ಶಹಾಪುರ: ತಾಲ್ಲೂಕಿನ ಕೊಳ್ಳೂರ(ಎಂ) ಗ್ರಾಮದ ಬಳಿ ಕೃಷ್ಣಾ ನದಿ ಸೇತುವೆ ಎತ್ತರಿಸುವ ಯೋಜನೆ ನೆನೆಗುದಿಗೆ ಬಿದ್ದಿದೆ.
ಪ್ರತಿ ವರ್ಷ ಅಗಸ್ಟ್ ಮತ್ತು ಸೆಪ್ಟಂಬರ ತಿಂಗಳಲ್ಲಿ ಕೃಷ್ಣಾ ನದಿ ಪ್ರವಾಹ ಸಾಮಾನ್ಯ. ಆಗ ನಮಗೆ ನೆನಪಾಗುವುದು ಕೊಳ್ಳೂರು ಸೇತುವೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಸದರು ಪ್ರತಿ ವರ್ಷ ಪ್ರವಾಹ ಬಂದಾಗ ಸೇತುವೆಗೆ ಭೇಟಿ ನೀಡಿ ಸೇತುವೆ ಎತ್ತರಿಸಲು ಅಗತ್ಯ ಅಂದಾಜುಪಟ್ಟಿ ಸಿದ್ದಪಡಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿ ಎಂದು ಹೇಳಿ ಮೂಲಕ ಜಾರಿಕೊಳ್ಳುತ್ತಾರೆ. ಆದರೆ ಕಾರ್ಯಯೋಜನೆ ಮಾತ್ರ ಕೈಗೂಡುತ್ತಿಲ್ಲ. ನದಿಯ ನೀರನ್ನು ನಂಬಿ ಬದುಕು ಹಸನಾಗಲಿ ಎನ್ನುವ ಆಸೆಯಿಂದ ಜೀವನ ಸಾಗುಸುತ್ತಿರುವ ರೈತರಿಗೆ ಪ್ರವಾಹದ ರಕ್ಕಸ ನೀರಿನಿಂದ ಅದರಲ್ಲಿ ಬದುಕು ಮುಳುಗಿ ಹೋಗುತ್ತಲಿದೆ ಎನ್ನುತ್ತಾರೆ ರೈತ ಶಿರಸನಗೌಡ.
ಎರಡು ದಿನದ ಹಿಂದೆ ಇಂದನ ಸಚಿವ ಸುನಿಲಕುಮಾರ ಆಗಮಿಸಿ ಕೊಳ್ಳೂರ(ಎಂ) ಗ್ರಾಮದ ಬಳಿಯ ವಿದ್ಯುತ್ ಉಪ ಕೇಂದ್ರ ಉದ್ಘಾಟಿಸಿ ತೆರಳಿದರು. ಆದರೆ ಪ್ರವಾಹದ ಸಂಕಷ್ಟದ ಹಾಗೂ ಮುಂದೆ ಕೈಗೊಳ್ಳಬೇಕಾದ ಯೋಜನೆಯ ಬಗ್ಗೆ ಕಿಂಚತ್ತು ಮಾತನಾಡಲಿಲ್ಲ. ಶಾಸಕರು ಕೂಡಾ ಅದರ ಬಗ್ಗೆ ಚಕಾರ ಎತ್ತಲಿಲ್ಲ. ನಮ್ಮ ಗೋಳು ಯಾರು ಕೇಳುತ್ತಿಲ್ಲ ಎಂದು ಪ್ರವಾಹದ ಸಂಕಷ್ಟದ ಭೀತಿಯಲ್ಲಿ ಜೀವನ ನಡೆಸುತ್ತಿರುವ ಜನತೆ ಆರೋಪಿಸಿದರು.
ಪ್ರವಾಹ ಪರಿಸ್ಥಿತಿಯನ್ನು ಪ್ರತಿ ವರ್ಷ ಎದುರಿಸುವ ಗ್ರಾಮಗಳಿಗೆ ಶಾಶ್ವತ ಪರಿಹಾರಗಳನ್ನು ಸರ್ಕಾರ ಒದಗಿಸುವ ಮೂಲಕ ಅವರ ಜೀವನಕ್ಕೆ ಭದ್ರತೆಯ ಆಸರೆ ನೀಡಬೇಕು ಎಂದು ಪ್ರವಾಹದ ಭೀತಿಯಲ್ಲಿರುವ ಯಕ್ಷಿಂತಿ, ಗೌಡೂರ ಜನತೆ ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.