ADVERTISEMENT

ಸುರಪುರ ಅಭ್ಯುದಯಕ್ಕೆ ₹100 ಕೋಟಿ; ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2021, 6:38 IST
Last Updated 29 ಡಿಸೆಂಬರ್ 2021, 6:38 IST
ಸುರಪುರದ ಗರುಡಾದ್ರಿ ಕಲಾ ಮಂದಿರದಲ್ಲಿ ಮಂಗಳವಾರ ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ ಭೈರತಿ ಕುಡಿಯುವ ನೀರಿನ ಯೋಜನೆ ಭೂಮಿಪೂಜೆಯ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ, ಲೋಕಸಭಾ ಸದಸ್ಯ ರಾಜಾ ಅಮರೇಶನಾಯಕ, ಸಾಸಕ ರಾಜೂಗೌಡ ಇದ್ದರು
ಸುರಪುರದ ಗರುಡಾದ್ರಿ ಕಲಾ ಮಂದಿರದಲ್ಲಿ ಮಂಗಳವಾರ ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ ಭೈರತಿ ಕುಡಿಯುವ ನೀರಿನ ಯೋಜನೆ ಭೂಮಿಪೂಜೆಯ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ, ಲೋಕಸಭಾ ಸದಸ್ಯ ರಾಜಾ ಅಮರೇಶನಾಯಕ, ಸಾಸಕ ರಾಜೂಗೌಡ ಇದ್ದರು   

ಸುರಪುರ: ‘ಶಾಸಕ ರಾಜೂಗೌಡ ಅವರ ಅಭಿವೃದ್ಧಿಯ ಹಂಬಲ ಮೆಚ್ಚಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸುರಪುರಕ್ಕೆ ನಗರಾಭಿವೃದ್ಧಿ ಇಲಾಖೆಯಿಂದ ₹100 ಕೋಟಿ ಅನುದಾನ ನೀಡುವುದಾಗಿ’ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಪ್ರಜಾವಾಣಿ ಭರವಸೆ ನೀಡಿದರು.

ನಗರದ ಗರುಡಾದ್ರಿ ಕಲಾಮಂದಿ ರದಲ್ಲಿ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ನಗರಸಭೆ ವತಿಯಿಂದ ಮಂಗಳವಾರ ಆಯೋಜಿಸಿದ ಕುಡಿಯುವ ನೀರು ಸರಬರಾಜು ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ನಗರದ ಕುಡಿಯುವ ನೀರಿನ ಸಮಸ್ಯೆಗೆ ಇಂದು ಶಾಶ್ವತ ಪರಿಹಾರ ಕಂಡುಕೊಳ್ಳಲಾಗಿದೆ. ₹158.80 ಕೋಟಿ ವೆಚ್ಚದಲ್ಲಿ ನದಿಯಿಂದ ಕುಡಿಯುವ ನೀರು ಸರಬರಾಜು ಯೋಜನೆಗೆ ಚಾಲನೆ ನೀಡಲಾಗಿದೆ. ತ್ವರಿತವಾಗಿಕಾಮಗಾರಿ ಮುಗಿಸಿ 2022ರ ಒಳಗಾಗಿ ಶುದ್ಧ ನೀರು ಪೂರೈಸಲಾಗುವುದು’ ಎಂದರು.

ADVERTISEMENT

‘ಯಾದಗಿರಿ ಜಿಲ್ಲೆಗೆ ₹1 ಸಾವಿರ ಕೋಟಿ ಅನುದಾನ ನೀಡಲಾಗುವುದು. ರಾಜ್ಯದ ಅಭಿವೃದ್ಧ ಬಿಜೆಪಿಯಿಂದ ಮಾತ್ರವೇ ಸಾಧ್ಯ. ಸರ್ಕಾರದ ಸಾಧನೆ ಮತ್ತು ಅಭಿವೃದ್ದಿ ಸಹಿಸಲಾಗದೆ, ಕಾಂಗ್ರೆಸ್‍ ಮುಖಂಡರು ಹುಸಿ ಆರೋಪ ಮಾಡುತ್ತಿದ್ದಾರೆ. ಇದು ಜನರನ್ನು ದಾರಿ ತಪ್ಪಿಸುವ ತಂತ್ರ’ ಎಂದು ದೂರಿದರು.

‘ಶಹಾಪುರಕ್ಕೆ ಕುಡಿಯುವ ನೀರು ಯೋಜನೆಗೆ ₹70 ಕೋಟಿ, ಕಲಬುರಗಿ ಕೆಯುಡಿಸಿಗೆ ₹800 ಕೋಟಿ, ಇದೇ ರೀತಿ ಬೆಳಗಾವಿ, ಹುಬ್ಬಳ್ಳಿಗೂ ಅನುದಾನ ಮಂಜೂರಿ ಮಾಡಲಾಗಿದೆ’ ಎಂದು ಅವರು ಹೇಳಿದರು.

ಲೋಕಸಭಾ ಸದಸ್ಯ ರಾಜಾ ಅಮರೇಶ್ವರ ನಾಯಕ ಮಾತನಾಡಿ, ‘ಜಿಲ್ಲೆ ಅಭಿವೃದ್ದಿಗೆ ಕೇಂದ್ರ ಸರ್ಕಾರ ₹1,400 ಕೋಟಿ ಹಾಗೂ ರಾಯಚೂರಿಗೆ ₹1,500 ಕೋಟಿ ಅನೂದಾನ ಮಂಜೂರಿ ಮಾಡಿದೆ. ರಾಜ್ಯ ಸರ್ಕಾರವೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ’ ಎಂದರು

ಕಾಡಾ ಅಧ್ಯಕ್ಷ ಶರಣಪ್ಪ ತಳವಾರ, ನಗರಸಭೆ ಅಧ್ಯಕ್ಷೆ ಸುಜಾತ ಜೇವರ್ಗಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ ಸಜ್ಜನ್, ಮುಖಂಡರಾದ ಎ.ಪಿ. ದಯಾನಂದ, ಯಲ್ಲಪ್ಪ ಕುರುಕುಂದಿ, ಡಾ. ಸುರೇಶ ಸಜ್ಜನ್, ರಾಜಾ ಹನುಮಪ್ಪ ನಾಯಕ ತಾತಾ, ಕಿಶೋರಚಂದ್ ಜೈನ್, ಎಚ್.ಸಿ. ಪಾಟೀಲ, ಜಿಲ್ಲಾಧಿಕಾರಿ ಡಾ. ರಾಗಪ್ರಿಯ ಆರ್., ಎಸ್ಪಿ ಡಾ. ಸಿ.ಬಿ. ವೇದಮೂರ್ತಿ, ಪೌರಾಯುಕ್ತ ಜೀವನ ಕಟ್ಟಿಮನಿ. ಕಾಮಗಾರಿ ಗುತ್ತೆಗೆದಾರ ಕೆ.ಎ. ನಂದಾ ಇದ್ದರು.

ನಗರ ನೀರು ಸರಬರಾಜ ಮಂಡಳಿಯ ಮುಖ್ಯ ಎಂಜನಿಯರ್ ಎಸ್.ಎಸ್. ರಾಜಗೋಪಾಲ ಸ್ವಾಗತಿಸಿದರು, ಅಮರಯ್ಯಸ್ವಾಮಿ ಜಾಲಿಬೆಂಚಿ ನಿರೂಪಿಸಿ,
ವಂದಿಸಿದರು.

‘ತಂಟೆಗೆ ಬಂದರೆ ಸುಮ್ಮನಿರಲ್ಲ’

‘ಅವಮಾನ ಸಹಿಸುವ ಶಕ್ತಿಯಿದ್ದರೆ ಮಾತ್ರ ರಾಜಕೀಯ ಪ್ರವೇಶಿಸಬೇಕು. ನಂಬಿದವರನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ವಿರೋಧ ಪಕ್ಷದವರು ಕಾರ್ಯಕರ್ತರ ತಂಟೆಗೆ ಬಂದರೆ ಸುಮ್ಮನಿರುವುದಿಲ್ಲ’ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಡಳಿಯ ಅಧ್ಯಕ್ಷ, ಶಾಸಕ ರಾಜುಗೌಡ ಹೇಳಿದರು.

‘ಹೀಯಾಳಿಸುವ ಮತ್ತು ಮತ್ತೊಬ್ಬರನ್ನು ನಿಂದಿಸುವ ಕೆಲಸ ಮಾಡುವುದಿಲ್ಲ. ಕಾನೂನಿಗಿಂತ ಯಾರು ದೊಡ್ಡವರಲ್ಲ. ಕಾನೂನು ಮೀರಿದರೆ ಶಿಕ್ಷೆ ತಪ್ಪಿದ್ದಲ್ಲ. ದರ್ಪ, ದಬ್ಬಾಳಿಕೆಗೆ ಹೆದರುವ ಕಾಲ ಹೋಗಿದೆ. ನಾವು ಮಾಡುವ ಅಭಿವೃದ್ಧಿ ನಮ್ಮನ್ನು ರಕ್ಷಿಸುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.