ADVERTISEMENT

'ಅತಿವೃಷ್ಟಿಯಿಂದ ಉತ್ತರ ಕರ್ನಾಟಕದಲ್ಲಿ ₹15 ಸಾವಿರ ಕೋಟಿ ನಷ್ಟ'

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2020, 16:46 IST
Last Updated 20 ಅಕ್ಟೋಬರ್ 2020, 16:46 IST
ಸುರಪುರಕ್ಕೆ ಮಂಗಳವಾರ ಭೇಟಿ ನೀಡಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಅವರನ್ನು ಶಾಸಕ ರಾಜೂಗೌಡ ಸನ್ಮಾನಿಸಿದರು
ಸುರಪುರಕ್ಕೆ ಮಂಗಳವಾರ ಭೇಟಿ ನೀಡಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಅವರನ್ನು ಶಾಸಕ ರಾಜೂಗೌಡ ಸನ್ಮಾನಿಸಿದರು   

ಸುರಪುರ: ‘ಕಲ್ಯಾಣ ಕರ್ನಾಟಕ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಅತಿವೃಷ್ಟಿಯಿಂದ ₹15 ಸಾವಿರ ಕೋಟಿ ಹಾನಿಯಾಗಿರುವ ಬಗ್ಗೆ ಅಂದಾಜಿಸಲಾಗಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಹೇಳಿದರು.

ಶಾಸಕ ರಾಜೂಗೌಡ ಅವರ ನಿವಾಸದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಲ್ಯಾಣ ಕರ್ನಾಟಕದ ಬಹುತೇಕ ಪ್ರದೇಶಗಳಿಗೆ ಭೇಟಿ ನೀಡಿದ್ದೇನೆ. ಒಂದೇ ವರ್ಷದಲ್ಲಿ 3 ಬಾರಿ ಪ್ರವಾಹ ಬಂದು ಈ ಭಾಗದ ರೈತರನ್ನು ಹೈರಾಣಾಗಿಸಿದೆ. 5 ಲಕ್ಷ ಹೆಕ್ಟೇರ್ ಬೆಳೆ ನಷ್ಟವಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಮನೆಗಳು ಬಿದ್ದಿವೆ’ ಎಂದರು.

‘ಬೆಳೆ ನಷ್ಟ ಮತ್ತು ಮನೆ ಬಿದ್ದಿರುವ ಕುರಿತು ಸಮೀಕ್ಷೆ ನಡೆದಿದೆ. ಪ್ರವಾಹ ನಿಂತ ನಂತರ ಹಾನಿ ಕುರಿತು ಸ್ಪಷ್ಟ ವರದಿ ಕೈಸೇರಲಿದೆ. ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಅಂದಾಜು ಮಾಹಿತಿ ನೀಡಿದ್ದಾರೆ. ಈ ವರದಿ ಅಂತಿಮವಲ್ಲ. ಸರ್ವೆ ನಂತರ ಹೆಚ್ಚಾಗಬಹುದು’ ಎಂದು ತಿಳಿಸಿದರು.

ADVERTISEMENT

‘ಯಾದಗಿರಿ ಜಿಲ್ಲೆಯಲ್ಲಿ 2 ಸಾವಿರ ಹೆಕ್ಟೇರ್ ಭತ್ತ, ಹತ್ತಿ, ತೊಗರಿ, ಸಜ್ಜೆ, ಮೆಣಸಿನಕಾಯಿ ಸೇರಿದಂತೆ ಅಂದಾಜು 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. 700ಕ್ಕೂ ಹೆಚ್ಚು ಮನೆಗಳು ಕುಸಿದಿದ್ದು, ಸುಮಾರು ₹200 ಕೋಟಿಯಷ್ಟು ನಷ್ಟವಾಗಿದೆ’ ಎಂದರು.

‘ಪ್ರವಾಹದಿಂದ ಸಂಕಷ್ಟ ಎದುರಿಸುತ್ತಿರುವ ಈ ಭಾಗದ 177 ಗ್ರಾಮಗಳನ್ನು ಸ್ಥಳಾಂತರಿಸಲು ಸಂಸದರು, ಸಚಿವರು, ಶಾಸಕರು ಶಿಫಾರಸ್ಸು ಮಾಡಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಸೂಕ್ತ ನಿರ್ಧಾರ ಕೈಗೊಳಲಿದ್ದಾರೆ. ಮನೆ ಕಳೆದುಕೊಂಡವರಿಗೆ ₹5 ಲಕ್ಷ, ಭಾಗಶಃ ಮನೆಗೆ ₹2 ಲಕ್ಷ ಪರಿಹಾರ ನೀಡಲಾಗುವುದು. ಈಗಾಗಲೇ ಮನೆ ಕಳೆದುಕೊಂಡ ಫಲಾನುಭವಿಗಳ ಬ್ಯಾಂಕ್ ಖಾತೆಗೆ ತ್ವರಿತ ಪರಿಹಾರ ₹10 ಸಾವಿರ ಹಾಕುವ ಕಾರ್ಯ ನಡೆದಿದೆ’ ಎಂದರು.

‘ವಿಧಾನ ಪರಿಷತ್ ಮತ್ತು ವಿಧಾನ ಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಶಿರಾದಲ್ಲಿ ಈ ಬಾರಿ ಪಕ್ಷ ದಾಖಲೆ ಗೆಲುವು ಪಡೆಯಲಿದೆ. ಪಕ್ಷದಲ್ಲಿ ಸಂಘ ಪರಿವಾರದವರಿಗೆ ಆದ್ಯತೆ ಇದೆ. ಹಿಂದುಳಿದವರನ್ನು ತುಳಿಯಲಾಗುತ್ತಿದೆ ಎಂಬುದು ತಪ್ಪು ಕಲ್ಪನೆ’ ಎಂದರು.

‘ಶ್ರೀರಾಮುಲು ಅವರಿಂದ ಖಾತೆ ಕಿತ್ತುಕೊಂಡಿಲ್ಲ. ಅಭಿವೃದ್ಧಿ ವೇಗ ಹೆಚ್ಚಿಸಲು ಖಾತೆ ಬದಲಾವಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅವರಿಗೂ ಮತ್ತು ಶಾಸಕ ರಾಜೂಗೌಡ ಅವರಿಗೂ ಹೆಚ್ಚಿನ ಸ್ಥಾನಮಾನ ಸಿಗಬಹುದು’ ಎಂಬ ಸುಳಿವು ನೀಡಿದರು.

ಶಾಸಕರಾದ ರಾಜೂಗೌಡ, ರಾಜಕುಮಾರ ಪಾಟೀಲ ತೇಲ್ಕೂರ, ವೆಂಕಟರೆಡ್ಡಿಗೌಡ ಮುದ್ನಾಳ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶರಣಭೂಪಾಲರೆಡ್ಡಿ ನಾಯ್ಕಲ್, ತಾಲ್ಲೂಕು ಘಟಕದ ಅಧ್ಯಕ್ಷ ಮೇಲಪ್ಪ ಗುಳಗಿ, ಅಮರಣ್ಣ ಹುಡೇದ, ದೇವರಾಜ ನಾಯ್ಕ, ದೇವಿಂದ್ರ ನಾದ್, ರಾಜಾ ಹನುಮಪ್ಪ ನಾಯಕ ತಾತಾ, ಬಿ.ಎಂ ಹಳ್ಳಿಕೋಟಿ, ಭೀಮಾಶಂಕರ ಬಿಲ್ಲವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.