ADVERTISEMENT

ಶರಣಮಾರ್ಗ: ಆತ್ಮಾವಲೋಕನ ಬೇಕು

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2012, 6:10 IST
Last Updated 22 ಅಕ್ಟೋಬರ್ 2012, 6:10 IST

ಸುರಪುರ: 12ನೆ ಶತಮಾನದ ಶರಣರು ಕಾಯಕವೇ ಕೈಲಾಸ ಎಂದು ನಿರೂಪಿಸಿದ್ದರು. ಕಾಯಕವನ್ನು ನಿಷ್ಠೆಯಿಂದ ಮಾಡಿ ಭಗವಂತನ ಸಾಕ್ಷಾತ್ಕಾರ ಪಡೆದುಕೊಂಡಿದ್ದರು. ಕಾಯಕದಿಂದ ಬರುವ ಆದಾಯವನ್ನು ದಾಸೋಹಕ್ಕೆ ನೀಡುತ್ತಿದ್ದರು. ಅಂತೆಯೇ ಅವರು ಇಂದಿಗೂ ಪ್ರಸ್ತುತವಾಗಿದ್ದಾರೆ.

ಇಂತಹ ಶರಣರ ನಾಡಿನಲ್ಲಿರುವ ನಾವು ಎಷ್ಟರಮಟ್ಟಿಗೆ ಅವರ ಮಾರ್ಗವನ್ನು ಅನುಸರಿಸುತ್ತಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳುವ ಅವಶ್ಯಕತೆ ಇದೆ ಎಂದು ಗುಲ್ಬರ್ಗ ಕೇಂದ್ರಿಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಬಸವರಾಜ ಡೋಣುರ ಪ್ರತಿಪಾದಿಸಿದರು.

ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘದಲ್ಲಿ ನಡೆಯುತ್ತಿರುವ ನಾಡಹಬ್ಬ ಕಾರ್ಯಕ್ರಮದಲ್ಲಿ ಶನಿವಾರ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಪುರಸಭೆ ಅಧ್ಯಕ್ಷ ಚಂದ್ರಶೇಖರ ಹಸನಾಪುರ ಮಾತನಾಡಿ, ಜಾತ್ಯತೀತೆಯನ್ನು ಬಲವಾಗಿ ಖಂಡಿಸಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಒದಗಿಸಿದ ಬಸವಣ್ಣ ಎಂದಿಗೂ ಪ್ರಸ್ತುತವಾಗಿದ್ದಾರೆ. ಇಂದಿನ ಯುವಕರಿಗೆ ಬಸವಣ್ಣನ ಸಂದೇಶಗಳ ಪಾಲನೆ ಮಾಡಬೇಕಾದ ಅವಶ್ಯಕತೆ ಇದೆ. ಬಸವಣ್ಣನ ತತ್ವಗಳು ವಿಶ್ವ ಭಾತೃತ್ವ ಮೂಡಿಸಲು ಸಹಕಾರಿಯಾಗಿವೆ ಎಂದು ಅಭಿಪ್ರಾಯಪಟ್ಟರು.

ಆದಾಯ ಮತ್ತು ವ್ಯಾಟ್ ಕರ ಸಲಹೆಗಾರ ಹಣಮಂತಪ್ಪ ಗೋಗಿ ಮತ್ತು ಖ್ಯಾತ ಆಯುರ್ವೇದ ವೈದ್ಯ ಡಾ. ಮಹಾದೇವಪ್ಪ ಪಟ್ಟಣಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ನಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ವಿವಿಧ ಕಲಾವಿದರು ಸಂಗೀತ ಕಾರ್ಯಕ್ರಮ ನಡೆಸಿದರು. ತಾಲ್ಲೂಕು ಕಾಸಪ ಅಧ್ಯಕ್ಷ ಶಾಂತಪ್ಪ ಬೂದಿಹಾಳ ಸ್ವಾಗತಿಸಿದರು. ಸಿದ್ದಯಸ್ವಾಮಿ ಮಠ ನಿರೂಪಿಸಿ, ವಂದಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT