ADVERTISEMENT

ಮಾವಿನ, ನಾಗರ ಕೆರೆಗೆ ಜೀವ

ಟಿ.ನಾಗೇಂದ್ರ
Published 15 ಅಕ್ಟೋಬರ್ 2017, 10:10 IST
Last Updated 15 ಅಕ್ಟೋಬರ್ 2017, 10:10 IST
ಶಹಾಪುರದ ಮಾವಿನ ಕೆರೆ
ಶಹಾಪುರದ ಮಾವಿನ ಕೆರೆ   

ಶಹಾಪುರ: ಈ ಬಾರಿ ಸುರಿದ ವರ್ಷಧಾರೆಯಿಂದ ಹೈದರಾಬಾದ್‌ ನಿಜಾಮನ ಆಳ್ವಿಕೆಯ ಘಟ್ಟದಲ್ಲಿ ನಿರ್ಮಿಸಿದ ಕೆರೆಗಳಿಗೆ ಈಗ ಮರು ಜೀವ. ನಗರದ ಮಾವಿನ ಕೆರೆ ಹಾಗೂ ನಾಗರ ಕೆರೆ ಮೈತುಂಬಿಕೊಂಡು ನಿಂತಿವೆ.

ಮೈಸೂರು ಸಂಸ್ಥಾನದ ಒಡೆಯರು ತಮ್ಮ ಪತ್ನಿಯ ಒಡವೆಯನ್ನು ಮಾರಿ ಜನರ ಏಳಿಗೆಗಾಗಿ ಕನ್ನಂಬಾಡಿ ಕಟ್ಟಿದ್ದರು. ಆದರೆ, ನಿಜಾಮರು ವಿಲಾಸಿ ಜೀವನ ನಡೆಸಿ, ಸ್ವಹಿತಾಸಕ್ತಿಯಲ್ಲಿ ಕಾಲ ಕಳೆದರು ಎಂಬುದರ ನಡುವೆ ಅವರ ನೀರಿನ ಕಾಳಜಿ ಮೆಚ್ಚುವ ಸಂಗತಿ ಆಗಿದೆ.

‘ನಿಜಾಮರು ಪ್ರತಿ ಗ್ರಾಮಕ್ಕೆ ಕನಿಷ್ಠ ಒಂದು ವಿಶಾಲ ಕೆರೆಯನ್ನು ನಿರ್ಮಿಸಿ ಮಳೆ ನೀರು ಸಂಗ್ರಹಕ್ಕೆ ಆದ್ಯತೆ ನೀಡಿ, ಕೆರೆ ನೀರನ್ನು ಕೃಷಿಗೆ ಬಳಸಿಕೊಳ್ಳಲು ರೈತರಿಗೆ ಪ್ರೇರಣೆ ನೀಡಿದ್ದರು. ನಿರ್ಮಿಸಿದ ಕೆರೆಯನ್ನು ಆಯಾ ಗ್ರಾಮದ ಹಳ್ಳಿ ನಕ್ಷೆ( ವಿಲೇಜ್ ಮ್ಯಾಪ್)ನಲ್ಲಿ ದಾಖಲೆ ನಮೂದಿಸುವುದರ ಮೂಲಕ ಮುಂದಿನ ಪೀಳಿಗೆ ಕೆರೆ ಉಳಿಯಲಿ ಎಂಬ ದೂರುದೃಷ್ಟಿ ಹೊಂದಿದ್ದರು. ಆದರೆ, ಈಗ ಕೆರೆ ಮಾಯವಾಗಿ ದಾಖಲೆಯಲ್ಲಿ ಮಾತ್ರ ಉಳಿದಿದೆ’ ಎಂದು ಚಿಂತಕ ಬಾಸ್ಕರರಾವ ಮುಡಬೂಳ ತಿಳಿಸಿದ್ದಾರೆ.

ADVERTISEMENT

ಶಹಾಪುರ ನಗರಕ್ಕೆ ‘ಮಾವಿನ ಹಾಗೂ ನಾಗರ ಕರೆ ಎರಡು ಕಣ್ಣಿನಂತೆ ಇವೆ. ಮಾವಿನ ಕೆರೆಯ ಎರಡು ಬೆಟ್ಟಗಳ ಇಳಿಜಾರಿನಲ್ಲಿ ಇದ್ದು, ಮಳೆಯ ನೀರು ನೇರವಾಗಿ ಕೆರೆಯ ಒಡಲಿಗೆ ಸಂಗ್ರಹವಾಗುತ್ತದೆ. ತುಸು ಅನತಿ ದೂರದ ಬೆಟ್ಟದ ಮೇಲೆ ಮೈದಳಿವಿ ನಿಂತ ಬುದ್ದ ವಿಹಾರವಿದೆ. ಕೆರೆಯಲ್ಲಿ ಬೊಟಿಂಗ್ ವ್ಯವಸ್ಥೆ, ವಾಯು ವಿಹಾರಕ್ಕೆ ನಿರ್ಮಿಸಿದ ರಸ್ತೆ, ಕೆರೆ ದಂಡೆಯ ಇಳಿಜಾರಿನಲ್ಲಿ ಹಾಕಿದ ಸಸಿ ಒಣಗಿದ್ದು, ಅಳಿದುಳಿದ ಪಳಿಯುಳಿಕೆಯಂತೆ ಕಾಣುತ್ತಿವೆ. ಪ್ರಸಕ್ತ ವರ್ಷ ಉತ್ತಮ ಮಳೆಯಾಗಿದ್ದರಿಂದ ಕೆರೆ ಅಂಗಳ ಮೈ ತುಂಬಿಕೊಂಡಿದೆ. ಕೆರೆ ಅಭಿವೃದ್ಧಿಗೆ ಯೋಜನೆ ಹಾಗೂ ಯೋಚನೆ ಅಗತ್ಯ’ ಎನ್ನುತ್ತಾರೆ ಪರಿಸರ ಪ್ರೇಮಿ ಮಲ್ಲಯ್ಯ ಪೊಲಂಪಲ್ಲಿ.

‘ನಗರದ ಮೇಲ್ಭಾಗದಲ್ಲಿ ನಾಗರ ಕೆರೆಯಿದೆ. ಕೆರೆಯ ಅಂಗಳಕ್ಕೆ ದೇವಸ್ಥಾನ ಹಾಗೂ ಬಯಲು ಮಂದಿರ ನಿರ್ಮಾಣದಿಂದ ಒತ್ತುವರಿಯ ಬಿಸಿ ತಟ್ಟಿದೆ. ದಾಖಲೆಯಲ್ಲಿ ನಾಗರ ಕೆರೆ ಇದೆ. ಅದು ಈಗ ಮಾಯವಾಗಿ ಗದ್ದುಗೆ ಕೆರೆಯಾಗಿ ಮಾರ್ಪಟ್ಟಿದೆ’ ಎಂದು ಮಾಜಿ ಸೈನಿಕ ಮಲ್ಲಣ್ಣ ಶಿರಡ್ಡಿ ಬೇಸರ ವ್ಯಕ್ತಪಡಿಸಿದರು.

ದಾಖಲೆಯಲ್ಲಿ ತಾಲ್ಲೂಕಿನಲ್ಲಿ 70ಕ್ಕೂ ಹೆಚ್ಚು ಕೆರೆ ಇವೆ. ಒಂದಿಷ್ಟು ಒತ್ತುವರಿಯಾಗಿದ್ದರೆ ಇನ್ನೂ ಕೆಲವು ಕಡೆ ಭತ್ತದ ಗದ್ದೆಯಾಗಿ ಮಾರ್ಪಟ್ಟಿವೆ. ಕೆರೆ ಸಂರಕ್ಷಣೆಯ ಜನಾಂದೋಲ ಜಾಗೃತಿ ಮೂಡಿಸುವ ಕೆಲಸ ನಡೆಬೇಕು
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.