ಹುಣಸಗಿ: ದೀಪಾವಳಿ ಹಬ್ಬದ ಅಂಗವಾಗಿ ಹಲವಾರು ದಿನ ಬಳಕೆ ಮತ್ತು ಪೂಜಾ ಸಾಮಗ್ರಿಗಳ ಬೆಲೆ ಗಗನ ಮುಖಿಯಾಗಿದ್ದರೂ ಕೂಡ ಜನರು ಖರೀದಿಯಲ್ಲಿ ತೊಡಗಿರುವುದು ಕಂಡು ಬಂತು. ದೀಪಾವಳಿ ಅಮಾವಾಸ್ಯೆ ನಿಮಿತ್ತ ಗುರುವಾರ ಹುಣಸಗಿಯಲ್ಲಿ ಸಂತೆಯ ವಾತಾವರಣವಿತ್ತು. ಬಹುತೇಕ ಜನರು ಪೂಜಾ ಸಾಮಗ್ರಿ, ತೆಂಗಿನಕಾಯಿ, ಹೂವು, ಹಣ್ಣು, ಕುಂಬಳಕಾಯಿ ಖರೀದಿಸಿದರು.
‘ಬೆಳಿಗ್ಗೆಯಿಂದ ವ್ಯಾಪಾರ ವಹಿವಾಟು ಜೋರಾಗಿತ್ತು. ಆದರೆ ಸಾಂಪ್ರದಾಯಿಕ ಹಣತೆಗಳ ಖರೀದಿಯಲ್ಲಿ ಜನರು ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ’ ಎಂದು ಪಟ್ಟಣದ ನಿವಾಸಿ ಬಸವರಾಜ ಕುಂಬಾರ ತಿಳಿಸಿದರು.
‘ಈ ಹಿಂದೆ ಬಳಸುತ್ತಿದ್ದ ಪ್ರಣತಿಗಳ ಬದಲಾಗಿ ಜಗಮಗಿಸುವ ವಿದ್ಯುತ್ ದೀಪಗಳು, ಬಣ್ಣ ಬಣ್ಣದ ಆಕಾಶ ಬುಟ್ಟಿಗಳು, ಬಗೆಬಗೆಯ ಪಟಾಕಿಗಳು ಮಾರುಕಟ್ಟೆಗೆ ಬಂದಿವೆ. ಅಲ್ಲದೇ ಚೆಂಡು ಹೂವಿನ ಗಿಡ, ಬಾಳೆದಿಂಡು, ತೆಂಗಿನಗರಿಯ ಮಾರಾಟ ಕೂಡ ಭರ್ಜರಿಯಾಗಿತ್ತು.
ಕುಂಬಳಕಾಯಿ ₹100ರಿಂದ 150ರ ವರೆಗೆ ಬೆಲೆ ಇದೆ. ಆದರೂ ಖರೀಸುವದು ಅನಿವಾರ್ಯವಾಗಿದೆ’ ಎಂದು ಗ್ರಾಹಕ ಮಲ್ಲಿಕಾರ್ಜುನ ದೇಸಾಯಿ ತಿಳಿಸಿದರು. ‘ದೀಪಾವಳಿ ಹಬ್ಬದಲ್ಲಿ ಗ್ರಾಹಕರನ್ನು ಸೆಳೆಯಲು ಬಗೆಬಗೆಯ ಹಣ್ಣುಗಳು, ನೆಲ್ಲಿಕಾಯಿ ತರಿಸಲಾಗಿದೆ’ ಎಂದು ಹಣ್ಣಿನ ವ್ಯಾಪಾರಿ ಶಾಂತಮ್ಮ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.