ಯಾದಗಿರಿ: ಇದ್ದ ಕಾಡುಗಳನ್ನು ಕಡಿದು ಎಲ್ಲೆಂದರಲ್ಲಿ ಕಾರ್ಖಾನೆ, ಕಟ್ಟಡಗಳನ್ನು ನಿರ್ಮಿಸುತ್ತಿರುವ ಮನುಷ್ಯನೇ ಪರಿಸರಕ್ಕೆ ಮಾರಕ ಎಂದು ಲಿಂಗೇರಿ ಪ್ರೌಢಶಾಲೆ ಶಿಕ್ಷಕ ಸೂರ್ಯಪ್ರಕಾಶ ಘನಾತೆ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಲಿಂಗೇರಿ ಸ್ಟೇಷನ್ ಸರ್ಕಾರಿ ಪ್ರೌಢ ಶಾಲೆಯಲ್ಲಿ ಬುಧವಾರ ಆಯೋಜಿಸಿದ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶುದ್ಧ ಪರಿಸರ ನಮಗೆ ತೀರಾ ಅವಶ್ಯಕ ಅದನ್ನು ಅವಲಂಬಿಸಿಯೇ ಜೀವನ ಸಾಗಿಸುತ್ತೇವೆ. ಸ್ವಚ್ಛ ಗಾಳಿ, ಮಳೆಯಿಲ್ಲದೆ ಮನುಷ್ಯ ಅನೇಕ ತೊಂದರೆಗಳನ್ನು ಅನುಭವಿಸುತ್ತಿದ್ದಾನೆ. ಜಾಗತಿಕ ತಾಪಮಾನದಲ್ಲಿ ಏರುಪೇರು ಉಂಟಾಗಿ ಹಲವೆಡೆ ಬಿಸಿಲಿನಿಂದ ಜನರು ಅಸುನೀಗಿದ್ದಾರೆ. ಒಂದು ಕಡೆ ಮಳೆ ಹೆಚ್ಚಾದರೆ, ಇನ್ನೊಂದು ಕಡೆ ಕಡಿಮೆಯಾಗಿದೆ, ಹಲವೆಡೆ ಮಳೆಯೇ ಇಲ್ಲವಾಗಿದೆ. ಇದಕ್ಕೆಲ್ಲ ಮನುಷ್ಯನೇ ಕಾರಣ ಎಂದರು.
ಕಾಡುಗಳೆಲ್ಲ ಬರಿದಾಗುತ್ತಿರುವುದರಿಂದ ಅದರಲ್ಲಿನ ಜೀವ ಸಂಕುಲಗಳು ಮಾಯವಾಗುತ್ತಿವೆ. ಇದರಿಂದ ಕಾಡು ತನ್ನ ನೈಸರ್ಗಿಕ ಸೌಂದರ್ಯ ಕಳೆದುಕೊಳ್ಳುತ್ತಿದೆ. ಕಾಡಿನ ಪ್ರಾಣಿಗಳು ನಾಡಿಗೆ ಬರುತ್ತಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಪ್ರತಿಯೊಬ್ಬರು ಒಂದೊಂದು ಸಸಿ ನೆಡಬೇಕು. ಮನೆಗೊಂದು ಮರ ಊರಿಗೊಂದು ವನ, ಕಾಡು ಬೆಳೆಸಿ ನಾಡು ಉಳಿಸಿ ಎಂಬಂತೆ ವಿದ್ಯಾರ್ಥಿಗಳು ಪರಿಸರ ರಕ್ಷಣೆಗೆ ಮುಂದಾಗಬೇಕು ಎಂದರು.
ಈಗಾಗಲೇ ಶಾಲೆಯ ಆವರಣದಲ್ಲಿ 60ಕ್ಕೂ ಹೆಚ್ಚು ಬೇವಿನ ಮರಗಳನ್ನು ನೆಡಲಾಗಿದೆ. ಅವು ಸಮೃದ್ದವಾಗಿ ಬೆಳದಿವೆ ಎಂದು ಹರ್ಷ ವ್ಯಕ್ತ ಪಡಿಸಿದ ಅವರು, ಮರಗಳ ಬೇಳವಣಿಗೆಗೆ ಮಕ್ಕಳೇ ಕಾರಣ ಎಂದುರು. ಶಾಲೆಯ ಆವರಣದಲ್ಲಿ ಹಚ್ಚಿರುವ ಗಿಡಗಳನ್ನು ಸರಂಕ್ಷಿಸಿದ ಮಕ್ಕಳಿಗೆ ಉಚಿತವಾಗಿ ಪುಸ್ತಕಗಳನ್ನು ವಿತರಿಸಲಾಯಿತು.
ಶಾಲೆಯ ಮುಖ್ಯಗುರು ನಾಗಪ್ಪ.ಎಸ್.ಪೋತುಲ್ ಅಧ್ಯಕ್ಷತೆ ವಹಿಸಿದ್ದರು. ಎಸ್ಡಿಎಂಸಿ ಅಧ್ಯಕ್ಷರಾದ ಯಂಕಪ್ಪ ಹಳೆಮನಿ, ಶಿಕ್ಷಕರಾದ ಶ್ರೀನಿವಾಸ, ಮಂಜುಳಾ, ಚಂದ್ರಶೇಖರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.