ADVERTISEMENT

ಬ್ಯಾನರ್‌ಗಳ ಅಡಿ ಮರೆಯಾದ ರಾಷ್ಟ್ರಲಾಂಛನ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2013, 9:55 IST
Last Updated 8 ಏಪ್ರಿಲ್ 2013, 9:55 IST

ಯಾದಗಿರಿ: ರಾಷ್ಟ್ರಧ್ವಜ, ರಾಷ್ಟ್ರಗೀತೆ, ರಾಷ್ಟ್ರಲಾಂಛನಕ್ಕೆ ಗೌರವ ಕೊಡುವುದು ಭಾರತದ ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಯಾರಾದರೂ ಅಗೌರವ ತೋರಿದರೆ ಅವರ ಮೇಲೆ ಕಾನೂನಿನ ಕ್ರಮ ತೆಗೆದುಕೊಳ್ಳಬಹುದು.

ಆದರೆ ಈಗಾಗಲೇ ತಾಲ್ಲೂಕು ಕೇಂದ್ರವೆಂದು ಘೋಷಣೆಯಾಗಿರುವ ವಡಗೇರಾದ ಮುಖ್ಯ ದ್ವಾರದ ಮೇಲೆ ರಾಷ್ಟ್ರ ಲಾಂಛನವನ್ನು ಕೆತ್ತಿಸಲಾಗಿದ್ದು, ರಾಷ್ಟ್ರ ಲಾಂಛನವನ್ನು ಬ್ಯಾನರ್‌ಗೇ ಆವರಿಸಿಕೊಂಡಿವೆ.

ಈ ಮುಖ್ಯ ದ್ವಾರದ ಮೂಲಕವೇ ಅನೇಕ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು, ಬುದ್ಧಿಜೀವಿಗಳು, ಸಂಘ ಸಂಸ್ಥೆಯವರು ಸಂಚರಿಸುತ್ತಾರೆ. ಇವರೆಲ್ಲರೂ ಇದನ್ನು ನೋಡಿ ಕಣ್ಣಿದ್ದು ಕುರುಡರಂತೆ ಹೋಗುತ್ತಾರೆ. ಯಾರೊಬ್ಬರು ರಾಷ್ಟ್ರ ಲಾಂಛನಕ್ಕೆ ಹಾಕಿದ ಬ್ಯಾನರ್‌ಗಳನ್ನು ತೆಗೆಸಲು ಕ್ರಮ ಕೈಗೊಳ್ಳದೇ ಇರುವುದನ್ನು ಸಾರ್ವಜನಿಕರು ಖಂಡಿಸಿದ್ದಾರೆ.

ಸಂಘ ಸಂಸ್ಥೆಯವರು, ಖಾಸಗಿ ಕಂಪೆನಿಯವರು ಗೊತ್ತಿದ್ದೋ, ಗೊತ್ತಿಲ್ಲದೆಯೋ ರಾಷ್ಟ್ರ ಲಾಂಛನಕ್ಕೆ ಬ್ಯಾನರ್‌ಗಳನ್ನು ತೂಗು ಹಾಕಿದ್ದಾರೆ. ಆದರೆ ಅದನ್ನು ತೆರೆವುಗೊಳಿಸಬೇಕಾದ ಪಂಚಾಯಿತಿಯ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಪ್ರಶ್ನೆ ಮಾಡುತ್ತಿದ್ದಾರೆ.

ಇದರ ಬಗ್ಗೆ ಉಪ ತಹಸೀಲ್ದಾರರನ್ನು ಸಂಪರ್ಕಿಸಿದಾಗ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಹೇಳಿ ಬ್ಯಾನರ್‌ಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಎಂದು ಹೇಳಿದರು.

ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿ ಕೊಡಲು ಅನೇಕ ದೇಶಾಭಿಮಾನಿಗಳು ತ್ಯಾಗ, ಬಲಿದಾನಗಳನ್ನು ಕೊಟ್ಟಿದ್ದಾರೆ. ಸ್ವಾತಂತ್ರ್ಯವನ್ನು ರಕ್ಷಿಸಿ, ಕಾಪಾಡುವುದು, ದೇಶದ ಸಂವಿಧಾನ, ರಾಷ್ಟ್ರಗೀತೆ, ರಾಷ್ಟ್ರಧ್ವಜ, ರಾಷ್ಟ್ರಲಾಂಛನಕ್ಕೆ ಗೌರವ ಕೊಡುವುದು ಪ್ರತಿಯೊಬ್ಬ ಭಾರತಿಯ ಪ್ರಜೆಯ ಕರ್ತವ್ಯ. ಆದರೆ ಇಂದಿನ ಯುವಕರಲ್ಲಿ ದೇಶಾಭಿಮಾನದ ಕೊರತೆ ಎದ್ದು ಕಾಣುವುದು ವಿಷಾದನೀಯ ಎಂದು ಗ್ರಾಮದ ಹಿರಿಯರಾದ ಬಸವರಾಜಪ್ಪ ಸಾಹು ಹೇಳುತ್ತಾರೆ.

ಗ್ರಾಮದ ಮುಖ್ಯದ್ವಾರದ ಮೇಲೆ ಇರುವ ರಾಷ್ಟ್ರಲಾಂಛನಕ್ಕೆ ಖಾಸಗಿ ವ್ಯಕ್ತಿಗಳು, ಸಂಘ ಸಂಸ್ಥೆಯವರು ಹಾಕಿರುವ ಬ್ಯಾನರ್‌ಗಳನ್ನು ತೆಗೆಸದಿದ್ದರೆ ತಹಸೀಲ್ ಕಾರ್ಯಾಲಯದ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕರವೇ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಶರಣು ಇಟಗಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.