ADVERTISEMENT

‘ಪುಣ್ಯಕ್ಷೇತ್ರಗಳ ದರ್ಶನದಿಂದ ನೆಮ್ಮದಿ’

​ಪ್ರಜಾವಾಣಿ ವಾರ್ತೆ
Published 7 ಜನವರಿ 2014, 6:45 IST
Last Updated 7 ಜನವರಿ 2014, 6:45 IST

ಯಾದಗಿರಿ:  ನೈಸರ್ಗಿಕ ಸ್ಥಳಗಳು, ಶರಣ, ಸಂತರ ಹಾಗೂ ಪುಣ್ಯ ಕ್ಷೇತ್ರಗಳ ದರ್ಶನದಿಂದ ಮಾನಸಿಕ ನೆಮ್ಮದಿ ದೊರೆಯುತ್ತದೆ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರಾದ ವಿದ್ಯಾವತಿ ಅಕ್ಕಿ ಹೇಳಿದರು.

ತಾಲ್ಲೂಕಿನ ಅಬ್ಬೆತುಮಕೂರಿನ ವಿಶ್ವಾರಾಧ್ಯ ಸಿದ್ಧಸಂಸ್ಥಾನ ಮಠದಲ್ಲಿ ಇತ್ತೀಚೆಗೆ ಶಿವಾನುಭವ ಗೋಷ್ಠಿಯ ಅಂಗವಾಗಿ ಹಮ್ಮಿಕೊಂಡ ಮಂಗಲಾ­ಶೀರ್ವಾದ ಸ್ವೀಕರಿಸಿ ಮಾತನಾಡಿದರು.

ಹೊಸ ವರ್ಷದ ಆರಂಭದ ಮೊದಲ ದಿನವೇ ಸಿದ್ಧಿ ಪುರುಷ ವಿಶ್ವಾರಾಧ್ಯರ ಕ್ಷೇತ್ರದ ದರ್ಶನದ ಭಾಗ್ಯ ದೊರೆತಿರುವುದು ಸಂತಸ ತಂದಿದೆ ಎಂದರು. ಯುವ ಬರಹಗಾರ ಸಾಹೇಬಗೌಡ ಬಿರಾದಾರ, ಬಸವಣ್ಣ­ನವರ ವಚನಗಳು ಸಾಮಾಜಿಕ ಕಳಕಳಿಯೊಂದಿಗೆ ಸಂಸಾರದ ಜಂಜಾ­ಟ­­ಗಳನ್ನು ಹಾಗೂ ತಳಮಳಗಳನ್ನು ತಿಳಿಸುತ್ತವೆ. ಶಬ್ದ, ಸ್ಪರ್ಶ, ರೂಪ, ರಸ, ಗಂಧ, ಎಂಬ ಪಂಚ ವಿಷಯಗಳ ಹಸಿರು ಎನ್ನ ಮುಂದೆ ತಂದು ಪಸರಿ­ಸಿದೆ ಅಯ್ಯ ಎಂಬ ಬಸವಣ್ಣನವರ ವಚನವನ್ನು ಹಲವಾರು ದೃಷ್ಟಾಂತ­ಗಳೊಂದಿಗೆ ಉಪನ್ಯಾಸ ನೀಡಿದರು.

ಅಷ್ಟಾವರಣಗಳ ಕುರಿತು ಶಿವಲೀಲ ಲಿಂಗಸೂಗೂರು, ಗುರುವಚನದಿಂದ ಅಧಿಕ ಸುಧೆಯುಂಟೆ ಎಂಬ ವಿಷಯ­ವಾಗಿ ಚನ್ನಬಸವಶಾಸ್ತ್ರಿ ನಿಂಬಾಳ, ಚಿತ್ತಶುದ್ಧಿಗೆ ಧ್ಯಾನ ಮುಖ್ಯ ಕುರಿತು ಮಹಾದೇವ ಶಾಸ್ತ್ರಿಗಳು, ಧ್ಯಾನ ಮಾಡುವ ಗುಣ ಬೆಳೆಸಿಕೊಳ್ಳಿ ಎಂದು ಸಿದ್ದರಾಮ ಸ್ವಾಮೀಜಿ ಜಂಬಲದಿನ್ನಿ, ಕಾಯಕ ಮತ್ತು ಶರಣರ ತತ್ವಗಳ ಪಾಲನೆಯೊಂದಿಗೆ ಜೀವನ ಸಾಗಿಸುವ ಕುರಿತು ಮಲ್ಲಿಕಾರ್ಜುನ ಶಾಸ್ತ್ರಿ ಉಪನ್ಯಾಸ ನೀಡಿದರು.

ಶ್ರೀಮಠದ ಪೀಠಾಧಿಪತಿ ಗಂಗಾಧರ ಸ್ವಾಮೀಜಿ, ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌  ನ್ಯಾಯಾಧೀಶರಾದ ವಿದ್ಯಾವತಿ ಅಕ್ಕಿ ದಂಪತಿಯನ್ನು ಸನ್ಮಾನಿಸಿದರು.

ಎಸ್.ಎನ್.ಮಿಂಚಿನಾಳ, ಬಂದೆ­ನವಾಜ್ ಗವಾಯಿ, ಅನಿರುದ್ಧ ಗವಾಯಿ, ವೀರಭದ್ರಯ್ಯ ಸ್ವಾಮಿ ಮುಂತಾದವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.