ADVERTISEMENT

ಲೈಂಗಿಕ ಕಿರುಕುಳ : ವಿದ್ಯಾರ್ಥಿಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2013, 9:25 IST
Last Updated 21 ಡಿಸೆಂಬರ್ 2013, 9:25 IST

ಸುರಪುರ: ಲೈಂಗಿಕ ಕಿರುಕುಳ ಆರೋ­ಪದ ಹಿನ್ನಲೆಯಲ್ಲಿ ಬಂಧನಕ್ಕೊಳಗಾದ ಗುಲ್ಬರ್ಗ ವಿಶ್ವವಿದ್ಯಾಲಯದ ಪ್ರೊ. ದಶರಥ ನಾಯಕ ಅವರಿಗೆ ಜಾಮೀನು ನೀಡಿರುವುದನ್ನು ವಿರೋಧಿಸಿ ಮತ್ತು 2006 ರ ವೃತ್ತಿ ಶಿಕ್ಷಣ ಕಾಯ್ದೆ ಜಾರಿ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತಾಲ್ಲೂಕು ಘಟಕದ ನೇತೃತ್ವದಲ್ಲಿ ಪಟ್ಟಣದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಶುಕ್ರವಾರ ಇಲ್ಲಿಯ ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಬೃಹತ್ ಪ್ರತಿಭಟನೆ ನಡೆಸಿದರು.

ಶಾಲಾ, ಕಾಲೇಜುಗಳ ವಿದ್ಯಾರ್ಥಿ­ಗಳು ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ರಸ್ತೆ ತಡೆಗೆ ಮುಂದಾದಾಗ ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಕೊನೆಗೆ ಗಾಂಧಿ ವೃತ್ತದಲ್ಲಿ ಜಮಾವಣೆ­ಗೊಂಡ ವಿದ್ಯಾರ್ಥಿಗಳು ಪ್ರೊ. ದಶರಥನಾಯಕ ಅವರಿಗೆ ಜಾಮೀನು ನೀಡಿದ  ಕ್ರಮದ ವಿರುದ್ಧ  ಆಕ್ರೋಶ ವ್ಯಕ್ತಪಡಿಸಿದರು.

ವಿದ್ಯಾರ್ಥಿನಿಯ ಮೇಲೆ ಪ್ರೊ. ದಶರಥ ನಾಯಕ್ ಲೈಂಗಿಕ ಕಿರುಕುಳ ನೀಡಿ ಮಾನಸಿಕ ಹಿಂಸೆ ನೀಡಿರುವುದು ನಾಚಿಕೆಗೇಡಿನ ಸಂಗತಿ. ಇದರಿಂದ ಇಡೀ ಉಪನ್ಯಾಸಕ ವರ್ಗವೇ ತಲೆ ತಗ್ಗಿಸುವಂತಾಗಿದೆ. ಅವರಿಗೆ ಸಹಕರಿ­ಸುತ್ತಿರುವ ಕುಲಪತಿಯನ್ನು ತಕ್ಷಣ ವರ್ಗಾವಣೆ ಮಾಡಬೇಕು. ಯುವತಿಗೆ ಸೂಕ್ತ ರಕ್ಷಣೆ ನೀಡಿ ನ್ಯಾಯ ಒದಗಿಸಬೇಕು ಎಂದು ಪ್ರತಿಭಟನೆ ಕಾರರು ಆಗ್ರಹಿಸಿದರು.

2006 ರ ವೃತ್ತಿ ಶಿಕ್ಷಣ ಕಾಯ್ದೆ ಜಾರಿಯಿಂದ ಬಡ, ಮಧ್ಯಮ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ (ಸಿಇಟಿ) ಪ್ರವೇಶದ ಕನಸು ಗಗನ ಕುಸುಮವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಒಂದೇ ಸರ್ಕಾರಿ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ನಡೆಸಬೇಕು. ಶೇ. 50 ಸೀಟುಗಳಿಗೆ ಈಗಿರುವಂತೆ ಸರಕಾರದ ಶುಲ್ಕವನ್ನು ಮುಂದುವರಿಸಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರ­ವನ್ನು ತಹಶೀಲ್ದಾರ್ ಅರುಣ ಕುಮಾರ ಕುಲಕರ್ಣಿ ಅವರಿಗೆ ಸಲ್ಲಿಸಿದರು.

ಎಬಿವಿಪಿಯ ಮುಖಂಡರಾದ ಉಪೇಂದ್ರ­ನಾಯಕ ಸುಬೇದಾರ, ಗಂಗಾಧರ ನಾಯಕ ಅರಳಹಳ್ಳಿ, ಶರಣು ನಾಯಕ, ವೀರಭದ್ರ ಕಿರದಳ್ಳಿ, ಸಂದೀಪ ನಾಯಕ, ಮಂಜುನಾಥ ಚೆಟ್ಟಿ, ಲಕ್ಷ್ಮೀಕಾಂತ ದೇವರಗೋನಾಲ, ವಿರೇಶ ರೆಡ್ಡಿ ಕೋನಾಳ, ಶರಣು, ಸಂತೋಷ, ಭೀಮು, ಭಾಗಣ್ಣ, ಶ್ರವಣ, ಕೊಟ್ರೇಶ, ಸುಭಾಷ, ವಿರೇಶ ಗೋನಾಲ, ಸುಜಾತಾ, ಶ್ರೀದೇವಿ, ಜೀವಿತಾ, ಕಾವ್ಯ, ಮಮತಾ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.