ಶಹಾಪುರ: ಬಲವಂತದಿಂದ ಹಣ ಮತ್ತು ಚಿನ್ನದ ಸರ ಕಿತ್ತುಕೊಂಡ ಆರೋಪದ ಮೇಲೆ ಜೇವರ್ಗಿ ಠಾಣೆಯ ಪಿಎಸ್ಐ ಸಂಗಮೇಶ ಅಂಗಡಿ, ಪೋಲಿಸ್ ಕಾನ್ಸ್ಟೆಬಲ್ ಆನಂದ, ಜೇವರ್ಗಿಯ ಶರಣು ಕೋಬಾಳ ಮತ್ತು ಮರೆಪ್ಪ ಕೋಬಾಳ ಎಂಬುವರ ವಿರುದ್ಧ ಶಹಾಪುರ ಪೊಲೀಸ್ ಠಾಣೆಯಲ್ಲಿ ಗುರುವಾರ ದರೋಡೆ ಪ್ರಕರಣ ದಾಖಲಾಗಿದೆ.
‘ತಾಲ್ಲೂಕಿನ ಗೌಡೂರ ಗ್ರಾಮದ ಬಳಿ ಶನಿವಾರ ಟಿಪ್ಪರ್ನಲ್ಲಿ ಮರಳು ತುಂಬಿಕೊಳ್ಳುವಾಗ ಕಾನ್ಸ್ಟೆಬಲ್ ಆನಂದ, ಶರಣು, ಮರೆಪ್ಪ ಎಂಬುವರು ಪಿಎಸ್ಐ ಸಂಗಮೇಶ ಅಂಗಡಿ ಕರೆದಿದ್ದಾರೆ ಎಂದು ಕರೆದೊಯ್ದು ಜೇಬಿನಲ್ಲಿದ್ದ ₹ 64 ಸಾವಿರ ಕಸಿದುಕೊಂಡಿದ್ದಾರೆ. ನಂತರ ಕೆಳಗಡೆ ಬಿದ್ದ ₹ 75 ಸಾವಿರ ಮೌಲ್ಯದ 15 ಗ್ರಾಂ ಚಿನ್ನದ ಸರ ತೆಗೆದುಕೊಂಡಿದ್ದಾರೆ. ಆನಂದ ಎಂಬುವರು ಟಿಪ್ಪರ್ ಚಾಲನೆ ಮಾಡಿಕೊಂಡು ಮುಂದೆ ಸಾಗಿದರೆ, ಅದರ ಹಿಂದೆ ಕಾರಿನಲ್ಲಿ ಕೂರಿಸಿಕೊಂಡು ಜೇವರ್ಗಿ ಠಾಣೆ ಹತ್ತಿರ ಬಿಟ್ಟು ಹೋಗಿದ್ದಾರೆ’ ಎಂದು ಟಿಪ್ಪರ್ ಚಾಲಕ ಹಣಮಂತರಾಯ ಮಕಾಶಿ ದೂರಿನಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.