ADVERTISEMENT

ಸತ್ಯಂಪೇಟೆ: ಬಸವ ತತ್ವ ಸಮಾವೇಶ ನಾಳೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2011, 9:55 IST
Last Updated 17 ಜೂನ್ 2011, 9:55 IST

ಯಾದಗಿರಿ: ಗುರಪ್ಪ ಯಜಮಾನರ ಹಾಗೂ ಶಿವಮ್ಮ ಸತ್ಯಂಪೇಟೆಯವರ ಸ್ಮರಣೋತ್ಸವದ ನಿಮಿತ್ತ ಬಸವ ತತ್ವ ಸಮಾವೇಶವನ್ನು ಜೂನ್ 18ರಂದು ಸುರಪುರ ತಾಲ್ಲೂಕಿನ ಸತ್ಯಂಪೇಟೆಯಲ್ಲಿ ಹಮ್ಮಿಕೊಳ್ಳಲಾಗಿದೆ.

ಗುರಪ್ಪ ಯಜಮಾನರು ಬದುಕಿದ್ದ ಸಂದರ್ಭದಲ್ಲಿ ಬಸವಾದಿ ಶರಣರ ಆಶಯಗಳನ್ನು ಮೈಗೂಡಿಸಿಕೊಂಡು ಅವರನ್ನು ಜಾರಿಗೆ ತರಲು ಅಹರ್ನಿಶಿ ಶ್ರಮಿಸಿದ್ದರು. ಗುರಪ್ಪ ಯಜಮಾನರ ನೆನಪಿನ ದಿನ ಬಸವ ಮಾರ್ಗ ಪ್ರತಿಷ್ಠಾನವು ಕಳೆದ 30 ವರ್ಷಗಳಿಂದ ಈ ಸಮಾವೇಶ ಆಯೋಜಿಸುತ್ತ ಬಂದಿದೆ.

ಶರಣರ ಆಶಯದಂತೆ ಪುಣ್ಯಸ್ಮರಣೆಯ ದಿನವೇ ಕಲ್ಯಾಣ ಮಹೋತ್ಸವ, ಜಾವಳ, ತೊಟ್ಟಿಲು ಕಾರ್ಯಕ್ರಮಗಳನ್ನು ಆಯೋಜಿಸುವ ಯಾವ ದಿನವೂ ಶುಭ ಮತ್ತು ಅಶುಭ ಇರುವುದಿಲ್ಲ ಎಂಬುದನ್ನು ಜನತೆಗೆ ತಿಳಿಸಿಕೊಡಬೇಕೆಂಬ ಹಂಬಲ ಪ್ರತಿಷ್ಠಾನದ್ದಾಗಿದೆ.

ಜೂ. 18 ರಂದು ಬೆಳಿಗ್ಗೆ 9ಕ್ಕೆ ಸ್ಮರಣೋತ್ಸವ ಸಮಾರಂಭ ಜರುಗಲಿದ್ದು, ಖಜೂರಿ ಕೋರಣೇಶ್ವರ ಮಠದ ವಿಶ್ವನಾಥ ಸ್ವಾಮೀಜಿ ಅವರು ಬಸವ ಧರ್ಮ ಧ್ವಜಾರೋಹಣ ಮಾಡುವರು. ಶಾಸಕ ಡಾ.ಎ.ಬಿ. ಮಾಲಕರೆಡ್ಡಿ ಅತಿಥಿಗಳಾಗಿ ಆಗಮಿಸುವರು.

ಮಾಜಿ ಸಚಿವ ಎಸ್.ಕೆ. ಕಾಂತಾ ಅಧ್ಯಕ್ಷತೆ ವಹಿಸಲಿದ್ದು, ಇಳಕಲ್‌ನ ಮಹಾಂತಪ್ಪಗಳು ಸಾನ್ನಿಧ್ಯ ವಹಿಸುವರು. ಬೆಳಿಗ್ಗೆ 10 ಗಂಟೆಗೆ ಆಧುನಿಕ ವಚನಕಾರರ ಗೋಷ್ಠಿ ನಡೆಯಲಿದ್ದು, ಗುಲ್ಬರ್ಗದ ಪ್ರಾಧ್ಯಾಪಕಿ ಡಾ. ಶಿವಗಂಗಮ್ಮ ರುಮ್ಮಾ ಉದ್ಘಾಟಿಸುವರು. ಗುಲ್ಬರ್ಗ ಬಸವ ಕೇಂದ್ರ ಅಧ್ಯಕ್ಷ ಶಿವಶರಣಪ್ಪ ಕಲ್ಬುರ್ಗಿ ಅಧ್ಯಕ್ಷತೆ ವಹಿಸಲಿದ್ದಾರೆ.

ಬೆಳಿಗ್ಗೆ 11 ಗಂಟೆಗೆ ಬಸವ ತತ್ವ ಸಮಾವೇಶ ಜರುಗಲಿದ್ದು, ಸಚಿವ ಜಗದೀಶ ಶೆಟ್ಟರ ಉದ್ಘಾಟಿಸುವರು. ಹಂಪಿ ಕನ್ನಡ ವಿವಿ ಪ್ರಾಧ್ಯಾಪಕ ಪ್ರೊ. ಟಿ.ಆರ್. ಚಂದ್ರಶೇಖರ ಅತಿಥಿಗಳಾಗಿ ಆಗಮಿಸುವರು. ಶಾಸಕ ನರಸಿಂಹ ನಾಯಕ (ರಾಜುಗೌಡ) ಅಧ್ಯಕ್ಷತೆ ವಹಿಸಲಿದ್ದು, ಗುರುವಿಜಯ ಮಹಾಂತಪ್ಪಗಳು ಸಾನ್ನಿಧ್ಯ ವಹಿಸುವರು.

ಸಂಜೆ 4 ರಿಂದ 5.30 ರವರೆಗೆ ಮಹಾತ್ಮಾ ಬಸವೇಶ್ವರರ ಹಾಗೂ ಗುರು ಪ್ರಯಜಮಾನ, ಶಿವಮ್ಮ ತಾಯಿಯವರ ಭಾವಚಿತ್ರಗಳ ಮೆರವಣಿಗೆ ನಡೆಯಲಿದೆ. ಸಂಜೆ 6 ಗಂಟೆಗೆ ಬಸವ ಮಾರ್ಗ ಪ್ರಶಸ್ತಿ ಪ್ರದಾನ ಹಾಗೂ ಗ್ರಂಥಗಳ ಬಿಡುಗಡೆ ಸಮಾರಂಭ ಜರುಗುವುದು.

ಕಾನೂನು ವಿವಿ ಕುಲಪತಿ ಡಾ. ಜೆ.ಎಸ್. ಪಾಟೀಲ ಉದ್ಘಾಟಿಸಲಿದ್ದು, ಬೆಂಗಳೂರು ಬೇಲಿಮಠದ ಶಿವರುದ್ರ ಸ್ವಾಮೀಜಿ ಪ್ರಶಸ್ತಿ ಪ್ರದಾನ ಹಾಗೂ ಗ್ರಂಥ ಬಿಡುಗಡೆ ಮಾಡುವರು. ಗದಗಿನ ತೋಂಟದ ಸಿದ್ಧಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.