ನಾರಾಯಣಪುರ: ಒಳಹರಿವು ಕೊಂಚ ತಗ್ಗಿದಕ್ಕೆ ಶನಿವಾರ ಬಸವಸಾಗರ ಜಲಾಶಯದ 30 ಕ್ರಸ್ಟ್ ಗೇಟ್ಗಳು ಹಾಗೂ ಖಾಸಗಿ ಎಂಪಿಸಿಎಲ್ ಜಲವಿದ್ಯುತ್ ಸ್ಥಾವರದ ಮೂಲಕ ಒಟ್ಟು 2.56 ಲಕ್ಷ ಕ್ಯುಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಬಿಡಲಾಗುತ್ತಿದೆ.
ಉಭಯ ಜಲಾಶಯಗಳಿಗೆ ಸದ್ಯ ಬರುತ್ತಿರುವ ಒಳ ಹರಿವು ಅಣೆಕಟ್ಟುಗಳ ಮೇಲ್ಭಾಗದ ಪ್ರದೇಶ, ಮಹಾರಾಷ್ಟ್ರ, ರಾಜ್ಯ ಸೇರಿದಂತೆ ಹಾಗೂ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆ ಪ್ರಮಾಣವನ್ನು ಅವಲಂಬಿಸಿದೆ. ಮಳೆ ಪ್ರಮಾಣ ತಗ್ಗಿದರೆ ಒಳಹರಿವು ಕಡಿಮೆಯಾಗುತ್ತದೆ. ಒಂದೊಮ್ಮೆ ಮಳೆ ಹೆಚ್ಚಾದರೆ ಒಳಹರಿವು ಹೆಚ್ಚಾಗಿ ಜಲಾಶಯಗಳಿಂದ ನದಿಗೆ ನೀರು ಹರಿಸುವುದನ್ನು ಹೆಚ್ಚಿಸಲಾಗುತ್ತದೆ. ಇದು ನಿರಂತರ ಪ್ರಕ್ರಿಯೆಯಾಗಿದೆ.
ಪ್ರಸ್ತುತ ಬಸವಸಾಗರ ಜಲಾಶಯದಲ್ಲಿ 24.788 ಟಿಎಂಸಿ ಅಡಿ ನೀರು ಸಂಗ್ರಹ ಇದೆ. ಕಳೆದ ವರ್ಷ ಈ ದಿನಕ್ಕೆ 30 ಟಿಎಂಸಿ ಅಡಿ ನೀರು ಸಂಗ್ರಹ ಇತ್ತು.
ಕಳೆದ ವರ್ಷ ಆಗಸ್ಟ್ನಲ್ಲಿ ಬಸವಸಾಗರ ಭರ್ತಿಯಾಗಿದ್ದಕ್ಕೆ ವಾಡಿಕೆಯಂತೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಆಗಮಿಸಿ ಗಂಗಾ ಪೂಜೆ ನೆರವೇರಿಸಿ ಬಾಗಿನ ಅರ್ಪಿಸಿದ್ದರು. ಈ ವರ್ಷವೂ ಜಲಾಶಯ ಭರ್ತಿಯಾಗಿದೆ. ಬಾಗಿನ ಅರ್ಪಣೆ ದಿನಾಂಕ ನಿಗದಿಯಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.