ADVERTISEMENT

ಶಾಲೆಯ ಬಯಲಲ್ಲಿಯೇ ಬಿಸಿಯೂಟ ತಯಾರಿಕೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2014, 7:28 IST
Last Updated 7 ಫೆಬ್ರುವರಿ 2014, 7:28 IST
ಯಾದಗಿರಿ ಸಮೀಪದ  ನಾಯ್ಕಲ್ ಗ್ರಾಮದ ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗಾಗಿ ಬಯಲಲ್ಲಿಯೇ ಮಧ್ಯಾಹ್ನದ ಬಿಸಿಯೂಟ ತಯಾರಿಸುತ್ತಿರುವುದು
ಯಾದಗಿರಿ ಸಮೀಪದ ನಾಯ್ಕಲ್ ಗ್ರಾಮದ ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗಾಗಿ ಬಯಲಲ್ಲಿಯೇ ಮಧ್ಯಾಹ್ನದ ಬಿಸಿಯೂಟ ತಯಾರಿಸುತ್ತಿರುವುದು   

ಯಾದಗಿರಿ: ಸಮೀಪದ ನಾಯ್ಕಲ್‌ ಗ್ರಾಮದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ತಯಾರಿಸಲು ಅಡುಗೆ ಕೋಣೆ ಇಲ್ಲದೇ ಇರುವುದರಿಂದ ಬಯಲಲ್ಲೇ, ಬಿಸಿ­ಯೂಟ ತಯಾರಿಸಲಾಗುತ್ತಿದೆ.

1ರಿಂದ 8ನೇ ತರಗತಿವರೆಗೆ ಒಟ್ಟು 174 ಮಕ್ಕಳು ಇಲ್ಲಿ ವಿದ್ಯಾಭ್ಯಾಸ ಮಾಡು­ತ್ತಿದ್ದಾರೆ. ಶಾಲೆಗೆ ಎಂಟು ಜನ ಶಿಕ್ಷಕರಿ­ದ್ದಾರೆ. ಅಡುಗೆ ತಯಾರಿಸಲು ಮೂವರು ಸಿಬ್ಬಂದಿ ಇದ್ದಾರೆ. ಶಾಲೆಯ ಮಕ್ಕಳಿಗಾಗಿ ಬಿಸಿಯೂಟ­ವನ್ನು ಬಯಲಲ್ಲೇ ತಯಾರಿಸಲಾಗು­ತ್ತದೆ. ಅಡುಗೆ ತಯಾರಿಸಲು ಬಿಸಿ­ಯೂಟ ಕೋಣೆ ಇಲ್ಲದೇ ಇರುವುದ­ರಿಂದ ಶಾಲಾ ಕೊಠಡಿಗಳೇ ಆಹಾರ ಸಂಗ್ರಹ ಕೋಣೆಗಳಾಗಿ ಪರಿವರ್ತನೆ­ಯಾಗಿವೆ. ಇನ್ನೂ ಬಿಸಿಯೂಟ ತಯಾ­ರಿ­ಸಲು ಅಡುಗೆ ಅನಿಲ ಸಿಲಿಂಡರ್‌ ಅನ್ನು ಪೂರೈಸಲು ಅಧಿಕಾರಿಗಳು ಮುಂದಾಗುತ್ತಿಲ್ಲ. ಹಾಗಾಗಿ ಬಿಸಿ­ಯೂಟ­ವನ್ನು ಕಟ್ಟಿಗೆ ಒಲೆಯಲ್ಲಿಯೇ ತಯಾರಿಸಲಾಗುತ್ತಿದೆ.


ಒಲೆಯ ದಟ್ಟ ಹೊಗೆಯ ಮಧ್ಯೆ ಮಕ್ಕಳು ಆಹಾರ ಸೇವಿಸುವುದು ಮತ್ತು ಪಾಠ ಕೇಳುವುದು ಅನಿ­ವಾರ್ಯವಾಗಿದೆ ಎಂದು ಪಾಲಕರು ಆರೋಪಿಸುತ್ತಾರೆ. ರಸ್ತೆ ಮೂಲಕ ಹಾದು ಹೋಗುವ ವಾಹನಗಳಿಂದ ಬರುವ ದೂಳು ಅಡುಗೆಯ ಮೇಲೆ ಬೀಳುವ ಭೀತಿಯನ್ನು ಕಾಡುತ್ತಿದೆ. ಅಲ್ಲದೇ ಹೊಗೆಯಿಂದ ಮಕ್ಕಳ ಮೇಲೆ ದುಷ್ಪರಿಣಾಮ ಬೀರುವ ಆತಂಕ ಪಾಲಕರನ್ನು ಕಾಡುತ್ತಿದೆ.

ಶಾಲೆಗೆ ಬಿಸಿಯೂಟ ಕೋಣೆ ನಿರ್ಮಿಸುವುದು ಮತ್ತು ಅಡುಗೆ ತಯಾರಿಸಲು ಸಿಲಿಂಡರ್‌ ಸರಬರಾಜು ಮಾಡುವಂತೆ ಹಲವು ಬಾರಿ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಗ್ರಾಮ­ಸ್ಥರು ಮನವಿ ಮಾಡಿದರೂ ಪ್ರಯೋ­ಜನವಾಗುತ್ತಿಲ್ಲ.

ಬಯಲಿನಲ್ಲಿಯೇ ಮಕ್ಕಳಿಗೆ ಅಡುಗೆ ತಯಾರಿಸುತ್ತಿರುವು­ದನ್ನು ಶಿಕ್ಷಣ ಇಲಾಖೆ ಅಧಿಕಾರಿಗಳೇ ನೋಡಿದ್ದಾರೆ. ಆದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುತ್ತಾರೆ ಗ್ರಾಮದ ಜನರು.

ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಬಿಸಿಯೂಟ ಕೋಣೆ ನಿರ್ಮಿಸಬೇಕು. ಸಿಲಿಂಡರ್‌ ಪೂರೈಕೆ ಮಾಡಬೇಕು ಎಂದು ಜನರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT