ADVERTISEMENT

ಬೆಟ್ಟದ ದೇವಸ್ಥಾನಕ್ಕೆ ಗ್ರಾಮಸ್ಥರಿಂದ ರಸ್ತೆ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2013, 5:29 IST
Last Updated 14 ಡಿಸೆಂಬರ್ 2013, 5:29 IST

ಯಾದಗಿರಿ: ತಾಲ್ಲೂಕಿನ ತಾತಳ­ಗೇರಾ ಬೆಟ್ಟದಲ್ಲಿರುವ ಆಂಜನೇಯ ದೇವ­ಸ್ಥಾನಕ್ಕೆ ಮುಳ್ಳು– ಕಂಟಿಗಳನ್ನು ಸ್ವಚ್ಛಗೊಳಿಸುವುದರ ಮೂಲಕ ಗ್ರಾಮಸ್ಥರು ಮಂಗಳವಾರ ರಸ್ತೆ ನಿರ್ಮಾಣ ಮಾಡಿದರು. ‘ಆಂಜನೇಯ ದೇವಸ್ಥಾನವು ಮುಖ್ಯ ರಸ್ತೆಯಿಂದ 3.5 ಕಿ.ಮೀ ದೂರ­ವಿದೆ. ಮುಳ್ಳು– ಕಂಟಿಗಳ ಮೂಲಕ ಸಾಗುವ ಬೆಟ್ಟದ ದಾರಿ ಇದಾಗಿದೆ.

ಮಳೆ ಬಾರದಿರುವಾಗ ಬೆಳೆಗಳು ನಾಶವಾಗುವ ಸಮಯದಲ್ಲಿ ರೈತರು ಸಂಕಷ್ಟದಲ್ಲಿದ್ದಾಗ ಈ ದೇವರ ದರ್ಶನ ಪಡೆದು ಭಕ್ತಿಯಿಂದ ಪೂಜಿಸಿ­ದರೆ ಸಾಕು ವಾರದೊಳಗೆ ಮಳೆಬಂದ ನಿದರ್ಶನಗಳು ಬಹಳಷ್ಟು ಇವೆ’ ಎಂದು ಗ್ರಾಮಸ್ಥರು ಹೇಳುತ್ತಾರೆ. ಈ ದೇವಸ್ಥಾನಕ್ಕೆ ಸುತ್ತಲಿನ ಗ್ರಾಮ­ಗಳಾದ ಅರಿಕೇರಾ, ರಾಮಸಮುದ್ರ, ಬೆಳಗೇರಾ, ಆಶನಾಳ, ಯಂಪಾಡ ಗ್ರಾಮಗಳಿಂದ ಸಹಸ್ರಾರು ಸಂಖ್ಯೆ­ಯಲ್ಲಿ ಭಕ್ತರು ಬರುತ್ತಾರೆ.

‘ಆಂಜನೇಯ ದೇವಸ್ಥಾನವು ಬಹಳ ಪುರಾತನವಾಗಿದ್ದು, ಒಂದೇ ಕಂಬದಲ್ಲಿ ಮೂರ್ತಿ ಇಲ್ಲಿದೆ. ಆದರೆ, ದೇವ­ಸ್ಥಾನದ ಕಟ್ಟಡ ಇಲ್ಲ. ಮಳೆ ಬಂದರೆ ಭಕ್ತರಿಗೆ ಆಶ್ರಯ, ನೀರಿನ ವ್ಯವಸ್ಥೆ ಇರುವುದಿಲ್ಲ.  ದೇವಸ್ಥಾನಕ್ಕೆ ಬರುವ ಭಕ್ತರಿಗೆ ನೀರಿನ ಅವಶ್ಯಕತೆ ಇರುತ್ತದೆ. ಅದಕ್ಕಾಗಿ ಶೀಘ್ರದಲ್ಲಿ ಈ ಸ್ಥಳದಲ್ಲಿ ಬೋರ್‌ವೆಲ್ ಹಾಕಿಸಿ ಭಕ್ತಾದಿಗಳ ಬೇಡಿಕೆ ಈಡೇರಿಸಬೇಕು ಎಂದು ಯಾದ­ಗಿರಿ ಜಿಲ್ಲಾ ಟೋಕರಿ ಕೋಲಿ (ಕಬ್ಬಲಿಗ) ಸಮಾಜದ ಅಧ್ಯಕ್ಷ ಉಮೇಶ ಮುದ್ನಾಳ್ ಅವರ ನೇತೃತ್ವದಲ್ಲಿ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ದೇವಸ್ಥಾನಕ್ಕೆ ಹೋಗುವ ಮಾರ್ಗ­ವನ್ನು ಗ್ರಾಮಸ್ಥರೇ ಸ್ವಯಂ ಪ್ರೇರಣೆ­ಯಿಂದ ಮುಳ್ಳು ಕಂಟಿಗಳನ್ನು ಸ್ವಚ್ಛ­ಗೊಳಿಸಿ ರಸ್ತೆ ನಿರ್ಮಿಸಿದರು. ನಂತರ ಉಮೇಶ ಮುದ್ನಾಳ್‌ ನೇತೃತ್ವದಲ್ಲಿ ಸಭೆ ನಡೆಸಿದರು. ಹುಸನಪ್ಪ, ಜಲ್ಲಪ್ಪ, ನಾಗಪ್ಪ, ಮಹೇಶ, ಶರಣಪ್ಪ, ದೇವಪ್ಪ, ಶರಣಪ್ಪ ದುರ್ಗದ, ಮಲ್ಲಿಕಾರ್ಜುನ, ಸಿದ್ದಲಿಂಗಪ್ಪ, ಕಾಶಪ್ಪ, ರಾಮಪ್ಪ, ಹಣಮಂತ, ಸಾಬಣ್ಣ, ಮರಗಪ್ಪ, ಮರಗಪ್ಪ ಅಗಸರ, ಮಲ್ಲಿಕಾರ್ಜುನ ದುರ್ಗದ, ಸಾಬಣ್ಣ ಮಲೆಪಲ್ಲಿ, ಭೀಮಶಪ್ಪ, ಕಾಶಪ್ಪ ದುರ್ಗದ, ನಾಗಪ್ಪ ಅಗಸರ, ಮಾರೆಪ್ಪ ನಂದಳ್ಳಿ, ನಾಗಪ್ಪ ಬಾಗ್ಲಿ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT