
ಶಹಾಪುರ: ಜನಪರ ಸಂಘಟನೆಗಳು ಪ್ರಗತಿಪರ ಹೋರಾಟದ ಜೊತೆಯಲ್ಲಿ ಉಚಿತ ಸಾಮೂಹಿಕ ವಿವಾಹ  ಏರ್ಪಡಿಸುವುದರಿಂದ ಮಧ್ಯಮ ವರ್ಗದ ಜನತೆಗೆ ಹೆಚ್ಚಿನ ನೆರವಾಗಲಿದೆ. ಆದ್ದರಿಂದ ಸಂಘಟನೆಗಳು ಸಮಾಜ ಮುಖಿಯಾಗಿ ಕೆಲಸ ನಿರ್ವಹಿಸುವುದು ಅಗತ್ಯವಾಗಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ  ಡಿ.ಜಿ.ಸಾಗರ ಹೇಳಿದರು.
 
 ಪಟ್ಟಣದ ಸಿದ್ದಪ್ಪ ಆರಬೋಳ ಕಲ್ಯಾಣ ಮಂಟಪದಲ್ಲಿ  ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಹಾಗೂ ವಿದ್ಯಾರ್ಥಿ ಒಕ್ಕೂಟದ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಉದ್ಘಾಟಿಸಿ  ಮಾತನಾಡಿದರು.
 ದುಂದು ವೆಚ್ಚ ಹಾಗೂ ಆಡಂಬರದ ಮದುವೆಗೆ ಕಡಿವಾಣ ಹಾಕುವುದರಿಂದ ಸಮಾಜದಲ್ಲಿ ಆರೋಗ್ಯಕರ ಕುಟುಂಬ ನಿರ್ಮಾಣ ಸಾಧ್ಯ ಎಂದು ಅವರು ಹೇಳಿದರು.
 
 ಮಾಜಿ ಸಚಿವ ಶರಣಬಸಪ್ಪ ದರ್ಶನಾಪುರ ಮಾತನಾಡಿ, ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಜನಪರ ಸಂಘಟನೆಗಳು ಹಮ್ಮಿಕೊಳ್ಳುವುದು ಉತ್ತಮ ಬೆಳವಣಿಗೆಯಾಗಿದೆ. ಸರಳ ವಿವಾಹದಿಂದ ಸಾಮಾಜಿಕ ನೆಮ್ಮದಿಯ ಜೊತೆಗೆ ಆರ್ಥಿಕ ಹೊರೆಯಾಗುವುದಿಲ್ಲ. ದುಂದು ವೆಚ್ಚ ಮಾಡಿ ಸಾಲದ ಸುಳಿಯಲ್ಲಿ ಸಿಲುಕುವುದು ಬೇಡ ಎಂದು ಅವರು ಕರೆ ನೀಡಿದರು.
 
 ಕಾರ್ಯಕ್ರಮದ ಸಾನ್ನಿಧ್ಯವನ್ನು ಸಿದ್ದಾರ್ಥ ಟ್ರಸ್ಟ್ನ  ಸಂಘಾನಂದ ಭಂತೆ ವಹಿಸಿದ್ದರು. ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಆರಬೋಳ, ಪುರಸಭೆ ಅಧ್ಯಕ್ಷ ರಾಯಪ್ಪ ಸಾಲಿಮನಿ ಹಾಗೂ ಮುಖಂಡರಾದ ಶರಣಪ್ಪ ದಖನಿ, ಭೀಮರಾಯ ಹೊಸ್ಮನಿ, ಶಿವಪುತ್ರ ಜವಳಿ, ಶರಣು ತಳವಾರ, ಬಸವರಾಜ ತಳವಾರ, ಮಲ್ಲಿಕಾರ್ಜುನ ಹುರಸಗುಂಡಗಿ, ಸುಭಾಸ, ಲಕ್ಷ್ಮಣ ರಸ್ತಾಪುರ, ಭೀಮರಾಯ ರಸ್ತಾಪುರ, ಬಸವರಾಜ ನಾಟೇಕಾರ, ಸಿದ್ದಣ್ಣ ಪರಮೇಶ್ವರ ಇದ್ದರು. ಕಾರ್ಯಕ್ರಮದಲ್ಲಿ 26 ಜೋಡಿ ವಧು–ವರರು ನವ ದಾಂಪತ್ಯಕ್ಕೆ ಕಾಲಿರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.