ನಾರಾಯಣಪುರ: ಬಸವ ಸಾಗರ ಜಲಾಶಯದಿಂದ ಭಾನುವಾರ 3.27 ಕ್ಯುಸೆಕ್ ನೀರನ್ನು ಕೃಷ್ಣಾ ನದಿಗೆ ಹೊರಬಿಡಲಾಗುತ್ತಿದ್ದು, ಪ್ರವಾಸಿಗರು ರುದ್ರರಮಣೀಯ ದೃಶ್ಯವನ್ನು ಕಣ್ತುಂಬಿಕೊಂಡರು.
ಭಾನುವಾರ ರಜಾ ದಿನವಾಗಿದ್ದರಿಂದ ಸುತ್ತಮುತ್ತಲಿನ ಜಿಲ್ಲೆಗಳಿಂದ ಅಪಾರ ಸಂಖ್ಯೆಯ ಪ್ರವಾಸಿಗರ ಬಂದಿದ್ದರು. ಜನರು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಸಿದರು. ಬಳಿಕ ಜಲಾಶಯದ ಬಳಿಯ ಮರ, ಗಿಡಗಳ ನೆರಳಲ್ಲಿ ವನ ಭೋಜನ ಸವಿದರು.
ಅಪಾರ ನೀರು ಕೃಷ್ಣಾ ನದಿಗೆ ಹರಿಬಿಟ್ಟಿದ್ದರಿಂದ ನದಿ ತೀರದ ದಕ್ಷಿಣಕಾಶಿ ಛಾಯಾ ಭಗವತಿ ದೇಗುಲ ಹಾಗೂ ಮುಂಭಾಗದ ಪೂಜಾ ಮಂಟಪ ನೀರಿನಿಂದ ಸಂಪೂರ್ಣ ಜಲಾವೃತವಾಗಿದೆ. ದೇಗುಲದ ಅರ್ಚಕರು ದೇವಿಯ ಮೂರ್ತಿಯನ್ನು ಮೇಲ್ಬಾಗದಲ್ಲಿನ ಮೆಟ್ಟಲುಗಳ ಮೇಲಿರಿಸಿ ಪೂಜೆ ಮಾಡುತ್ತಿದ್ದಾರೆ.
ಸುತ್ತಮುತ್ತಲಿನ ಜಿಲ್ಲೆಗಳಿಂದ ಕೃಷ್ಣೆಯ ಜಲವೈಭವವನ್ನು ವೀಕ್ಷಿಸಲು ಕಾರು, ಜೀಪು, ದ್ವಿಚಕ್ರ ವಾಹನಗಳ ಮೂಲಕ ಆಗಮಿಸಿದ್ದ ಪ್ರವಾಸಿಗರು ತಮ್ಮ ವಾಹನಗಳನ್ನು ಜಲಾಶಯದ ಮುಖ್ಯದ್ವಾರ, ಮುಂಭಾಗದ ಸೇತುವೆ ಮೇಲೆ ನಿಲ್ಲಿಸಿದ್ದರಿಂದ ಲಿಂಗಸೂಗುರು ನಾರಾಯಣಪುರ ಸಂಪರ್ಕದ ರಸ್ತೆಯಲ್ಲಿ ಕೆಲಕಾಲ ವಾಹನ ದಟ್ಟಣೆ ಹೆಚ್ಚಾಗಿತ್ತು. ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.