ADVERTISEMENT

ಬಿತ್ತನೆಗೆ ಮುನ್ನ ಬೀಜೋಪಚಾರ ಮಾಡಲು ರೈತರಿಗೆ ಸಲಹೆ

ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಆನ್‌ಲೈನ್‌ ಮೂಲಕ ರೈತರಿಗೆ ತರಬೇತಿ

​ಪ್ರಜಾವಾಣಿ ವಾರ್ತೆ
Published 25 ಜೂನ್ 2021, 4:22 IST
Last Updated 25 ಜೂನ್ 2021, 4:22 IST
ಸುರಪುರ ತಾಲ್ಲೂಕಿನ ಕವಡಿಮಟ್ಟಿಯಲ್ಲಿರುವ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಆನ್‌ಲೈನ್‌ ಮೂಲಕ ತರಬೇತಿ ಹಮ್ಮಿಕೊಳ್ಳಲಾಗಿತ್ತು
ಸುರಪುರ ತಾಲ್ಲೂಕಿನ ಕವಡಿಮಟ್ಟಿಯಲ್ಲಿರುವ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಆನ್‌ಲೈನ್‌ ಮೂಲಕ ತರಬೇತಿ ಹಮ್ಮಿಕೊಳ್ಳಲಾಗಿತ್ತು   

ಯಾದಗಿರಿ: ಕೃಷಿ ಮತ್ತು ತೋಟಗಾರಿಕೆ ಬೆಳೆಗಳನ್ನು ಬಾಧಿಸುವ ರೋಗಗಳಿಗೆ ಕಾರಣವಾದ ರೋಗಾಣುಗಳು ಬೀಜ, ಮಣ್ಣು, ಕೀಟ, ನೀರು ಮತ್ತು ಗಾಳಿಯ ಮೂಲಕ ಪಸರಿಸುವುದರಿಂದ ರೈತರು ಬಿತ್ತನೆ ಮಾಡುವ ಮುನ್ನ ಬೀಜೋಪಚಾರ ಮಾಡಬೇಕು ಎಂದು ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ವೈ.ಎಸ್.ಅಮರೇಶ ತಿಳಿಸಿದರು.

ಸುರಪುರ ತಾಲ್ಲೂಕಿನ ಕವಡಿಮಟ್ಟಿಯಲ್ಲಿರುವ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಆನ್‌ಲೈನ್‌ ಮೂಲಕ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬೆಳೆರೋಗಗಳನ್ನು ನಿಯಂತ್ರಿಸಲು ಅನೇಕ ರಸಾಯನಿಕ, ಜೈವಿಕ ಹಾಗೂ ಇತರೆ ರೋಗನಾಶಕ ವಸ್ತುಗಳನ್ನು ಬಳಸುವುದು ಸರ್ವೆ ಸಾಮಾನ್ಯ. ಆದರೆ, ರೈತರು ಅತಿಯಾದ ಮತ್ತು ಅಸಮರ್ಪಕವಾದ ರಸಾಯನಿಕ ರೋಗನಾಶಕಗಳನ್ನು ಬಳಸುವುದರಿಂದ ಪರಿಸರ, ಜಲ ಮತ್ತು ವಾಯುಮಾಲಿನ್ಯ ಹೆಚ್ಚಾಗಿ ತಿನ್ನುವ ಆಹಾರವೂ ವಿಷವಾಗುವುದು. ಇದಲ್ಲದೇ ಶಿಲೀಂದ್ರಗಳಲ್ಲಿ ಶಿಲೀಂದ್ರನಾಶಕ ನಿರೋಧಕ ಶಕ್ತಿ ಕಂಡುಬರುವುದು ಇಂಥ ದುಷ್ಪಣಾಮದಿಂದ ಜೈವಿಕನಾಶಕಗಳ ಬಳಕೆ ಹೆಚ್ಚಾಗುತ್ತದೆ ಎಂದರು.

ADVERTISEMENT

ಜೈವಿಕ ನಿಯಂತ್ರಣ ವಿಭಾಗದ ಮುಖ್ಯಸ್ಥ ಡಾ.ಅರುಣಕುಮಾರ ಹೊಸಮನಿ ಮಾತನಾಡಿ, ಕೀಟ ಮತ್ತು ರೋಗಗಳನ್ನು ನಿಯಂತ್ರಿಸುವಲ್ಲಿ ಜೈವಿಕ ವಿಧಾನಗಳ ಅಳವಡಿಕೆಯು ಶತಮಾನಗಳ ಇತಿಹಾಸ ಹೊಂದಿದೆ ಎಂದು ಹೇಳಿದರು.

ಜಾಗತಿಕ ಮಟ್ಟದಲ್ಲಿ ನೈಸರ್ಗಿಕವಾಗಿ ಬೆಳೆದ ಕೃಷಿ ಉತ್ಪನ್ನಗಳಿಗೆ ಬೇಡಿಕೆ ತೀವ್ರವಾಗಿ ಏರುತ್ತಿರುವ ಹಿನ್ನೆಲೆಯಲ್ಲಿ, ಜೈವಿಕ ವಿಧಾನಗಳನ್ನು ಕ್ರಮಬದ್ಧವಾಗಿ ಅಳವಡಿಸಿ, ಕೀಟ ನಿರ್ವಹಿಸಿ ಬೆಳೆಯುವುದರಿಂದ ಉತ್ತಮ ಫಸಲನ್ನು ಪಡೆಯಬಹುದು. ರೋಗಕಾರದ ಶಿಲೀಂದ್ರಗಳಾದ ಬೆವೆರಿಯಾ, ಮೆಟಾರೈಜಿಯಂ, ನೊಮುರಿಯಾ, ವರ್ಟಿಸಿಲಿಯೊ, ಹಿರ್ಸುಟಿಲ್ಲಾ ಮತ್ತು ಪೆಸಿಲೋಮೈಸಿಸ್ ಇರುವ ಜೈವಿಕ ಶಿಲೀಂದ್ರನಾಶಕಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.

ತರಬೇತಿಯ ಆಯೋಜಕ ಡಾ.ಗುರುಪ್ರಸಾದ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲೆ ಸುಮಾರು 29ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.