ADVERTISEMENT

ಬಿತ್ತನೆ ಬೀಜಕ್ಕೆ ಕಾಟಾಚಾರದ ಸಹಾಯ ಧನ: ಆರೋಪ

​ಪ್ರಜಾವಾಣಿ ವಾರ್ತೆ
Published 19 ಜುಲೈ 2013, 9:51 IST
Last Updated 19 ಜುಲೈ 2013, 9:51 IST

ಅಫಜಲಪುರ: `ಸರ್ಕಾರ ಮುಂಗಾರು ಬಿತ್ತನೆಗಾಗಿ ಶೇ.50 ಸಹಾಯ ಧನದಲ್ಲಿ ಬಿತ್ತನೆ ಬೀಜ ವಿತರಣೆ ಮಾಡುತ್ತಿದೆ. ಆದರೆ ಮುಕ್ತ ಮಾರುಕಟ್ಟೆಯಲ್ಲಿ ದೊರೆಯುವ ಬಿತ್ತನೆ ಬೀಜಗಳ ಬೆಲೆಗೆ ಹೋಲಿಸಿದರೆ ರೈತರಿಗೆ ಕೇವಲ ಶೆ.25 ಮಾತ್ರ ಸಹಾಯ ಧನ ದೊರೆಯುತ್ತಿದೆ. ಇದು ಕಾಟಾಚಾರದ ಸಹಾಯ ಧನ' ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಸಿದ್ಧಾರ್ಥ ಬಸರಿಗಿಡದ ಆರೋಪಿಸಿದರು.

ಇಲ್ಲಿನ ರೈತ ಸಂಪರ್ಕ ಕೇಂದ್ರಕ್ಕೆ ಬುಧವಾರ ಭೇಟಿ ನೀಡಿ ಮಾತನಾಡಿದ ಅವರು, `ಖಾಸಗಿ ಅಗ್ರೋ ಕೇಂದ್ರಗಳಲ್ಲಿ ಮಾರಾಟವಾಗುತ್ತಿರುವ ಬಿತ್ತನೆ ಬೀಜದ ಬೆಲೆ ಮತ್ತು ಸರ್ಕಾರ ರೈತ ಸಂಪರ್ಕ ಕೇಂದ್ರಗಳ ಮುಖಾಂತರ ಮಾರಾಟ ಮಾಡುತ್ತಿರುವ ಬೀಜದ ಬೆಲೆಗಳಲ್ಲಿ ಹೆಚ್ಚಿನ ಬೆಲೆ ವ್ಯತ್ಯಾಸವಿಲ್ಲ. ರೈತರಿಗೆ ಪ್ರಯೋಜನವಾಗುತ್ತಿಲ್ಲ. ಸರ್ಕಾರ ಖಾಸಗಿ ಆಗ್ರೋ ಕೇಂದ್ರಗಳಲ್ಲಿ ಮಾರಾಟವಾಗುವ ಬಿತ್ತನೆ ಬೀಜಗಳ ಬೆಲೆಯ ಅರ್ಧದ ಬೆಲೆಯಲ್ಲಿ ರೈತರಿಗೆ ನೀಡಿದರೆ, ಅದು ನಿಜವಾಗಿ ಶೇ.50 ಸಹಾಯ ಧನ ನೀಡಿದಂತಾಗುತ್ತದೆ' ಎಂದು ಅವರು ಪ್ರತಿಪಾದಿಸಿದರು.

`ಡಿ.ಎ.ಪಿ ರಸ ಗೊಬ್ಬರ ಬೆಲೆ ಪ್ರತಿ 50 ಕೆ.ಜಿ.ಗೆ 1200 ರೂಪಾಯಿ ಮಾರಾಟವಾಗುತ್ತಿದೆ. ರೈತರಿಗೆ ಇದು ಭಾರವಾಗುತ್ತಿದೆ ಸಾಕಷ್ಟು ರೈತರು ಗೊಬ್ಬರ ಬೆಳೆಸುವದು ಕಡಿಮೆ ಮಾಡುತ್ತಿದ್ದಾರೆ. ಸರ್ಕಾರ ಗೊಬ್ಬರಕ್ಕೆ ಶೇ.50 ಸಹಾಯ ಧನ ನೀಡಬೇಕು' ಎಂದು ಅವರು ಒತ್ತಾಯಿಸಿದರು.
ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಪ್ರಾಮಾಣಿಕವಾಗಿ ಬಿತ್ತನೆ ಬೀಜ ವಿತರಣೆ ಮಾಡಬೇಕು ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ರೈತರ ಸೌಲಭ್ಯಗಳು ದುರ್ಬಳಕೆ ಆಗದಂತೆ ನೋಡಿಕೊಳ್ಳಬೇಕು.

ಕೃಷಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವದನ್ನು ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಪ್ರಸ್ತಾವನೆ ಮಾಡುವದಾಗಿ ಅವರು ರೈತ ಸಂಪರ್ಕ ಅಧಿಕಾರಿಗಳಿಗೆ ತಿಳಿಸಿದರು. ಕೃಷಿ ಅಧಿಕಾರಿ ಅರವಿಂದ ರಾಠೋಡ ಹಾಗೂ ಸಹಾಯಕ ಕೃಷಿ ಅಧಿಕಾರಿ ದೇವೆಂದ್ರ ಕಾಂಬಳೆ, ಚಿದಾನಂದ ವಾಗ್ಮೊರೆ ಹಾಗೂ ಎಸ್.ಜಿ.ಬೋಗುಂಡೆ ಅವರು ಕೃಷಿ ಇಲಾಖೆ ಸಮಸ್ಯೆಗಳನ್ನು ಜಿ.ಪಂ ಸದಸ್ಯರ ಗಮನಕ್ಕೆ ತಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT