ಯಾದಗಿರಿ: ‘ಸಮಾಜದಲ್ಲಿ ಮಹಿಳೆಯರು ಸಮಾನತೆ ಸಾಧಿಸಲು ವಿದ್ಯಾವಂತರಾಗಬೇಕು. ಮಹಿಳೆಯರು ಶಿಕ್ಷಣ ಶಕ್ತಿಯಿಂದ ಮಾತ್ರ ಸಮಾನತೆ ಸಾಧಿಸಲು ಸಾಧ್ಯ’ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಕರೆ ನೀಡಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳಾ ಸಮಾಖ್ಯಾ ಕರ್ನಾಟಕ ಜಿಲ್ಲಾ ಘಟಕ ಆಶ್ರಯದಲ್ಲಿ ಬುಧವಾರ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಅನಾದಿ ಕಾಲದಿಂದಲೂ ಸೂಚಿಸಿರುವಂತೆ ದೇಶದ ಪ್ರಗತಿಯಾಗಬೇಕಾದರೆ ಮಹಿಳೆಯರ ಪಾತ್ರ ಮತ್ತು ಸಾಧನೆ ಅಪಾರವಾಗಿದೆ. ಕ್ಷೇತ್ರವಾರು ಸಮೀಕ್ಷೆ ಪ್ರಕಾರ ಪರಿಗಣಿಸುವುದಾದರೆ ದೇಶ-ವಿದೇಶಗಳಲ್ಲಿ ಮಿಲಿಟರಿ, ಪೈಲಟ್, ಡ್ರೈವರ್ ಹೀಗೆ ಎಲ್ಲಾ ವೃತ್ತಿಗಳಲ್ಲಿ ಮಹಿಳೆಯರ ಪ್ರಗತಿ ಸಾಧನೆಯತ್ತಾ ಮುನ್ನುಗ್ಗುತ್ತಾ ಇದ್ದಾರೆ. ಮಹಿಳೆಯರ ಸಾಧನೆ, ಸಂಕಲ್ಪ ಮತ್ತು ಗುರಿ ಎಲ್ಲದಕ್ಕೂ ಮಿಗಿಲಾದದ್ದು’ ಎಂದು ಅಭಿಪ್ರಾಯಪಟ್ಟರು.
‘ಮಹಿಳೆಯರ ಅಭಿವೃದ್ಧಿಗಾಗಿಯೇ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದು, ಅದನ್ನು ಸರಿಯಾಗಿ ಬಳಸಿಕೊಂಡು ಆರ್ಥಿಕ, ಸಾಮಾಜಿಕವಾಗಿ ಸಬಲರಾಗಬೇಕು’ ಎಂದು ಹೇಳಿದರು.
‘ಜಿಲ್ಲೆಯ ಮಹಿಳೆಯರ ಸಮಗ್ರ ಅಭಿವೃದ್ಧಿಗಾಗಿ ಜಿಲ್ಲಾಡಳಿತದಿಂದ ಸಂಪೂರ್ಣ ಬೆಂಬಲವಿದ್ದು, ಅಗತ್ಯ ನೆರವನ್ನು ಕಾಲ ಕಾಲಕ್ಕೆ ನೀಡಲಾಗುವುದು’ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ ಮಾತನಾಡಿ, ‘ಜಿಲ್ಲೆಯ ಯಾವುದೇ ಊರಿನಲ್ಲಿ ಹೆಣ್ಣುಮಕ್ಕಳು ಶಾಲೆ ಬಿಟ್ಟಿದ್ದರೆ, ಪುನಃ ಅವರನ್ನು ಶಾಲೆಗೆ ಕರೆತರುವ ಕೆಲಸ ಮಾಡಬೇಕು. ಗರ್ಭಿಣಿಯರಿಗೆ ಕಬ್ಬಿಣ ಅಂಶದ ಮಾತ್ರೆಗಳನ್ನು ಸೇವನೆ ಕುರಿತು ಅವರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ’ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಪ್ರಭಾಕರ ಕವಿತಾಳ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜು ಬಾವಿಹಳ್ಳಿ, ಮಹಿಳಾ ಸಮಾಖ್ಯಾ ಕಾರ್ಯಕ್ರಮದ ನಿರ್ದೇಶಕಿ ಮಂಜುಳಾ.ವಿ, ಮಹಿಳಾ ಸಮಾಖ್ಯಾ ಕಾರ್ಯಕ್ರಮದ ಕಿರಿಯ ಸಂಪನ್ಮೂಲ ವ್ಯಕ್ತಿ ಕರುಣಾ ಕುಲಕರ್ಣಿ, ವಿಮಲಾಕ್ಷಿ ಆರ್. ಹಿರೇಮಠ, ಲಕ್ಷ್ಮಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.