ಕಕ್ಕೇರಾ: ‘ಯಾರು ಬೇಕಾದರೂ ಏನನ್ನಾದರೂ ಕದಿಯಬಹುದು. ಆದರೆ ಯಾರಿಂದಲೂ ಇನ್ನೊಬ್ಬರ ಶಿಕ್ಷಣ ಕದಿಯಲು ಆಗುವುದಿಲ್ಲ. ಶಿಕ್ಷಣ ಎಂಬುದು ಕದಿಯಲಾಗದ ಆಸ್ತಿ’ ಎಂದು ಮುದನೂರಿನ ಕಂಠಿಮಠ ಮಲ್ಲಿಕಾರ್ಜುನ ದೇವರು ಹೇಳಿದರು.
ಪಟ್ಟಣದಲ್ಲಿ ಭಾನುವಾರ ನಡೆದ ಆಕ್ಸಫರ್ಡ್ ಪಬ್ಲಿಕ್ ಶಾಲೆಯ 5ನೇ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಶಾಲಾ ಪ್ರಾರಂಭೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಶಿಕ್ಷಣದಿಂದ ಉತ್ತಮ ಸಾಧನೆ ಮಾಡಬಹುದು ಮತ್ತು ಬದುಕು ರೂಪಿಸಿಕೊಳ್ಳಬಹುದು’ ಎಂದರು.
ವಿದ್ಯಾರ್ಥಿಗಳು ಗುರು ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕು. ಹಿರಿಯರನ್ನು ಗೌರವಿಸುವುದರ ಜೊತೆಗೆ ಅವರ ಆದರ್ಶ ತತ್ವಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಲು ಪ್ರಯತ್ನಿಸಬೇಕು. ದೇಶದ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು’ ಎಂದರು.
ಯಡ್ರಾಮಿಯ ಮುರುಗೇಂದ್ರ ವಿರಕ್ತಮಠದ ಪೂಜ್ಯ ಸಿದ್ಧಲಿಂಗ ಮರಿದೇವರು ಮಾತನಾಡಿ, ಚಿಕ್ಕಮಕ್ಕಳ ಮನಸ್ಸು ಬಿಳಿಹಾಳೆ ಇದ್ದಂತೆ. ಶಿಕ್ಷಕರು ಶಾಲೆಯಲ್ಲಿ ದೈನಂದಿನ ಪಾಠ ಬೋಧಿಸುವುದರ ಜೊತೆಗೆ ದೇಶಾಭಿಮಾನ ಮೂಡಿಸುವ ನೈತಿಕ ಶಿಕ್ಷಣ ನೀಡಬೇಕು’ ಎಂದರು.
ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾದ ವಿದ್ಯಾರ್ಥಿಗಳಾದ ನವೀನ ದಿವಾಕರ್, ರೇಶ್ಮಾ ಕರಿಂಸಾಬ ನಾಸಿ, ನಿವೃತ್ತ ನೌಕರರಾದ ಶಕೀಲಾಬೇಗಂ, ಶಂಕರಪ್ಪ, ಮೂರ್ತಿ ರಚನೆಕಾರ ಅಮರೇಶ.ಎಸ್.ಗುರಿಕಾರ ಮತ್ತು ಮೊರಾರ್ಜಿ, ಆದರ್ಶ, ಕಿತ್ತೂರ ವಸತಿ ಶಾಲೆಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಸೋಮನಾಥ ಸಂಗೀತ ಪಾಠಶಾಲಾ ಬಸಣ್ಣ ಗುರಿಕಾರ ಗವಾಯಿಗಳು ಹಾಗೂ ಮಕ್ಕಳು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ನಂದಣ್ಣಪ್ಪ ಪೂಜಾರಿಯವರು ಕಾರ್ಯಕ್ರಮ ಉದ್ಘಾಟಿಸಿದರು. ದಶರಥ ಆರೇಶಂಕರ, ಬಸಯ್ಯಸ್ವಾಮಿ, ಅಯ್ಯಣ್ಣ ಗುಮೇದಾರ, ಸೋಮನಾಥ ಸೊಲ್ಲಾಪುರ, ಬಸಣ್ಣ ಗುರಿಕಾರ, ಅಮರೇಶ ಗುರಿಕಾರ, ಯಲ್ಲಪ್ಪ ಕೂಡಲಗಿ, ಮುತ್ತು ನಂದಿಕೋಲ ಇದ್ದರು.
ಸಿದ್ದು ನಂದಿಕೋಲಮಠ ಸ್ವಾಗತಿಸಿದರು. ಮಹಾಂತೇಶ ಸ್ವಾಮಿ ನಿರೂಪಿಸಿದರು. ಬಸಯ್ಯಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.