ADVERTISEMENT

‘ಆರೋಗ್ಯಕರ ಜೀವನಕ್ಕೆ ಶೌಚಾಲಯ ಅಗತ್ಯ’

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2013, 6:31 IST
Last Updated 2 ಡಿಸೆಂಬರ್ 2013, 6:31 IST

ಯಾದಗಿರಿ: ಸ್ಪರ್ಧಾತ್ಮಕ ಯುಗದ ನಾಗರಿಕ ಸಮಾಜದಲ್ಲಿ ಎಲ್ಲರೂ ಆರೋಗ್ಯಕರ ಜೀವನ ನಡೆಸಬೇಕಾದರೆ ಗ್ರಾಮೀಣ ಪ್ರದೇಶದ ಜನತೆ ಮನೆ­ಗೊಂದು ಶೌಚಾಲಯ ನಿರ್ಮಾಣ ಮಾಡಿಕೊಳ್ಳಬೇಕು ಎಂದು ಕಿರಣ ಗ್ರಾಮೀಣಾಭಿವೃದ್ಧಿ ಸಂಸ್ಥೆ ಕಾರ್ಯ­ಕ್ರಮ ಸಂಯೋಜಕ ಸೈದಪ್ಪ ಗುತ್ತೆದಾರ ಹೇಳಿದರು.

ಜಿಲ್ಲಾ ಪಂಚಾಯಿತಿ ಹಾಗೂ ಕಿರಣ ಗ್ರಾಮೀಣಾಭಿವೃದ್ಧಿ ಸಂಸ್ಥೆ ಆಶ್ರಯದಲ್ಲಿ ಶನಿವಾರ ತಾಲ್ಲೂಕಿನ ಹತ್ತ್ಿಕುಣಿ ಗ್ರಾಮ­ದಲ್ಲಿ ವಿಶ್ವ ಶೌಚಾಲಯ ದಿನಾಚರಣೆ ಅಂಗವಾಗಿ ನಿರ್ಮಲ ಭಾರತ ಯೋಜನೆ­ಯಡಿಯಲ್ಲಿ ಸ್ವಸಹಾಯ ಸಂಘದ ಸದಸ್ಯರಿಗೆ ಹಮ್ಮಿಕೊಂಡಿದ್ದ ಸ್ವಚ್ಛತೆ ಮತ್ತು ಆರೋಗ್ಯ ಕುರಿತಾದ ಮಾಹಿತಿ ಶಿಬಿರದಲ್ಲಿ ಅವರು ಮಾತನಾಡಿದರು.

ಪರಿಸರ ಮಾಲಿನ್ಯದಿಂದ ಜನರಲ್ಲಿ ನಾನಾ ರೋಗಗಳು ಕಾಡುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹಳ್ಳಿ­ಗಳಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಲು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅಧಿಕಾರಿಗಳು ಹಾಗೂ ಸ್ಥಳಿಯ ಜನಪ್ರತಿನಿಧಿಗಳು ಈ ಅನು­ದಾನ­ವನ್ನು ಸರಿಯಾಗಿ ಬಳಕೆ ಮಾಡಿ­ಕೊಳ್ಳುತ್ತಿಲ್ಲ. ಅದಕ್ಕಾಗಿ ಸಂಸ್ಥೆಯು ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದೆ ಎಂದರು.

ಸಂಸ್ಥೆಯ ಕಾರ್ಯದರ್ಶಿ ಸಿದ್ದಪ್ಪ ಲಿಂಗೇರಿ ಮಾತನಾಡಿ, ಗ್ರಾಮೀಣ ಭಾಗದ ಜನರು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡಾಗ ಉತ್ತಮ ಆರೋಗ್ಯ ಪಡೆಯಲು ಸಾಧ್ಯ. ಕುಟುಂಬದ ಗೌರವಕ್ಕೆ ಶೌಚಾಲಯ ಕಟ್ಟಿಸಿಕೊಳ್ಳಲು ಮುಂದೆ ಬರಬೇಕು ಎಂದು ಹೇಳಿದರು.

ಸರ್ಕಾರ ಗ್ರಾಮೀಣ ಭಾಗದ ಜನರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದರೂ ಜನರಿಗೆ ತಲುಪದೇ ಇರುವುದು ದುರದೃಷ್ಟಕರ. ಗ್ರಾಮೀಣ ಉದ್ಯೋಗ ಖಾತರಿ, ವಸತಿ ಯೋಜನೆ, 13ನೇ ಹಣಕಾಸು, ಬಿ.ಆರ್.ಜಿ.ಎಫ್‌, ಕುಡಿಯುವ ನೀರು, ಮುಂತಾದ ಯೋಜ­ನೆಗಳು ಉಳ್ಳವರ ಪಾಲಾ­ಗಿದ್ದು, ಸರ್ಕಾರ ಸಾರ್ವಜನಿಕರಿಗೆ ಯೋಜನೆಗಳ ಬಗ್ಗೆ ಜಾಗೃತಿ ಮೂಡಿ­ಸುವುದು ಅವಶ್ಯವಾಗಿದೆ ಎಂದು ಹೇಳಿದರು.

ಶಾಲೆಯ ವಿದ್ಯಾರ್ಥಿಗಳು ಶೌಚಾ­ಲಯ ನಿರ್ಮಾಣದ ಮಹತ್ವ ಕುರಿತು ಭಿತ್ತಿ ಪತ್ರಗಳನ್ನು ಹಿಡಿದು ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿ­ದರು. ಜಾಥಾದಲ್ಲಿ ಗ್ರಾಮ ಪಂಚಾ­ಯಿತಿ ಅಧ್ಯಕ್ಷ ಲಕ್ಷ್ಮೀಕಾಂತ ತಮ್ಮ­ಣೋರ್, ಭೀಮರಡ್ಡಿ ರಾಂಪೂರಳ್ಳಿ, ಅಮೃತರಡ್ಡಿ ಪಾಟೀಲ್, ಶಂಕರಲಿಂಗ, ಸಂಗಾರಡ್ಡಿ, ಸಿದ್ದು ನಾಯಕ ಸೇರಿದಂತೆ ಶಿಕ್ಷಕರು, ಸಂಸ್ಥೆಯ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.