ADVERTISEMENT

ಬಾರದ ಮಳೆ ಬಾಡುತ್ತಿರುವ ಬೆಳೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2013, 10:47 IST
Last Updated 3 ಆಗಸ್ಟ್ 2013, 10:47 IST

ಶಹಾಪುರ:  ತಾಲ್ಲೂಕಿನ ಕೃಷ್ಣಾ ನದಿ ಪಾತ್ರದ ಜಮೀನು ಪ್ರವಾಹಕ್ಕೆ ಸಿಲುಕಿ ಹಾನಿ ಉಂಟಾಗಿದ್ದು ಒಂದೆಡೆಯಾದರೆ ಇನ್ನೊಂದಡೆ, ಬಿತ್ತನೆ ಮಾಡಿದ ಹತ್ತಿ, ತೊಗರಿ, ಸೂರ್ಯಪಾನ, ಸಜ್ಜೆ ಬೆಳೆಗೆ ಮಳೆಯಿಲ್ಲದೆ ಬೆಳೆ ಬಾಡುತ್ತಲಿವೆ.

ಕಳೆದ ಹತ್ತು ದಿನಗಳಿಂದ ಮೊಡ ಕವಿದ ವಾತಾರಣವಿದ್ದು, ಮಳೆ ಬರುತ್ತಿಲ್ಲ. ಜೊತೆಯಲ್ಲಿ ಆಷಾಢದ ಗಾಳಿಯ ಹೊಡೆತಕ್ಕೆ ಒಂದಿಷ್ಟು ಜೀವ ಹಿಡಿದುಕೊಂಡ ಬೆಳೆಗೂ ಸಂಚಕಾರ ಬಂದಿದೆ.

ಕೆಲ ದಿನಗಳ ಹಿಂದೆ ಜಿಟಿ ಜಿಟಿ ಸುರಿದ ಮಳೆಯಿಂದ ಹೊಲದಲ್ಲಿ ಕಳೆ ಹೆಚ್ಚಾಗಿ ಕಾಣಿಸಿಕೊಂಡು, ನಾಟಿ ಮಾಡಿದ ಹತ್ತಿ ಬೆಳೆಗಿಂತ ಕಳೆ ದೊಡ್ಡದಾಗಿ ಬೆಳೆಯಲಾರಂಭಿಸಿತು. ಕೊನೆಗೆ ಕಳೆ ತೆಗೆದು ಹೊಲವನ್ನು ಸ್ವಚ್ಛಗೊಳಿಸಲಾಗಿದೆ. ತೇವಾಂಶ ಕಡಿಮೆಯಾಗಿದ್ದು ಉತ್ತಮ ಮಳೆಯಾದರೆ ನಮಗೆ ಹೆಚ್ಚು ಖುಷಿ ನೀಡುತ್ತದೆ. ಆಕಾಶವನ್ನು ದಿಟ್ಟಿಸಿ ನೋಡುವುದು ಕಾಯಕವಾಗಿದೆ ಎನ್ನುತ್ತಾರೆ ರೈತ ಯಮನಪ್ಪ.

ಸದ್ಯ ಹತ್ತಿ ಹಾಗೂ ಇನ್ನಿತರ ಬೆಳೆಯಲ್ಲಿ ಕಳೆ ತೆಗೆದು ಹಾಕಿದ್ದು ರಸಗೊಬ್ಬರ ಹಾಕಬೇಕು ಎನ್ನುವಾಗ ಮಳೆ ಬರುತ್ತಿಲ್ಲ. ಇದರಿಂದ ಬೆಳೆ ಬೆಳವಣಿಗೆ ಕುಂಠಿತವಾಗುತ್ತದೆ. ಪ್ರಸಕ್ತ ಮುಂಗಾರಿನಿಂದಲೂ ನಮ್ಮ ತಾಲ್ಲೂಕಿನಲ್ಲಿ ದೊಡ್ಡದಾದ ಮಳೆಯೇ ಆಗಿಲ್ಲ.

ಗಾಳಿ ಬೀಸುತ್ತಿದ್ದರಿಂದ ತೇವಾಂಶ ಕಡಿಮೆಯಾಗಿದ್ದು ಮುಂದೇನು ಎಂಬ ಆತಂಕ ಶುರುವಾಗಿದೆ ಎನ್ನುತ್ತಾರೆ ಶಿವಪ್ಪ.

ತಾಲ್ಲೂಕಿನಲ್ಲಿ ಹೆಚ್ಚಿನ ರೈತರು ಮಳೆಯ ನಿರೀಕ್ಷೆಯಲ್ಲಿದ್ದಾರೆ. ಉತ್ತಮ ಮಳೆಗಾಗಿ ಕಾಯುತ್ತಿದ್ದಾರೆ. ವರುಣ ಕೃಪೆಗೆ ಕಾಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.