ADVERTISEMENT

ಹಿನ್ನೀರಲ್ಲಿ ಜಮೀನು; ಉಪವಾಸ ಸತ್ಯಾಗ್ರಹ

​ಪ್ರಜಾವಾಣಿ ವಾರ್ತೆ
Published 26 ಜನವರಿ 2018, 9:04 IST
Last Updated 26 ಜನವರಿ 2018, 9:04 IST
ಕೆರೆ ಹಿನ್ನೀರಿನಲ್ಲಿರುವ ದಲಿತರ ಜಮೀನು ರಕ್ಷಿಸುವಂತೆ ಒತ್ತಾಯಿಸಿ ಗುರುವಾರ ಯಾದಗಿರಿ ಜಿಲ್ಲಾಡಳಿತ ಭವನದ ಎದುರು ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು, ಜಮೀನು ಮಾಲೀಕರು ಉಪವಾಸ ಸತ್ಯಾಗ್ರಹ ಆರಂಭಿಸಿದರು
ಕೆರೆ ಹಿನ್ನೀರಿನಲ್ಲಿರುವ ದಲಿತರ ಜಮೀನು ರಕ್ಷಿಸುವಂತೆ ಒತ್ತಾಯಿಸಿ ಗುರುವಾರ ಯಾದಗಿರಿ ಜಿಲ್ಲಾಡಳಿತ ಭವನದ ಎದುರು ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು, ಜಮೀನು ಮಾಲೀಕರು ಉಪವಾಸ ಸತ್ಯಾಗ್ರಹ ಆರಂಭಿಸಿದರು   

ಯಾದಗಿರಿ: ಕಟಗಿ ಶಹಾಪುರ ಹೊನಗೇರಾದ ಕೆರೆಯ ಹಿನ್ನೀರಿನಿಂದ ದಲಿತರ 40 ಎಕರೆ ಜಮೀನು ಮುಳುಗಡೆಯಾಗಿದ್ದು, ರೈತರ ಜಮೀನುಗಳೀಗೆ ರಕ್ಷಣೆ ನೀಡುವಂತೆ ಆಗ್ರಹಿಸಿ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಗುರುವಾರ ಜಿಲ್ಲಾಡಳಿತ ಕಚೇರಿ ಎದುರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದರು.

‘ಹತ್ತಿಕುಣಿ ಹೋಬಳಿ ಕಟಗಿ ಶಹಾಪುರ ಗ್ರಾಮದ ದಲಿತರಿಗೆ ಸೇರಿದ ಹೊನಗೇರಾ ಸೀಮಾಂತದ ಸರ್ವೆ ನಂಬರ್ 171,172,173, 174 ರಲ್ಲಿ ಬರುವ 40 ಎಕರೆ ಭೂಮಿ ಮುಳುಗಡೆಯಾಗಿದೆ. ದಲಿತರಿಗೆ ಈ ಭೂಮಿ ಬಿಟ್ಟರೆ ಜೀವನಕ್ಕೆ ಗತಿ ಇಲ್ಲ. ಈ ಕುರಿತು ಜಿಲ್ಲಾಡಳಿತ, ತಾಲ್ಲೂಕು ಆಡಳಿತಕ್ಕೆ ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ’ ಎಂದು ಪ್ರತಿಭಟನಾಕಾರರು ದೂರಿದರು.

‘ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಗಿತ್ತು. ಆದರೂ, ಸಮಸ್ಯೆ ಬಗೆ ಹರಿದಿರಲಿಲ್ಲ. ನಂತರ ನ್ಯಾಯಾಲಯದ ಮೊರೆ ಹೋದಾಗ ನ್ಯಾಯಾಲಯ ಕೆರೆ ನೀರು ಖಾಲಿ ಮಾಡುವಂತೆ ಆದೇಶಿಸಿದೆ. ತಹಶೀಲ್ದಾರರು ನ್ಯಾಯಾಲಯದ ಆದೇಶ ಪಾಲಿಸಿದಾಗ ಕಟಗಿಹಳ್ಳಿಯ ಮೀನುಗಾರರು ತಡೆದಿದ್ದಾರೆ.

ADVERTISEMENT

ಇದರಿಂದ ನ್ಯಾಯಾಲಯದ ಆದೇಶವನ್ನು ಅಧಿಕಾರಿಗಳು ಪಾಲಿಸಿಲ್ಲ. ಜಿಲ್ಲಾಧಿಕಾರಿ ಕ್ರಮಕ್ಕೆ ಮುಂದಾಗಿ ದಲಿತರಿಗೆ ನ್ಯಾಯ ಒದಗಿಸಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಜಿಲ್ಲಾ ಸಂಚಾಲಕ ಮಲ್ಲಿಕಾರ್ಜನ ಕ್ರಾಂತಿ, ನಿಂಗಪ್ಪ ಕೆ ಶಹಾಪೂರ, ಅಜೀಜ್ ಸಾಬ್ ಐಕೂರ್, ಶರಣು ಬೋಳಾರಿ, ದೇವಿಂದ್ರ ನಾಟೇಕರ್, ರಮೇಶ ಹುಂಡೇಕಲ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.