ADVERTISEMENT

ಸರಕು ಸಾಗಣೆ ವಾಹನಗಳಲ್ಲಿ ಮಕ್ಕಳ ಸಾಗಣೆ: 6 ಟಂಟಂ ಜಪ್ತಿ

25 ಮಕ್ಕಳು ವಶ; ಶಾಲೆಗೆ ದಾಖಲು

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2019, 14:13 IST
Last Updated 7 ಡಿಸೆಂಬರ್ 2019, 14:13 IST
ಯಾದಗಿರಿ ತಾಲ್ಲೂಕಿನ ರಾಮಸಮುದ್ರ ಗ್ರಾಮದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಲೆಬಿಟ್ಟ ಮಕ್ಕಳ ತಪಾಸಣೆ ನಡೆಸಿದರು
ಯಾದಗಿರಿ ತಾಲ್ಲೂಕಿನ ರಾಮಸಮುದ್ರ ಗ್ರಾಮದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಲೆಬಿಟ್ಟ ಮಕ್ಕಳ ತಪಾಸಣೆ ನಡೆಸಿದರು   

ಯಾದಗಿರಿ: ತಾಲ್ಲೂಕಿನ ರಾಮಸಮುದ್ರ ಗ್ರಾಮದಲ್ಲಿ ಶುಕ್ರವಾರ ವಿವಿಧ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಶಾಲೆಬಿಟ್ಟ ಮಕ್ಕಳ ತಪಾಸಣೆ ನಡೆಸಿದರು. ಪತ್ತೆಯಾದ ಒಟ್ಟು 54 ಜನ ಮಕ್ಕಳಲ್ಲಿ ತನಿಖೆ ನಡೆಸಿ 6 ರಿಂದ 18 ವರ್ಷದೊಳಗಿನ 25 ಮಕ್ಕಳ ವರದಿ ಪಡೆದು ಶಾಲೆಗೆ ದಾಖಲಿಸಿದರು. ಉಳಿದ 29 ಮಕ್ಕಳನ್ನು ತಕ್ಷಣ ಬಿಡುಗಡೆಗೊಳಿಸಲಾಗಿದೆ.

ದಾಳಿಯಲ್ಲಿ ಪೊಲೀಸ್ ಇಲಾಖೆಯವರು ಸುಮಾರು 6 ಟಂಟಂ ವಾಹನಗಳನ್ನು ಜಪ್ತಿ ಮಾಡಿ ಪ್ರತಿಯೊಂದು ವಾಹನಕ್ಕೆ ₹ 2 ಸಾವಿರದಂತೆ ಒಟ್ಟು ₹ 12 ಸಾವಿರ ದಂಡ ವಿಧಿಸಿದ್ದಾರೆ. ಜೊತೆಗೆ ವಾಹನ ಕಾಯ್ದೆಯಡಿ ವಾಹನ ಚಾಲಕರ ಚಾಲನೆ ಪರವಾನಗಿರದ್ದುಪಡಿಸಿದ್ದಾರೆ.

ಜಿಲ್ಲಾ ಬಾಲಕಾರ್ಮಿಕ ಇಲಾಖೆ ಯೋಜನಾ ನಿರ್ದೇಶಕ ರಘುವೀರಸಿಂಗ್ ಠಾಕೂರ್ ಮಾತನಾಡಿ, ‘ಜಿಲ್ಲೆ ಮತ್ತು ತಾಲ್ಲೂಕಿನಾದ್ಯಂತ 1986ರ ಬಾಲ ಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆಯಡಿ ನಿರೀಕ್ಷಕ ಮತ್ತು ಉಪ ನಿರೀಕ್ಷಕರಾಗಿ ನೇಮಕಗೊಂಡಿರುವ ಅಧಿಕಾರಿಗಳೊಂದಿಗೆ ತನಿಖಾ ತಂಡಗಳನ್ನು ರಚಿಸಿ ದಾಳಿ ನಡೆಸಲಾಗಿದೆ’ ಎಂದರು.

ADVERTISEMENT

6 ರಿಂದ 18 ವರ್ಷದೊಳಗೆ ಬರುವ ಮಕ್ಕಳನ್ನು ಸರಕು ಸಾಗಣೆ ವಾಹನಗಳಲ್ಲಿ ಹೊಲ–ಗದ್ದೆ, ಕೂಲಿ, ಕೃಷಿ ಆಧಾರಿತ, ಅಂಗಡಿ, ಹೋಟೆಲ್, ರೆಸ್ಟೋರೆಂಟ್, ಗ್ಯಾರೇಜ್, ಬಾರ್‌ ಅಂಗಡಿಗಳಲ್ಲಿ ಕೆಲಸ ಮಾಡುತ್ತಿರುವ ಬಾಲಕಾರ್ಮಿಕ ಮಕ್ಕಳು ಮತ್ತು ಶಾಲೆ ಬಿಟ್ಟ ಮಕ್ಕಳನ್ನು ರಚಿಸಿರುವ ತನಿಖಾ ತಂಡಗಳ ಜೊತೆಯಲ್ಲಿ ಸೂಚಿಸಿರುವ ಎಲ್ಲಾ ಇಲಾಖೆಗಳು ಸೇರಿ ಪತ್ತೆ ಹಚ್ಚಬೇಕಿದೆ. ಶಾಲೆಬಿಟ್ಟ ಮಕ್ಕಳನ್ನು ನೇರವಾಗಿ ಕಡ್ಡಾಯ ಶಿಕ್ಷಣ ಕಾಯ್ದೆ-2009 ರ ಅನ್ವಯ ಸರ್ವಶಿಕ್ಷಣ ಅಭಿಯಾನ (ಶಿಕ್ಷಣ ಇಲಾಖೆ) ವತಿಯಿಂದ ಮಕ್ಕಳನ್ನು ಸಂಬಂಧಿಸಿದ ಶಾಲೆಗಳಿಗೆ ದಾಖಲಿಸಲಾಗಿದೆ’ ಎಂದು ಹೇಳಿದರು.

ಕಾರ್ಮಿಕ ನಿರೀಕ್ಷಕ ಶಿವಶಂಕರ ಬಿ.ತಳವಾರ, ಡಿಸಿಪಿಯು ರಾಜೇಂದ್ರ ಯಾದವ, ಡಿಸಿಪಿಯು ಸಾಬಯ್ಯ, ಗ್ರಾಮೀಣ ಠಾಣೆ ಎಎಸ್‍ಐ ವಿಠ್ಠಲ್, ಗುರುನಾಥರೆಡ್ಡಿ, ಕಾರ್ಮಿಕ ಇಲಾಖೆಯ ಚಂದ್ರಶೇಖರ ಬಂದಳ್ಳಿ, ಮಕ್ಕಳ ಸಹಾಯವಾಣಿ ನಾಗಪ್ಪ, ಕಾರ್ಮಿಕ ಇಲಾಖೆಯ ಅಮೃತ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.