ADVERTISEMENT

‘ಕಾಲುವೆಗೆ ನೀರು ಹರಿಸದಿದ್ದರೇ ಹೋರಾಟ’

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2014, 8:14 IST
Last Updated 11 ಮಾರ್ಚ್ 2014, 8:14 IST

ಹುಣಸಗಿ: ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆಗೆ ನೀರು ಸ್ಥಗಿತ­ಗೊಳಿಸಿ­ದ್ದರಿಂದ ಬಹುತೇಕ ರೈತರಿಗೆ ತೊಂದರೆ­ಯಾಗುತ್ತಿದೆ. ತಕ್ಷಣದಿಂದಲೇ ಕಾಲು­ವೆಗೆ ನೀರು ಹರಿಸಬೇಕು. ಇಲ್ಲದಿದ್ದರೆ ಹೋರಾಟ ಮಾಡುವುದಾಗಿ ಮಾಜಿ ಸಚಿವ ನರಸಿಂಹನಾಯಕ(ರಾಜುಗೌಡ) ತಿಳಿಸಿದ್ದಾರೆ.

ಮಾರ್ಚ್‌ ಅಂತ್ಯದವರೆಗೆ ನೀರು ಕೊಡು­ವುದಾಗಿ ಹೇಳಿ ಅಧಿಕಾರ ಹಿಡಿದಿ­ರುವ ಜನಪ್ರತಿನಿಧಿಗಳು ಈಗ ಮಾಡಿದ್ದು ಏನು? ಎಂದು ಪ್ರಶ್ನಿಸಿರುವ ಅವರು, ಹಿಂದೆ ಪಾದಯಾತ್ರೆ ಮಾಡಿದವರು ಈಗೇನು ಮಾಡುತ್ತಿದ್ದಾರೆ. ತಮ್ಮದೇ ಸರ್ಕಾರ ಇದ್ದರೂ ನೀರಿಗಾಗಿ ಹೋರಾಟ ಮಾಡುತ್ತೇನೆ ಎನ್ನುವುದು ನಾಚಿಕೆ­ಗೇಡಿನ ಸಂಗತಿ ಎಂದು ಹೇಳಿದ್ದಾರೆ.

ಕಳೆದ ವರ್ಷ ತಾವು ಸಚಿವ­ರಾಗಿದ್ದಾಗ ಆಗಿನ ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಅವ­ರೊಂದಿಗೆ ಮಾತನಾಡಿ ರೈತರಿಗೆ ನೀರು ಒದಗಿಸಲಾಗಿತ್ತು. ಆದರೆ, ಈ ವರ್ಷ ಜಲಾಶಯದಲ್ಲಿ ಸಾಕಷ್ಟು ನೀರು ಇದ್ದರೂ, ಕಾಲುವೆಗೆ ನೀರು ಸ್ಥಗಿತ­ಗೊಳಿಸಿರುವುದರ ಹಿಂದಿನ ಹುನ್ನಾರ­ವಾದರೂ ಏನು? ಎಂದು ಪ್ರಶ್ನಿಸಿದ್ದಾರೆ.

ಕೃಷ್ಣಾ ಭಾಗ್ಯ ಜಲ ನಿಗಮದ ಹಿರಿಯ ಅಧಿಕಾರಿಗಳು ತಕ್ಷಣವೇ ಕಾಲುವೆಗೆ ನೀರು ಹರಿಸಬೇಕು. ಇಲ್ಲದಿದ್ದರೆ ಮುಂದಾ­­ಗುವ ಅನಾಹುತಗಳಿಗೆ ಅವರೇ ಹೊಣೆ ಎಂದು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.