ADVERTISEMENT

596 ನಿವೇಶನ ಹಂಚಿಕೆ ಶೀಘ್ರ

ಶಾಸಕ ಶರಣ ಬಸಪ್ಪ ದರ್ಶನಾಪುರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2023, 5:45 IST
Last Updated 5 ಜನವರಿ 2023, 5:45 IST
ಶಹಾಪುರ ನಗರದ ಮಲ್ಲಯ್ಯಮಡ್ಡಿ ಬಳಿ ನೂತನ ಆಶ್ರಯ ಕಾಲೊನಿಯಲ್ಲಿ ಮೂಲ ಸೌಲಭ್ಯಗಳ ಅಭಿವೃದ್ಧಿ ಕಾಮಗಾರಿಗೆ ಬುಧವಾರ ಶಾಸಕ ಶರಣಬಸಪ್ಪ ದರ್ಶನಾಪುರ ಚಾಲನೆ ನೀಡಿದರು
ಶಹಾಪುರ ನಗರದ ಮಲ್ಲಯ್ಯಮಡ್ಡಿ ಬಳಿ ನೂತನ ಆಶ್ರಯ ಕಾಲೊನಿಯಲ್ಲಿ ಮೂಲ ಸೌಲಭ್ಯಗಳ ಅಭಿವೃದ್ಧಿ ಕಾಮಗಾರಿಗೆ ಬುಧವಾರ ಶಾಸಕ ಶರಣಬಸಪ್ಪ ದರ್ಶನಾಪುರ ಚಾಲನೆ ನೀಡಿದರು   

ಶಹಾಪುರ: ನಗರದಲ್ಲಿ ಕೆಲ ದಿನಗಳಿಂದ ನನೆಗುದಿಗೆ ಬಿದ್ದಿದ್ದ 596 ನಿವೇಶನಗಳನ್ನು 15 ದಿನದ ಒಳಗೆ ಲಾಟರಿ ಮೂಲಕ ಫಲಾನುಭವಿಗಳ ಆಯ್ಕೆ ಮಾಡಿ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ತಿಳಿಸಿದರು.

ನಗರದ ಹಳಿಸಗರಕ್ಕೆ ಹೊಂದಿಕೊಂಡಿರುವ ಮಲ್ಲಯ್ಯ ಮಡ್ಡಿಯ ಸರ್ವೇ ನಂಬರ 120 ರಲ್ಲಿನ 12 ಎಕರೆ ಜಮೀನಿನಲ್ಲಿ ನಿರ್ಮಿಸಿರುವ ಆಶ್ರಯ ಕಾಲೊನಿಯ 596 ನಿವೇಶನ ಪ್ರದೇಶಕ್ಕೆ ಮೂಲ ಸೌಲಭ್ಯಗಳ ಅಭಿವೃದ್ಧಿಗಾಗಿ ಎಸ್‌ಎಫ್‌ಸಿ ವಿಶೇಷ ಯೋಜನೆ ಅಡಿ ಬಿಡುಗಡೆಯಾದ ₹ 4.29ಕೋಟಿ ವೆಚ್ಚದ ಕಾಮಗಾರಿಗಳಿಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.

ನಿವೇಶನ ಹಂಚಿಕೆಗಾಗಿ ಅರ್ಜಿ ಆಹ್ವಾನಿಸಲಾಗಿತ್ತು. ಅದರಲ್ಲಿ ಅರ್ಹ 600 ಫಲಾನುಭವಿಗಳನ್ನು ಆಯ್ಕೆ ಮಾಡಿದೆ. ಸರ್ಕಾರದ ಮಾರ್ಗಸೂಚಿಯಂತೆ ಮೀಸಲಾತಿ ಅಡಿಯಲ್ಲಿ ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು. ನಂತರ ಆಯ್ಕೆಯಾದ ಫಲಾನುಭವಿಗಳ ಪಟ್ಟಿಯ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಒಂದು ತಿಂಗಳ ಕಾಲಾವಕಾಶ ನೀಡಲಾಗುವುದು. ಎಲ್ಲವನ್ನು ಪಾರದರ್ಶಕವಾಗಿ ಮಾಡಲಾಗುತ್ತಿದೆ. ಈಗಾಗಲೇ ಜಿಲ್ಲಾಧಿಕಾರಿಗೆ ಸಮಗ್ರ ವರದಿಯನ್ನು ಸಲ್ಲಿಸಲಾಗಿದೆ. ನಿಜವಾದ ಫಲಾನುಭವಿಗಳಿಗೆ ಸೂರು ನೀಡುವುದು ನಮ್ಮ ಮೊದಲ ಆದ್ಯತೆಯಾಗಿದೆ. ಅನವಶ್ಯಕವಾಗಿ ಅಭಿವೃದ್ದಿ ಕೆಲಸಗಳಿಗೆ ಅಡ್ಡಗಾಲು ಹಾಕಬೇಡಿ ಎಂದರು.

ADVERTISEMENT

ಅಲ್ಲದೆ ಈಗಾಗಲೇ ಹಕ್ಕು ಪತ್ರ ಹೊಂದಿರುವ 132 ಫಲಾನುಭವಿಗಳಿಗೆ ನಿವೇಶನಗಳನ್ನು ನಗರದ ಫಿಲ್ಟರ್ ಬೆಡ್ ಪ್ರದೇಶದಲ್ಲಿ ನೀಡಲಾಗುವುದು. ಈಗಾಗಲೇ ಸಿದ್ದವಾಗಿರುವ 200 ಸ್ಲಂ ಬೋರ್ಡ್ ಮನೆಯನ್ನು ತ್ವರಿತವಾಗಿ ಹಂಚಿಕೆ ಮಾಡಲಾಗುವುದು. ಅಲ್ಲದೇ ಇನ್ನೂ ಹೆಚ್ಚುವರಿಯಾಗಿ ಎಂಟು ಎಕರೆ ಜಮೀನು ಖರೀದಿಸಿ ಇನ್ನುಳಿದ ಫಲಾನುಭವಿಗಳಿಗೆ ಹಂತ ಹಂತವಾಗಿ ನಿವೇಶನ ವಿತರಿಸಲಾಗುವುದು. ಯಾರು ಬೇಸರ ಪಟ್ಟುಕೊಳ್ಳುವ ಅಗತ್ಯವಿಲ್ಲ ಎಂದರು.

ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಫಟಕದ ಅಧ್ಯಕ್ಷ ಚಂದ್ರಶೇಖರ ಆರಬೋಳ, ಆಶ್ರಯ ಸಮಿತಿ ಅಧ್ಯಕ್ಷ ವಸಂತ ಸುರಪುರಕರ್, ಸದಸ್ಯರಾದ ಅಮೃತ ಹೂಗಾರ, ಧರ್ಮಣ್ಣ,ನೂರುಲ್ ಹಸನ್ ಬಾಬಾ, ಪೌರಾಯುಕ್ತ ರಮೇಶ ಬಡಿಗೇರ, ಹಾಗೂ ಪಕ್ಷದ ಹಿರಿಯ ಮುಖಂಡರಾದ ಮರಿಗೌಡ ಪಾಟೀಲ್,ಗುರುನಾಥರಡ್ಡಿ ಪಾಟೀಲ್, ಶರಣಪ್ಪ ಸಲಾದಪುರ, ಸಿದ್ದಲಿಂಗಣ್ಣ ಆನೇಗುಂದಿ, ಅಯ್ಯಣ್ಣ ಕನ್ಯಾಕೊಳ್ಳೂರ, ಸೋಮಣ್ಣ,ಚಂದ್ರಶೇಖರ ಲಿಂಗದಳ್ಳಿ, ನೀಲಕಂಠ ಬಡಿಗೇರ, ಹಣಮಂತರಾಯಗೌಡ ರಾಕಂಗೇರಾ, ವೆಂಕಟರಡ್ಡಿ ಹಳಿಸಗರ ಗುಂಡಪ್ಪ ತುಂಬಿಗಿ, ವಿಜಯಕುಮಾರ, ಇಸ್ಮಾಯಿಲ್ ಚಾಂದ್, ಶಾಂತಪ್ಪ ಗುತ್ತೇದಾರ ಹಾಜರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.