ಶಹಾಪುರ: ತಾಲ್ಲೂಕಿನ ಹೊತಪೇಠ ಗ್ರಾಮದ ಕೈಲಾಶ ಆಶ್ರಮದ ಶಿವಲಿಂಗ ಸ್ವಾಮೀಜಿ ನೇತೃತ್ವದಲ್ಲಿ 20ನೇ ಜಾತ್ರಾ ಮಹೋತ್ಸವದ ಅಂಗವಾಗಿ 15 ಜೋಡಿಗಳ ಸಾಮೂಹಿಕ ವಿವಾಹ ಜರುಗಿತು.
ಈ ವೇಳೆ ಮಾತನಾಡಿದ ಕಡಕೊಳ ಮಡಿವಾಳೇಶ್ವರ ಮಠದ ಡಾ. ರುದ್ರಮುನಿ ಶಿವಾಚಾರ್ಯರು, ಮಠದ ವತಿಯಿಂದ ಧಾರ್ಮಿಕ ಹಾಗೂ ಸಾಮಾಜಿಕ ಸೇವೆ ನಡೆಸಿಕೊಂಡು ಬರಲಾಗುತ್ತಿದೆ. ಮಠದ ಆಶ್ರಯದಲ್ಲಿ ಉಚಿತ ಸಾಮೂಹಿಕ ವಿವಾಹ ನೆರವೇರಿಸಿದ್ದು ಸಮಾಜಮುಖಿ ಕೆಲಸ ಎಂದು ಶ್ಲಾಘಿಸಿದರು.
ಮನುಕುಲದ ಒಳಿತಿಗಾಗಿ ಮಠವು ಯಾವುದೇ ಜಾತಿ ಮತಗಳ ಜಂಜಾಟ ಇಲ್ಲದೆ ಎಲ್ಲರನ್ನೂ ಸಂಭೂತರೆಂದು ಕಾಣುತ್ತಿದೆ. ಮಠ ಮಾನ್ಯಗಳು ಭಕ್ತರ ಕಾಣಿಕೆ ಸ್ವೀಕರಿಸುವ ಆಧ್ಯಾತ್ಮಕ ಕೇಂದ್ರಗಳಾಗಬಾರದು. ಸರ್ವ ಧರ್ಮಗಳಲ್ಲಿ ಸಾಮರಸ್ಯ ಸಾರುವ ಕಾರ್ಖಾನೆಗಳಾಗಬೇಕು ಎಂದರು.
ವಿಧಾನ ಪರಿಷತ್ತಿನ ಮಾಜಿ ಸದಸ್ಯ ತಿಪ್ಪಣ್ಣ ಕಮಕನೂರ ಮಾತನಾಡಿ, ಶಾಸಕ ಶರಣಬಸಪ್ಪ ದರ್ಶನಾಪುರ ಅವರು ಮಠದ ಅಭಿವೃದ್ಧಿಗೆ ₹10 ಲಕ್ಷ ದೇಣಿಗೆ ನೀಡಿದ್ದಾರೆ. ಮುಂದಿನ ದಿನದಲ್ಲಿ ಕಲ್ಯಾಣ ಮಂಟಪ ಇತರ ಅಭಿವೃದ್ಧಿ ಕೆಲಸಗಳಿಗೆ ಅನುದಾನ ನೀಡುವ ಭರವಸೆ ನೀಡಿದ್ದಾರೆ. ಮಠಗಳಲ್ಲಿ ಅವಿರತವಾಗಿ ಧಾರ್ಮಿಕ ಕೆಲಸಗಳು ಸಾಗಲಿ. ಉತ್ತಮ ಸಂಸ್ಕಾರ ಹಾಗೂ ಶಿಕ್ಷಣ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಅವರು ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ಭೀಮಣ್ಣ ಶಖಾಪುರ ಮಾತನಾಡಿ, ಮಠಗಳು ಆದರ್ಶ ಬಿತ್ತರಿಸುವ ಕೇಂದ್ರಗಳಾಗಬೇಕು. ಸಾಂಸಾರಿಕ ಜೀವನಕ್ಕೆ ಕಾಲಿಡುತ್ತಿರುವ ದಂಪತಿಗಳು ನೆರಳಿನಂತೆ ಸಹಬಾಳ್ವೆ ನಡೆಬೇಕು ಎಂದರು.
ಕೈಲಾಶ ಆಶ್ರಮದ ಶಿವಲಿಂಗ ಸ್ವಾಮೀಜಿ, ಚಿಣಮಗೇರಿ ಮಠದ ವೀರ ಮಹಾಂತ ಶಿವಾಚಾರ್ಯರು, ಸಗರದ ಮರುಳ ಮಹಾಂತ ಶಿವಾ ಚಾರ್ಯರು, ಧರ್ಮಣ್ಣ ಹೊತಪೇಠ, ಹೊನ್ನಪ್ಪಗೌಡ ಕೆ.ಪಾಟೀಲ, ಮಲ್ಲರೆಡ್ಡಿ ಪಾಟೀಲ, ಸಿದ್ದಣ್ಣಗೌಡ ಪಾಟೀಲ, ಭೀಮರೆಡ್ಡಿಗೌಡ ಪಾಟೀಲ, ಮಹಾದೇವಪ್ಪ ಸಾಲಿಮನಿ, ಸಂತೊಷ ಬೆಳಗಾವ್, ಶರಣು ದೊರೆ, ಸಿದ್ದಲಿಂಗಪ್ಪ ಸಾಹು ನೆಲೊಗಿ, ಮಹಾದೇವಪ್ಪ ಪೂಜಾರಿ, ದೇವುಗೌಡ ಬಡಿಗೇರ, ಸುರೇಶ ಚೌದರಿ, ಸಿದ್ದಣ್ಣಗೌಡ ಹುರಸ ಗುಂಡಗಿ, ಭೀಮರೆಡ್ಡಿ ಹಾಲಭಾವಿ, ಮಡಿವಾಳಯ್ಯ ಶಾಸ್ತ್ರಿ, ಚಂದ್ರಕಲಾ ಗೂಗಲ್
ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.