ಯಾದಗಿರಿ: ಸತತ 30 ವರ್ಷಗಳಿಂದ ನಗರದ ಹೋಳಿ ಹಬ್ಬಕ್ಕೆ ನಗರ ಪೊಲೀಸ್ ಠಾಣೆಯಲ್ಲಿ ಚಾಲನೆ ನೀಡುತ್ತಿರುವುದು ವಿಶೇಷವಾಗಿದೆ ಎಂದು ಕೆಪಿಸಿಸಿ ಸದಸ್ಯ ಮೌಲಾಲಿ ಅನಪೂರ ಹೇಳಿದರು.
ಪೊಲೀಸ್ ಇಲಾಖೆ, ಭಾವೈಕ್ಯ ಸಮಿತಿ ಹಾಗೂ ನಾಗರಿಕ ಸಮಿತಿ ವತಿಯಿಂದ ಗುರುವಾರ ನಗರದ ಪೊಲೀಸ್ ಠಾಣೆಯಲ್ಲಿ ಏರ್ಪಡಿಸಿದ ಹೋಳಿ ಹಬ್ಬದ ಚಾಲನೆ ಸಮಾರಂಭದಲ್ಲಿ ಅವರು ಮಾತನಾಡಿದರು. ವಿಶೇಷವಾಗಿ ಈ ಹೋಳಿ ಹಬ್ಬವನ್ನು ಪೊಲೀಸರ ಜೊತೆಗೂಡಿ, ಯಾವುದೇ ಪಕ್ಷ, ಜಾತಿ, ಮತಗಳ ಭೇದವಿಲ್ಲದೇ ಆಚರಿಸಿಕೊಂಡು ಬರಲಾಗುತ್ತಿದೆ.
ಸುಮಾರು 30ಕ್ಕೂ ವರ್ಷದಿಂದ ಯಾವುದೇ ಅಹಿತಕರ ಘಟನೆ ಸಂಭವಿಸದೆ ಶಾಂತಿಯುತವಾದ ಆಚರಣೆ ನಡೆಯುತ್ತಿದೆ. ಇನ್ನು ಮುಂದೆಯೂ ಸಂಪ್ರದಾಯ ಮುಂದುವರಿಯಲಿದೆ ಎಂದು ಹೇಳಿದರು. ಮಾಜಿ ಶಾಸಕ ವೀರಬಸವಂತರೆಡ್ಡಿ ಮುದ್ನಾಳ, ಸರ್ಕಲ್ ಇನ್ಸ್ಪೆಕ್ಟರ್ ಶಂಕರಗೌಡ ಪಾಟೀಲ, ಸಬ್ ಇನ್ಸ್ಪೆಕ್ಟರ್ಗಳಾದ ಯಶವಂತ ಬಿಸನಳ್ಳಿ, ಪ್ರಕಾಶ ಯಾತನೂರ, ನಾಗಿರೆಡ್ಡಿ, ಅಯ್ಯಣ್ಣ ಹುಂಡೇಕಾರ, ಖುರ್ರಂ ಬಾದಲ್, ಮಲ್ಲಣ್ಣ ದಾಸನಕೇರಿ, ಮರೆಪ್ಪ ಈಟೇ, ರಾಮವಿಲಾಸ ಭಟ್ಟಡ, ಮಾತನಾಡಿದರು.
ಭಾವೈಕ್ಯತೆ ಸಮಿತಿ ಅದ್ಯಕ್ಷ ಬಾಬು ದೊಖಾ ಸ್ವಾಗತಿಸಿ, ವಂದಿಸಿದರು. ನಗರದ ಪ್ರಮುಖರಾದ ಸಿದ್ಧಪ್ಪ ಹೊಟ್ಟಿ, ತಿಮ್ಮಣ್ಣ ಹೆಡಗಿಮದ್ರಿ, ನೂರಂದಪ್ಪ ಲೇವಡಿ, ನಾರಾಯಣರಾವ ಚವ್ಹಾಣ, ತಾಹೇರ್ ಸಾಬ್, ರಿಯಾಜ್ ಅಹ್ಮದ್, ಅನೂಸ್ ಸೇಠ್, ಸಿದ್ಧಾರೆಡ್ಡಿ ಬಲಕಲ್, ನಾಗರಾಜ ಬೀರನೂರ, ಸೇರಿದಂತೆ ನಗರದ ಅನೇಕ ಗಣ್ಯರು, ನಾಗರಿಕರು ಪಾಲ್ಗೊಂಡಿದ್ದರು.
ಸಮಾರಂಭದ ನಂತರ ಒಬ್ಬರಿಗೊಬ್ಬರು ಸಿಹಿ ತಿನ್ನಿಸಿ, ಪರಸ್ಪರ ಬಣ್ಣ ಹಚ್ಚಿಕೊಂಡು ಸಂಭ್ರಮಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.