ಸೈದಾಪುರ: ಬಸಾಪುರ ಗ್ರಾಮದ ಆಂಜನೇಯ ಸ್ವಾಮಿಯ ರಥೋತ್ಸವ ಗುರುವಾರ ಅದ್ಧೂರಿಯಾಗಿ ಜರುಗಿತು.
ಮೂರು ದಿನಗಳ ಜಾತ್ರೆಯಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳ ಜತೆಗೆ ಅಗ್ನಿ ಪ್ರವೇಶ, ಉಚ್ಛಾಯ ಹಾಗೂ ರಥೋತ್ಸವ ನಡೆದವು.
ಇಡ್ಲೂರ ಗ್ರಾಮಸ್ಥರಿಂದ ತೆಂಗಿನ ಗರಿ ಹಾಗೂ ಜ್ಯೋತಿ ಬಂದ ನಂತರ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ತೀರ ಹಳ್ಳಿಗಾಡು ಪ್ರದೇಶ ಇದಾಗಿರುವುದರಿಂದ ಬಹುತೇಕ ಭಕ್ತರು ಎತ್ತಿನ ಬಂಡಿಗಳಲ್ಲಿ ಕುಟುಂಬ ಸಮೇತರಾಗಿ ಬಂದು ದೇವರಿಗೆ ಜ್ಯೋತಿ ಹಾಗೂ ನೈವೇದ್ಯ ಅರ್ಪಿಸಿದರು.
ಬಸಾಪುರ ಚಿಕ್ಕ ಗ್ರಾಮವಾದರೂ ಆಂಜನೇಯ ದೇವಸ್ಥಾನ ಪ್ರಸಿದ್ಧವಾಗಿದೆ ಎನ್ನುತ್ತಾರೆ ದೇವಸ್ಥಾನದ ಭಕ್ತ ಹಣಮಂತ ವಡವಟ್. ಜಾತ್ರೆಯ ನಿಮಿತ್ತ ದೇವಸ್ಥಾನವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ನೆರೆಯ ತೆಲಂಗಾಣ ಮತ್ತು ಆಂಧ್ರಪ್ರದೇಶಗಳಿಂದ ಭಕ್ತರು ಆಗಮಿಸಿದ್ದರು. ರಾತ್ರಿ ಭಜನಾ ಕಾರ್ಯಕ್ರಮ ಹಾಗೂ ಕೈಕುಸ್ತಿ ಸ್ಪರ್ಧೆಗಳನ್ನು ಜರುಗಿದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.