ADVERTISEMENT

ಸಮಗ್ರ ತಾಲ್ಲೂಕು ರಚನೆಗೆ ಒತ್ತಾಯ

ಖಾಸಾಮಠದ ಸ್ವಾಮೀಜಿ ನೇತೃತ್ವದಲ್ಲಿ ಸಮಿತಿ ಸಭೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2018, 13:01 IST
Last Updated 1 ಜನವರಿ 2018, 13:01 IST
ಗುರುಮಠಕಲ್‌ನಲ್ಲಿ ಭಾನುವಾರ ಖಾಸಾಮಠದ ಶ್ರೀಗಳ ನೇತೃತ್ವದಲ್ಲಿ ತಾಲ್ಲೂಕು ಹೋರಾಟ ಸಮಿತಿ ಸಭೆ ನಡೆಯಿತು
ಗುರುಮಠಕಲ್‌ನಲ್ಲಿ ಭಾನುವಾರ ಖಾಸಾಮಠದ ಶ್ರೀಗಳ ನೇತೃತ್ವದಲ್ಲಿ ತಾಲ್ಲೂಕು ಹೋರಾಟ ಸಮಿತಿ ಸಭೆ ನಡೆಯಿತು   

ಗುರುಮಠಕಲ್: ಗುರುಮಠಕಲ್ ತಾಲ್ಲೂಕು ವ್ಯಾಪ್ತಿಯನ್ನು ಕೇವಲ 57 ಹಳ್ಳಿಗೆ ಸೀಮಿತ ಮಾಡಲಾಗುತ್ತಿದ್ದು, ಗದ್ದಿಗೌಡರ ಹಾಗೂ ಹುಂಡೇಕರ್ ಸಮಿತಿ ಶಿಫಾರಸಿನಂತೆ 138 ಹಳ್ಳಿಗಳನ್ನು ಸೇರಿಸಿ ಸಮಗ್ರ ತಾಲ್ಲೂಕು ರೂಪಿಸುವಂತೆ ಆಗ್ರಹಿಸಿ ಜನವರಿ 4ರಂದು ಜಿಲ್ಲಾಧಿಕಾರಿ ಮತ್ತು ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಲು ಭಾನುವಾರ ಕರೆದಿದ್ದ ಉದ್ದೇಶಿತ ಗುರುಮಠಕಲ್ ತಾಲ್ಲೂಕು ಹೋರಾಟ ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು.

ಪಟ್ಟಣದ ಖಾಸಾಮಠದ ಆವರಣದಲ್ಲಿ ಭಾನುವಾರು ಶಾಂತವೀರ ಗುರುಮುರುಘರಾಜೇಂಧ್ರ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಗುರುಮಠಕಲ್ ತಾಲ್ಲೂಕು ರಚನಾ ಸಮಿತಿ ಸಭೆಯಲ್ಲಿ ಮುಖಂಡರು ಮಾತನಾಡಿ, ಹುಂಡೇಕರ್ ಮತ್ತು ಗದ್ದಿಗೌಡರ ವರದಿಗಳನ್ನು ಯಥಾವತ್ತಾಗಿ ಜಾರಿಗೊಳಿಸಲು ಒತ್ತಾಯಿಸಲಾಯಿತು.

ಗುರುಮಠಕಲ್ ಮತ್ತು ಸೇಡಂ ತಾಲ್ಲೂಕುಗಳ ಸಚಿವರು, ಶಾಸಕರು, ಉಸ್ತುವಾರಿ ಸಚಿವರು ಸೇರಿದಂತೆ ಲೋಕಸಭೆ ಸದಸ್ಯರ ಬಳಿಗೆ ಮನವಿ ಸಲ್ಲಿಸಲು ನಿರ್ಣಯ ಕೈಗೊಳ್ಳಲಾಯಿತು.

ADVERTISEMENT

ಎಲ್ಲಾ ಗ್ರಾಮಗಳ ಜನರು ಹೋರಾಟ ಬೆಂಬಲಿಸುತ್ತಿದ್ದಾರೆ. ಜ. 10ರವರೆಗೆ ಆಕ್ಷೇಪಣೆ ಸಲ್ಲಿಕೆಗೆ ಜಿಲ್ಲಾಧಿಕಾರಿ ಅವಕಾಶ ನೀಡಿರುವ ಕಾರಣ ಈಗಲೇ ಹೋರಾಟ ಮಾಡುವುದು ಬೇಡ, ಈಗ ನಮ್ಮ ಅಕ್ಷೇಪಣೆಗಳನ್ನು ಸಲ್ಲಿಸುವುದು, ನಂತರ ಮುಂದಿನ ಹೋರಾಟ ರೂಪಿಸಲು ನಿರ್ಧರಿಸಲಾಯಿತು.

ಕೊಂಕಲ್ ಮತ್ತು ಸೈದಾಪುರ ಜಿಲ್ಲಾ ಪಂಚಾಯಿತಿ ವ್ಯಾಪಿಯ ಕೈಬಿಟ್ಟಿರುವ ಹಳ್ಳಿಗಳನ್ನು ಗುರುಮಠಕಲ್ ತಾಲ್ಲೂಕು ಕೇಂದ್ರಕ್ಕೆ ಸೇರಿಸುವಂತೆ ಈ ಭಾಗದ ಸಂಘ ಸಂಸ್ಥೆಗಳು ಹಾಗೂ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋರಾಟ ಮಾಡುವಂತೆ ಮುಖಂಡರು ಸಲಹೆ ನೀಡಿದರು.

ಸಮಿತಿ ಅಧ್ಯಕ್ಷ ರವೀಂದ್ರ ಇಂಜಳ್ಳಿಕರ್, ಕಾರ್ಯದರ್ಶಿ ನರೇಂದ್ರ ಇಟ್ಕಾಲ್, ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಸಾಯಿಬಣ್ಣ ಬೋರಬಂಡಾ, ನರಸರೆಡ್ಡಿ ಗಡ್ಡೆಸೂಗೂರು, ಶ್ರೀನಿವಾಸ ನರ್ವಿ, ಜಿ.ತಮ್ಮಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.