ADVERTISEMENT

ರೈತರಿಗೆ ದೊರಕದ ಪರಿಹಾರ: ಆಕ್ರೋಶ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2013, 10:46 IST
Last Updated 19 ಡಿಸೆಂಬರ್ 2013, 10:46 IST

ಹುಣಸಗಿ: ಸಮೀಪದ ನಾರಾಯಣ­ಪುರ ಬಸವಸಾಗರ ಅಣೆಕಟ್ಟಿನಿಂದ ಹರಿದು ಹೋಗುವ ನೀರಿಗೆ ಹೆಚ್ಚುವರಿ­ಯಾಗಿ ತಡೆಗೋಡೆ ನಿರ್ಮಿಸಿ, ವಿದ್ಯುತ್ ಉತ್ಪಾದನೆಯಲ್ಲಿ ತೊಡ­ಗಿರುವ ಭೋರುಕಾ ಜಲ ವಿದ್ಯುತ್ ಸಂಸ್ಥೆಯು, ಹಿನ್ನೀರಿನಲ್ಲಿ ಫಲವತ್ತಾದ ಭೂಮಿ ಕಳೆದುಕೊಂಡ ರೈತರಿಗೆ 12 ವರ್ಷಗಳಿಂದಲೂ ಪರಿಹಾರ ನೀಡದೇ ವಂಚಿಸುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಈಚೆಗೆ ಕಂಪೆನಿಯ ಅಧಿಕಾರಿಗೆ ಮನವಿ ಸಲ್ಲಿಸಿದ ಕೃಷ್ಣಪ್ಪ­ಗೌಡ ಜಂಗಿನಗಡ್ಡಿ ಮಾತ­ನಾಡಿ, ಕಂಪೆನಿಯ ತಡೆಗೋಡೆ ಹಿನ್ನೀರಿನಿಂದ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ವಿತರಣೆಯಲ್ಲಿ ಬಿಪಿಸಿಎಲ್ ಕಂಪೆನಿಯು  ಚೆಲ್ಲಾಟ­ವಾಡು­ತ್ತಿದೆ. 15 ದಿನಗಳಲ್ಲಿ ಸಮಸ್ಯೆ ಇತ್ಯರ್ಥ­ವಾಗದೇ ಧರಣಿ ಸತ್ಯಾಗ್ರಹ ನಡೆಸಲಾಗು­ವುದು ಎಂದರು.

ಬಿಪಿಸಿಎಲ್ ಕಂಪೆನಿಯ ಜಲ ವಿದ್ಯುತ್ ಘಟಕ ಪ್ರಾರಂಭದ ಪೂರ್ವ­ದಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮ, ಕಂದಾಯ ಇಲಾಖೆ ಹಾಗೂ ಬಿಪಿಸಿಎಲ್ ಕಂಪೆನಿಯ ಆಶ್ರಯದಲ್ಲಿ ವಿದ್ಯುತ್ ಘಟಕದ ಯೋಜನೆಗಾಗಿ ವಿವಿಧ ಕನ್ಸಲ್ಟಿಂಗ್ ಕಂಪೆನಿಗಳಿಂದ ಸರ್ವೆ ಪ್ರಕಾರ ಮುಳುಗಡೆಯಾದ ಜಮೀನುಗಳಿಗೆ ಭೂ ಪರಿಹಾರ ನೀಡಿಲ್ಲ. ಕಂಪೆನಿಯು ತಾರತಮ್ಯ ನೀತಿ ಅನುಸರಿಸುತ್ತಿದೆ. ಪರಿಶಿಷ್ಟ ಜಾತಿ, ಪಂಗಡದ ರೈತರ 71 ಎಕರೆ 31 ಗುಂಟೆಗೆ ಪರಿಹಾರ ನೀಡಲು ಹಿಂದೇಟು ಹಾಕುತ್ತಿದೆ. ಕೆಲ ರೈತರಿಗೆ ಪರಿಹಾರ ವಿತರಿಸಿ ಇನ್ನುಳಿದ ರೈತರಿಗೆ ಪರಿಹಾರ ನೀಡದೇ ಇರುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದರು.

ಹನೀಫ್‌­ಸಾಬ್‌, ಬಾಲಯ್ಯ ಗುತ್ತೆ­ದಾರ, ಶಾಂತಪ್ಪ ಮೇಸ್ತಕ, ಗದ್ದೆಪ್ಪ ಹಾಲಬಾವಿ, ಹಣಮಪ್ಪ ಹಾಲಬಾವಿ, ಅಂಬ್ರೇಶ, ಸೀತಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.