ADVERTISEMENT

ಭೂ ಸಂತ್ರಸ್ತರಿಂದ ಧರಣಿ ಸತ್ಯಾಗ್ರಹ

ಭೂಮಿ ನೀಡಿದವರಿಗೆ ರೈಲ್ವೆ ಕೋಚ್ ಫ್ಯಾಕ್ಟರಿಯಲ್ಲಿ ಸಿಗದ ಉದ್ಯೋಗ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2018, 6:31 IST
Last Updated 30 ಮಾರ್ಚ್ 2018, 6:31 IST
ಯಾದಗಿರಿ ಸಮೀಪ ರೈತರು ಕಡೇಚೂರ-ಬಾಡಿಯಾಳ ಕೈಗಾರಿಕಾ ಪ್ರದೇಶ ನಿರ್ಮಾಣಕ್ಕೆ ಭೂಮಿ ಒದಗಿಸಿದ ರೈತ ಕುಟುಂಬಗಳಿಗೆ ಉದ್ಯೋಗ ಕಲ್ಪಿಸುವಂತೆ ಆಗ್ರಹಿಸಿ ಈಚೆಗೆ ಯಾದಗಿರಿ-–ರಾಯಚೂರು ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ತಹಶೀಲ್ದಾರ್ ಮಲ್ಲೇಶ್ ತಂಗಾ ಅವರಿಗೆ ಮನವಿ ಸಲ್ಲಿಸಿದರು
ಯಾದಗಿರಿ ಸಮೀಪ ರೈತರು ಕಡೇಚೂರ-ಬಾಡಿಯಾಳ ಕೈಗಾರಿಕಾ ಪ್ರದೇಶ ನಿರ್ಮಾಣಕ್ಕೆ ಭೂಮಿ ಒದಗಿಸಿದ ರೈತ ಕುಟುಂಬಗಳಿಗೆ ಉದ್ಯೋಗ ಕಲ್ಪಿಸುವಂತೆ ಆಗ್ರಹಿಸಿ ಈಚೆಗೆ ಯಾದಗಿರಿ-–ರಾಯಚೂರು ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ತಹಶೀಲ್ದಾರ್ ಮಲ್ಲೇಶ್ ತಂಗಾ ಅವರಿಗೆ ಮನವಿ ಸಲ್ಲಿಸಿದರು   

ಯಾದಗಿರಿ: ಕಡೇಚೂರ-ಬಾಡಿಯಾಳ ಕೈಗಾರಿಕಾ ಪ್ರದೇಶ ನಿರ್ಮಾಣಕ್ಕೆ ಭೂಮಿ ಒದಗಿಸಿದ ರೈತ ಕುಟುಂಬಗಳಿಗೆ ಉದ್ಯೋಗ ಕಲ್ಪಿಸುವಂತೆ ಆಗ್ರಹಿಸಿ ಭೂ ಸಂತ್ರಸ್ತರು ಈಚೆಗೆ ಯಾದಗಿರಿ-ರಾಯಚೂರು ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದರು.

‘ತಾಲ್ಲೂಕಿನ ಕಡೇಚೂರ, ಬಾಡಿಯಾಳ ಹಾಗೂ ಶಟ್ಟಿಹಳ್ಳಿ ಗ್ರಾಮದ ರೈತರಿಂದ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿ ಒಟ್ಟು 3,300 ಎಕರೆಯಷ್ಟು ರೈತರ ಭೂಮಿ ಪಡೆದುಕೊಂಡಿದೆ. ರೈತರು ಭೂಮಿ ನೀಡುವ ಸಂದರ್ಭದಲ್ಲಿ ಕೈಗಾರಿಕಾ ಪ್ರದೇಶದಲ್ಲಿ ಭೂ ಸಂತ್ರಸ್ತರಿಗೆ ನಿವೇಶನ ಹಾಗೂ ಉದ್ಯೋಗ ನೀಡುವ ಭರವಸೆ ನೀಡಲಾಗಿತ್ತು. ಭೂಮಿ ಕಳೆದುಕೊಂಡು ಏಳು ವರ್ಷ ಕಳೆದರೂ ಕೈಗಾರಿಕೆಗಳು ಸ್ಥಾಪನೆಯಾಗಿಲ್ಲ. ಇದರಿಂದ ಭೂಮಿ ಕಳಕೊಂಡ ರೈತರು, ಯುವಕರು ಉದ್ಯೋಗವಿಲ್ಲದೇ ಕಂಗಾಲಾಗಿ ಗುಳೆ ಹೋಗುತ್ತಿದ್ದಾರೆ’ ಎಂದು ಪ್ರತಿಭಟನಾಕಾರರು ದೂರಿದರು.

‘ಈಚೆಗೆ ಉದ್ಘಾಟನೆಗೊಂಡ ರೈಲ್ವೆ ಕೋಚ್ ಫ್ಯಾಕ್ಟರಿಯಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡದೆ ಅನ್ಯ ರಾಜ್ಯದವರಿಗೆ ಮಣೆ ಹಾಕಲಾಗಿದೆ. ಭೂಮಿ ಕಳೆದುಕೊಂಡ ರೈತ ಕುಟುಂಬಗಳಿಗೆ ಉದ್ಯೋಗ ನೀಡದ ರೈಲ್ವೆ ಕೋಚ್ ಫ್ಯಾಕ್ಟರಿ ಬಂದ್ ಮಾಡಬೇಕು. ಯುವಕರಿಗಾಗಿ ಕೈಗಾರಿಕಾ ತರಬೇತಿ ಕೇಂದ್ರವನ್ನು ಆರಂಭಿಸಬೇಕು. ಆರೋಗ್ಯ ಹಿತದೃಷ್ಟಿಯಿಂದ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಬೇಕು. ನನೆಗುದಿಗೆ ಬಿದ್ದಿರುವ 33 ಕೆ.ವಿ. ಸಾಮರ್ಥ್ಯದ ವಿದ್ಯುತ್ ಸರಬರಾಜು ಕೇಂದ್ರದ ಕಾಮಗಾರಿ ಪೂರ್ಣಗೊಳಿಸಬೇಕು. ಆರಂಭದಲ್ಲಿ ಪ್ರತಿ ಎಕರೆ ಭೂಮಿಗೆ ಕೇವಲ ₹6 ಲಕ್ಷ ಮಾತ್ರ ನೀಡಿದ್ದು, ಅದರ ಬೆಲೆಯನ್ನು ಸುಮಾರು ₹24 ಲಕ್ಷಕ್ಕೆ ಹೆಚ್ಚಿಸಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ADVERTISEMENT

ಕಡೇಚೂರು - ಬಾಡಿಯಾಳ ಮತ್ತು ಶಟ್ಟಿಹಳ್ಳಿ ಭೂ ಸಂತ್ರಸ್ಥರ ಧರಣಿ ನಿರತ ಸ್ಥಳಕ್ಕೆ ಬಂದ ಯಾದಗಿರಿ ತಹಶೀಲ್ದಾರ್ ಮಲ್ಲೇಶ ತಂಗಾ ರೈತರ ಅಹವಾಲು ಸ್ವೀಕರಿಸಿದರು. ರೈತರ ಸಮಸ್ಯೆಗಳ ಕುರಿತು ಜಿಲ್ಲಾಡಳಿತದ ಗಮನಕ್ಕೆ ತರುವುದಾಗಿ ಭರವಸೆ ನೀಡಿದ ನಂತರ ರೈತರು ಧರಣಿ ವಾಪಸ್ ಪಡೆದರು.

ಸಂಸ್ಥಾನ ಮಠದ ಪೀಠಾಧಿಪತಿ ಗುರುಮೂರ್ತಿ ಶಿವಾಚಾರ್ಯ ಮುಖಂಡರಾದ ಸಿದ್ದಣ್ಣಗೌಡ ಕಡೇಚೂರ, ಶರಣಗೌಡ ಬಾಡಿಯಾಳ, ಬಸವರಾಜಪ್ಪಗೌಡ ಬೆಳಗುಂದಿ, ಚಂದಪ್ಪ ಕಾವಲಿ, ಗೌಸುದ್ದಿನ್ ಚಂದಾಪುರ, ಸೂಗುರಪ್ಪ ಸಾಹುಕಾರ, ವೆಂಕಟರೆಡ್ಡಿ ಪಾಟೀಲ್, ವೀರೇಶ ಆವಂಟಿ, ಆಮೀರಲಿ ಕೊಣಂಪಲ್ಲಿ, ತಿಪ್ಪಣ್ಣ ನೀಮಕರ್, ಎಂ.ಭೀಮಣ್ಣ, ಖಾಜಿ ಖೈಯಿಮ್ ಪಾಷಾ, ಸಿದ್ದರಾಮಪ್ಪ ಪಾಟೀಲ್, ಬಿ.ಬಸವರಾಜ, ಶ್ರೀನಿವಾಸ ಪೊರ್ಲಾ, ಚಂದ್ರು ಗಡ್ಡಮಿದಾ, ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.