ಯಾದಗಿರಿ: ಸಮೀಪದ ನಾಯ್ಕಲ್ ಗ್ರಾಮದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ತಯಾರಿಸಲು ಅಡುಗೆ ಕೋಣೆ ಇಲ್ಲದೇ ಇರುವುದರಿಂದ ಬಯಲಲ್ಲೇ, ಬಿಸಿಯೂಟ ತಯಾರಿಸಲಾಗುತ್ತಿದೆ.
1ರಿಂದ 8ನೇ ತರಗತಿವರೆಗೆ ಒಟ್ಟು 174 ಮಕ್ಕಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಾಲೆಗೆ ಎಂಟು ಜನ ಶಿಕ್ಷಕರಿದ್ದಾರೆ. ಅಡುಗೆ ತಯಾರಿಸಲು ಮೂವರು ಸಿಬ್ಬಂದಿ ಇದ್ದಾರೆ. ಶಾಲೆಯ ಮಕ್ಕಳಿಗಾಗಿ ಬಿಸಿಯೂಟವನ್ನು ಬಯಲಲ್ಲೇ ತಯಾರಿಸಲಾಗುತ್ತದೆ. ಅಡುಗೆ ತಯಾರಿಸಲು ಬಿಸಿಯೂಟ ಕೋಣೆ ಇಲ್ಲದೇ ಇರುವುದರಿಂದ ಶಾಲಾ ಕೊಠಡಿಗಳೇ ಆಹಾರ ಸಂಗ್ರಹ ಕೋಣೆಗಳಾಗಿ ಪರಿವರ್ತನೆಯಾಗಿವೆ. ಇನ್ನೂ ಬಿಸಿಯೂಟ ತಯಾರಿಸಲು ಅಡುಗೆ ಅನಿಲ ಸಿಲಿಂಡರ್ ಅನ್ನು ಪೂರೈಸಲು ಅಧಿಕಾರಿಗಳು ಮುಂದಾಗುತ್ತಿಲ್ಲ. ಹಾಗಾಗಿ ಬಿಸಿಯೂಟವನ್ನು ಕಟ್ಟಿಗೆ ಒಲೆಯಲ್ಲಿಯೇ ತಯಾರಿಸಲಾಗುತ್ತಿದೆ.
ಒಲೆಯ ದಟ್ಟ ಹೊಗೆಯ ಮಧ್ಯೆ ಮಕ್ಕಳು ಆಹಾರ ಸೇವಿಸುವುದು ಮತ್ತು ಪಾಠ ಕೇಳುವುದು ಅನಿವಾರ್ಯವಾಗಿದೆ ಎಂದು ಪಾಲಕರು ಆರೋಪಿಸುತ್ತಾರೆ. ರಸ್ತೆ ಮೂಲಕ ಹಾದು ಹೋಗುವ ವಾಹನಗಳಿಂದ ಬರುವ ದೂಳು ಅಡುಗೆಯ ಮೇಲೆ ಬೀಳುವ ಭೀತಿಯನ್ನು ಕಾಡುತ್ತಿದೆ. ಅಲ್ಲದೇ ಹೊಗೆಯಿಂದ ಮಕ್ಕಳ ಮೇಲೆ ದುಷ್ಪರಿಣಾಮ ಬೀರುವ ಆತಂಕ ಪಾಲಕರನ್ನು ಕಾಡುತ್ತಿದೆ.
ಶಾಲೆಗೆ ಬಿಸಿಯೂಟ ಕೋಣೆ ನಿರ್ಮಿಸುವುದು ಮತ್ತು ಅಡುಗೆ ತಯಾರಿಸಲು ಸಿಲಿಂಡರ್ ಸರಬರಾಜು ಮಾಡುವಂತೆ ಹಲವು ಬಾರಿ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ.
ಬಯಲಿನಲ್ಲಿಯೇ ಮಕ್ಕಳಿಗೆ ಅಡುಗೆ ತಯಾರಿಸುತ್ತಿರುವುದನ್ನು ಶಿಕ್ಷಣ ಇಲಾಖೆ ಅಧಿಕಾರಿಗಳೇ ನೋಡಿದ್ದಾರೆ. ಆದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುತ್ತಾರೆ ಗ್ರಾಮದ ಜನರು.
ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಬಿಸಿಯೂಟ ಕೋಣೆ ನಿರ್ಮಿಸಬೇಕು. ಸಿಲಿಂಡರ್ ಪೂರೈಕೆ ಮಾಡಬೇಕು ಎಂದು ಜನರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.