ಸಾತನೂರು (ಕನಕಪುರ): ಗಿಡ ನೆಡುವುದರ ಜತೆಗೆ ಸಂಸ್ಕರಿಸಿದ ಬೀಜದುಂಡೆಗಳನ್ನು ಆಯಕಟ್ಟಿನ ಜಾಗದಲ್ಲಿ ಹಾಕಿದರೆ ಬೀಜ ಮೊಳೆತು ಮರಗಳು ಯಶಸ್ವಿಯಾಗಿ ಬೆಳೆಯಲಿವೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ್ ಹೇಳಿದರು.
ತಾಲ್ಲೂಕಿನ ಸಾತನೂರು ಹೋಬಳಿ ಶಂಭೇಗೌಡನದೊಡ್ಡಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಗ್ರಾಮ ಪಂಚಾಯತಿ ಹಾಗೂ ಶಾಲಾ ಆಡಳಿತ ಮಂಡಳಿಯ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಭೂಮಿಯಲ್ಲಿ ಹುಟ್ಟಿದ ಪ್ರತಿಯೊಬ್ಬರು ಗಿಡಗಳನ್ನು ಉಳಿಸಿ ಬೆಳೆಸಲು ಮುಂದಾಗಬೇಕು ಹಾಗೂ ಕಿರಿಯರಿಗೆ ಪರಿಸರದ ಮಹತ್ವ ತಿಳಿಸಿ ಕಾಡು ಬೆಳೆಸಲು ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು.
ಹೇಮಾವತಿ ಹೆಗ್ಗಡೆಯವರ ಆಶಯದಂತೆ ಪರಿಸರ ಸಂರಕ್ಷಣೆಯ ನೆಲೆಯಲ್ಲಿ ಗಿಡಗಳ ನಾಟಿ, ಕೆರೆಗಳ ಹೂಳೆತ್ತುವ ಕಾರ್ಯಕ್ರಮ, ಪ್ಲಾಸ್ಟಿಕ್ ಬಳಕೆಯ ನಿಷೇಧ, ಶೌಚಾಲಯ ಬಳಕೆ ಬಗ್ಗೆ ಮತ್ತು ಬೀಜದುಂಡೆ ತಯಾರಿ ಮಾಡಿ ಸೂಕ್ತ ಜಾಗದಲ್ಲಿ ನಾಟಿ ಮಾಡುವಂತಹ ಕೆಲಸವನ್ನು ಕೈಗೊಳ್ಳಬೇಕೆಂದು ತಿಳಿಸಿದರು. ಶಾಲೆಯ ಮುಖ್ಯ ಶಿಕ್ಷಕ ಶ್ರೀನಿವಾಸ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಒಂದು ಉತ್ತಮವಾದ ಹೆಜ್ಜೆಯನ್ನಿಟ್ಟಿದೆ. ಎಲ್ಲರೂ ಪರಿಸರ ಸಂರಕ್ಷಣೆಗೆ ಕೈ ಜೋಡಿಸೋಣವೆಂದು ತಿಳಿಸಿದರು.
ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಪಾಲುದಾರ ಸದಸ್ಯರು, ಗ್ರಾಮಸ್ಥರು ಮತು ಶಾಲಾ ಮಕ್ಕಳಿಂದ ಹುಣಸೆ, ಹೊಂಗೆ, ಮಾವು, ನೇರಳೆ, ಹಲಸು ಮತ್ತು ಬೇವಿನ ಬೀಜಗಳನ್ನು ಉಪಯೋಗಿಸಿಕೊಂಡು 4,001 ಬೀಜದ ಉಂಡೆಗಳನ್ನು ತಯಾರಿಸಲಾಯಿತು.
ಶಾಲಾ ವಠಾರದಲ್ಲಿ ಸಸಿ ನಾಟಿ ಕಾರ್ಯಕ್ರಮವನ್ನು ಮಾಡುವ ಮುಖಾಂತರ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮದ ಯೋಜನಾಧಿಕಾರಿ ಹರಿಪ್ರಸಾದ್ ಬಿ.ರೈ, ಗ್ರಾಮ ಪಂಚಾಯಿತಿ ಸದಸ್ಯೆ ಲಕ್ಷ್ಮಿ, ಕೃಷಿ ಮೇಲ್ವಿಚಾರಕ ಲೋಹಿತ್, ಒಕ್ಕೂಟದ ಅಧ್ಯಕ್ಷ ಶಿವಕುಮಾರ್, ಶಾಂತಿ, ನಾಗೇಶ್ ಹಾಗೂ ಸ್ವಸಹಾಯ ಮತ್ತು ಪ್ರಗತಿಬಂಧು ಸಂಘಗಳ ಸದಸ್ಯರು, ಶಾಲಾ ಶಿಕ್ಷಕರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
**
ಹೆಚ್ಚುತ್ತಿರುವ ತಾಪಮಾನ ತಗ್ಗಿಸಿ ಸೂಕ್ತ ಮಳೆ ಬೆಳೆಯಾಗುವ ಹಾಗೆ ಮಾಡಲು ಕಾಡು ಉಳಿಸಿ ಬೆಳೆಸುವುದೊಂದೇ ಮಾರ್ಗೋಪಾಯ
ಬಾಬು ನಾಯ್ಕ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.