೆ. ಮಾರುಕಟ್ಟೆಗೆ ರೂ. 3.44 ಕೋಟಿಗೂ ಅಧಿಕ ಆದಾಯ ರೈತರಿಂದ ಬಂದಿದೆ. ಸಂತೆಯಲ್ಲಿ ಜಾನುವಾರುಗಳಿಗೆ ಕನಿಷ್ಠ ನೀರನ್ನೂ ಒದಗಿಸದೇ ಇರುವುದು ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಸಾಕ್ಷಿ ಎಂದು ಎಪಿಎಂಸಿಯ ಬಹುತೇಕ ವರ್ತಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಆಶ್ರಯ: ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಮಂಗಳವಾರ ರೈತರು ಹಾಗೂ ಜಾನುವಾರುಗಳಿಗೆ ನೀರಿಲ್ಲದೆ ಪರದಾಡುತ್ತಿದ್ದುದನ್ನು ಗಮನಿಸಿದ ಮಹಾವೀರ ಟ್ರೇಡಿಂಗ್ ಕಂಪೆನಿ ಮಾಲೀಕ ರಾಜೇಶ ದೋಖಾ, ತಮ್ಮ ಅಂಗಡಿ ಎದುರು ಜಾನುವಾರುಗಳಿಗೆ ನೀರು ಹಾಗೂ ಮೇವಿನ ವ್ಯವಸ್ಥೆ ಮಾಡಿದ್ದರು. ಎಪಿಎಂಸಿಗೆ ಬಂದ ಬಹುತೇಕ ರೈತರಿಗೆ ರಾಜೇಶ ಅವರ ವ್ಯವಸ್ಥೆಯೇ ಆಸರೆಯಾಗಿ ಪರಿಣಮಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.